ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ (ವಿರಾಟ ಪರ್ವ, ೭ ಸಂಧಿ, ೪೬ ಪದ್ಯ)
ತಾತ್ಪರ್ಯ:
ಉತ್ತರನು, ಹೌದು ನಿಮಗಲ್ಲದೆ ಉಳಿದವರಿಗೆ ಇಂತಹ ಹಿರಿಮೆ ಎಲ್ಲಿಂದ ಬಂದೀತು? ಶಿವ ಶಿವಾ ನಾನು ಮೊದಲೇ ಹೇಳಿದಂತೆ, ಬದುಕಿದ್ದರೆ ಎಂತಹ ಆಶ್ಚರ್ಯವನ್ನಾದರೂ ನೋಡಬಹುದು, ನಿನ್ನೊಡನೆ ನಾನು ವರ್ತಿಸಿದ ರೀತಿ ಆಡಿದ ಮಾತುಗಳ ತಪ್ಪುಗಳನ್ನೇ ಭಾವಿಸದೆ, ನನ್ನನ್ನು ಕುಹಕಿಯೆನ್ನದೆ ಕಾಪಾಡು ಎಂದು ನಮಸ್ಕರಿಸಿದನು.
ಅರ್ಥ:
ಬಳಿಕ: ನಂತರ; ಉಳಿದ: ಮಿಕ್ಕ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಕಾಣು: ತೋರು; ಜೀವಿಸು: ಬಾಳು; ಅತಿಶಯ: ಹೆಚ್ಚು; ಗಹನ: ದಟ್ಟವಾದ, ನಿಬಿಡವಾದ; ನುಡಿ: ಮಾತಾಡು; ತಪ್ಪು: ಸರಿಯಲ್ಲದ; ಬಹಳ: ಅಧಿಕ, ಹೆಚ್ಚು; ಭಾವಿಸು: ತಿಳಿ; ಕುಹಕ: ಮೋಸ, ವಂಚನೆ; ಕಾಯ: ರಕ್ಷಿಸು; ಎರಗು: ನಮಸ್ಕರಿಸು, ಬಾಗು; ಪದ: ಪಾದ, ಚರಣ;
ಪದವಿಂಗಡಣೆ:
ಅಹುದು +ಬಳಿಕೇನ್+ಉಳಿದವರಿಗ್+ಈ
ಮಹಿಮೆ +ತಾನೆಲ್ಲಿಯದು +ಕಾಣಲು
ಬಹುದಲಾ +ಜೀವಿಸಿದರ್+ಅತಿಶಯವನು +ಮಹಾದೇವ
ಗಹನ+ ಮಾಡದೆ +ನುಡಿದ +ತಪ್ಪಿನ
ಬಹಳತೆಯ +ಭಾವಿಸದೆ +ತನ್ನನು
ಕುಹಕಿಯೆನ್ನದೆ+ ಕಾಯಬೇಕೆಂದ್+ಎರಗಿದನು +ಪದಕೆ
ಅಚ್ಚರಿ:
(೧) ಉತ್ತರನು ತನ್ನನ್ನು ಕ್ಷಮಿಸು ಎಂದು ಹೇಳುವ ಪರಿ – ನುಡಿದ ತಪ್ಪಿನ ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು