ಆತನಿಂಗಿತದನುವನಿಅರಿದು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯಊರಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೨೩ ಪದ್ಯ)
ತಾತ್ಪರ್ಯ:
ಧರ್ಮಜನು ಭೀಮನ ಮನಸ್ಸಿನ ಭಾವನೆಯನ್ನರಿತು, ವಲಲ ದುಡುಕಬೇಡ, ತಾಳ್ಮೆಯಿಂದಿರು, ಆ ಮರವನ್ನು ಬೀಳಿಸಬೇಡ, ಊರಿನ ಸಜ್ಜನರು ಇದರಡಿ ಕುಳಿತಿರುತ್ತಾರೆ, ಊರ ಹೊರಗೆ ಒಣಗಿದ ಮರವಿದೆ ಅದನ್ನು ತರಿಸಿಕೋಮ್ಡು ಅಡುಗೆ ಮಾಡು ಎಂದನು.
ಅರ್ಥ:
ಇಂಗಿತ: ಭಾವನೆ; ಅನುವು: ರೀತಿ; ಅರಿ: ತಿಳಿ; ಮಹೀತಳಾಧಿಪ: ರಾಜ; ಮಹೀತಳ: ಭೂಮಿ; ಅಧಿಪ: ಒಡೆಯ; ಕಾತರ: ಕಳವಳ; ಸೈರಿಸು: ಸಮಾಧಾನ; ಅಕಟ: ಅಯ್ಯೋ; ತರು: ಮರ; ಮುರಿ: ಸೀಳು, ನಾಶಮಾಡು; ಸುಜನ: ಸಜ್ಜನ; ವ್ರಾತ: ಗುಂಪು; ಆಶ್ರಯ: ಆಸರೆ; ಊರು: ಪುರ; ಹೊರಗೆ: ಆಚೆ; ಮಹಾತಿಶಯ: ಅತಿ ದೊಡ್ಡ; ಬಾಣಸಿನ: ಅಡುಗೆ; ಮನೆ: ಆಲಯ;
ಪದವಿಂಗಡಣೆ:
ಆತನ್+ಇಂಗಿತದ್+ಅನುವನ್+ಅರಿದು +ಮ
ಹೀತಳಾಧಿಪ+ ಧರ್ಮಸುತನ್+ಅತಿ
ಕಾತರಿಸದಿರು +ವಲಲ +ಸೈರಿಸು +ಸೈರಿಸ್+ಅಕಟೆನುತ
ಈ +ತರುವ +ಮುರಿಯದಿರು +ಸುಜನ
ವ್ರಾತಕ್+ಆಶ್ರಯ+ ಊರ+ಹೊರಗೆ+ ಮ
ಹಾತಿಶಯ +ತರುವುಂಟು +ನಿನ್ನಯ +ಬಾಣಸಿನ +ಮನೆಗೆ
ಅಚ್ಚರಿ:
(೧) ರಾಜ ಎಂದು ಹೇಳುವ ಪರಿ – ಮಹೀತಳಾಧಿಪ