ಅಳಲುವೀ ಧೃತರಾಷ್ಟ್ರನುರು ಕಳ
ಕಳವ ಕೇಳಿದನು ಕರ್ಣ ಶಕುನಿಗ
ಳುಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ
ಖಳಶಿರೋಮಣಿಗಳು ಮಹೀಶನ
ನಿಳಯ ಕೈತಂದರು ಸುಲೋಚನ
ಜಲವ ಸೆರಗಿನೊಳೊರಸಿ ನುಡಿದರು ಖೇದವೇಕೆನುತ (ಅರಣ್ಯ ಪರ್ವ, ೧೮ ಸಂಧಿ, ೮ ಪದ್ಯ)
ತಾತ್ಪರ್ಯ:
ಧೃತರಾಷ್ಟನ ಅಳಲಿನ ವಿಷಯವನ್ನು ಕೇಳಿ, ಖಳಶಿರೋಮಣಿಗಳಾದ ಕರ್ಣ, ಶಕುನಿಗಳು ಕೈತಟ್ಟಿ ತಂಬುಲವ ಹೊರಹಾಕುವಂತೆ ಜೋರಾಗಿ ನಕ್ಕರು. ನಂತರ, ಧೃತರಾಷ್ಟನ ಮನೆಗೆ ಹೋಗಿ ಅವನ ಕಣ್ಣಿರನ್ನು ಅವರ ಸೆರಗಿನಲ್ಲಿ ಒರಸಿ ದುಃಖವೇಕೆ ಎಂದು ಕೇಳಿದರು.
ಅರ್ಥ:
ಅಳಲು: ಶೋಕ, ದುಃಖಿಸು; ಉರು: ಹೆಚ್ಚು; ಕಳಕಳ: ವ್ಯಥೆ; ಕೇಳು: ಆಲಿಸು; ಉಲಿ: ಕೂಗು; ತಂಬುಲ: ಅಗಿದು ಉಗುಳುವ ಕವಳ – ತಾಂಬೂಲ; ಸೂಸು: ಎರಚುವಿಕೆ; ನಗು: ನಲಿ, ಸಂತೋಷ; ಹೊಯ್ದು: ಹೊಡೆ; ಕರತಳ: ಕೈ; ಖಳಶಿರೋಮಣಿ: ದುಷ್ಟರಲ್ಲಿ ಅಗ್ರಮಾನ್ಯ; ಮಹೀಶ; ರಾಜ; ನಿಳಯ: ಮನೆ; ಐತಂದರು: ಆಗಮಿಸು; ಸುಲೋಚನ: ಕಣ್ಣು; ಜಲ: ನೀರು; ಸೆರಗು: ಬಟ್ಟೆಯ ತುದಿ; ಒರಸು: ಸಾರಿಸು; ನುಡಿ: ಮಾತಾಡು; ಖೇದ: ದುಃಖ;
ಪದವಿಂಗಡಣೆ:
ಅಳಲುವ್+ಈ+ ಧೃತರಾಷ್ಟ್ರನ್+ಉರು +ಕಳ
ಕಳವ+ ಕೇಳಿದನು +ಕರ್ಣ +ಶಕುನಿಗಳ್
ಉಲಿದು +ತಂಬುಲ +ಸೊಸೆ +ನಕ್ಕರು +ಹೊಯ್ದು +ಕರತಳವ
ಖಳಶಿರೋಮಣಿಗಳು+ ಮಹೀಶನ
ನಿಳಯಕ್ +ಐತಂದರು +ಸುಲೋಚನ
ಜಲವ +ಸೆರಗಿನೊಳ್+ಒರಸಿ +ನುಡಿದರು +ಖೇದವೇಕೆನುತ
ಅಚ್ಚರಿ:
(೧) ದುರ್ಯೋಧನನ ಕಡೆಯವರನ್ನು ಖಳಶಿರೋಮಣಿ ಎಂದು ಕರೆದಿರುವುದು
(೨) ದುಷ್ಟರ ನಗುವಿನ ಚಿತ್ರಣ – ಉಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ