ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ನಿಯರ ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇ ಈ
ಗನ್ನಗತಕವ ನಾನು ಬಲ್ಲೆನು ಬಿಟ್ಟು ಕಳುಹೆಂದ (ವಿರಾಟ ಪರ್ವ, ೭ ಸಂಧಿ, ೩೦ ಪದ್ಯ)
ತಾತ್ಪರ್ಯ:
ನನ್ನಂತಹ ರಾಜಪುತ್ರನಿಗೇ ಈ ಸೈನ್ಯವನ್ನು ಮುಖವೆತ್ತಿ ನೋಡಲಾಗುತ್ತಿಲ್ಲ, ಅದರಲ್ಲಿ ನೀನು ನನ್ನನ್ನು ಸಾರಥಿಯಾಗಿ ಮಾಡಿಕೊಂಡು ಯುದ್ಧವನ್ನು ಮಾಡಿ ಗೆಲ್ಲುವೆಯಾ? ಲೋಕದ ಜನ ಕಂಡವರಲ್ಲಿ ತಪ್ಪೆಣಿಸುತ್ತಾರೆ, ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದಿಲ್ಲ, ನಿನ್ನ ಮೋಸ ನನಗೆ ಗೊತ್ತು, ನನ್ನನ್ನು ಬಿಟ್ಟು ಬಿಡು ಎಂದು ಉತ್ತರನು ಕೇಳಿದನು.
ಅರ್ಥ:
ರಾಜಪುತ್ರ: ರಾಜಕುಮಾರ; ಮೊಗಸು: ತೊಡಗುವಿಕೆ; ಸಾರಥಿ: ಸೂತ; ಬಲ: ಸೈನ್ಯ; ಜಯಿಸು: ಗೆಲ್ಲು; ಅನ್ನಿಗ: ಅನ್ನ ಬೇರೆಯ; ಮನ: ಮನಸ್ಸು; ಕಾಂಬು: ನೋಡು; ಗನ್ನಗತಕ: ಮೋಸ, ವಂಚನೆ; ಬಲ್ಲೆ: ತಿಳಿದಿರುವೆ; ಬಿಟ್ಟು: ತೊರೆ; ಕಳುಹು: ಕಳಿಸು, ಬೀಳ್ಕೊಡು;
ಪದವಿಂಗಡಣೆ:
ಎನ್ನವಂದಿಗ +ರಾಜಪುತ್ರರಿಗ್
ಇನ್ನು +ಮೊಗಸಲು +ಬಾರದಿದೆ+ ನೀನ್
ಎನ್ನ +ಸಾರಥಿ+ ಮಾಡಿಕೊಂಡ್+ಈ+ ಬಲವ+ ಜಯಿಸುವೆಯ
ಅನ್ನಿಯರ +ಮನಗಾಂಬರಲ್ಲದೆ
ತನ್ನ +ತಾ +ಮನಗಾಂಬರೇ+ ಈ
ಗನ್ನಗತಕವ+ ನಾನು+ ಬಲ್ಲೆನು+ ಬಿಟ್ಟು +ಕಳುಹೆಂದ
ಅಚ್ಚರಿ:
(೧) ಮೋಸಕ್ಕೆ ಗನ್ನಗತಕ ಪದದ ಬಳಕೆ
(೨) ಉತ್ತರನ ನುಡಿ – ಅನ್ನಿಯರ ಮನಗಾಂಬರಲ್ಲದೆ ತನ್ನ ತಾ ಮನಗಾಂಬರೇ