ಪದ್ಯ ೩೮: ಕೌರವರು ಏಕೆ ಧೃತಿಗೆಟ್ಟರು?

ಧರಣಿ ಜಲ ಪವಕ ಸಮೀರಾ
ದ್ಯರುಗಳರಿತಿರಿ ಶಕ್ರ ನೈಋತ
ವರುಣವಾಯು ಕುಬೇರ ಯಮರೆಂಬಖಿಳ ದಿಗಧಿಪರು
ಬರೆದುಕೊಂಡಿರಿ ಭಾಷೆಯನು ಸುರ
ನರ ಫಣಿವ್ರಜವೆಂಬ ಭೀಮನ
ಧರಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ (ಸಭಾ ಪರ್ವ, ೧೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೂಮಿ, ಜಲ, ಅಗ್ನಿ, ವಾಯು ಮೊದಲಾದ ಪಂಚಮಹಾಭೂತಗಳೇ, ನೀವೇ ಸಾಕ್ಷಿ, ಇಂದ್ರ, ನಿರಋತಿ, ವರುಣ, ವಾಯು, ಕುಬೇರ, ಯಮರೆಂಬ ಅಷ್ಟದಿಕ್ಪಾಲಕರೇ ನಾನು ಮಾಡಿದ ಪ್ರತಿಜ್ಞೆಯನ್ನು ಬರೆದುಕೊಂಡಿರಿ. ಮನುಷ್ಯರು, ದೇವತೆಗಳು, ನಾಗರೆಂಬ ಮೂರು ಲೋಕದ ನಿವಾಸಿಗಳೇ ನಿಮ್ಮ ಆಣೆ, ನನ್ನ ಪ್ರತಿಜ್ಞೆಯನ್ನು ನಿಮ್ಮ ಸಮ್ಮುಖದಲ್ಲೇ ನೆರವೇರಿಸುತ್ತೇನೆಂಬ ಭೀಮನ ಅಬ್ಬರದ ಆಟಾಟೋಪಕ್ಕೆ ಕೌರವಉ ಎದೆಗೆಟ್ಟು ಧೈರ್ಯವನ್ನು ಕಳೆದುಕೊಂಡರು.

ಅರ್ಥ:
ಧರಣಿ: ಭೂಮಿ; ಜಲ: ನೀರು; ಪಾವಕ: ಅಗ್ನಿ; ಸಮೀರ: ವಾಯು; ಆದಿ: ಮುಂತಾದ; ಅರಿ: ತಿಳಿ; ಶಕ್ರ: ಇಂದ್ರ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ವಾಯು: ಗಾಳಿ, ಅನಿಲ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಯಮ: ಮೃತ್ಯುದೇವತೆ; ಅಖಿಳ: ಎಲ್ಲಾ; ದಿಗಧಿಪ: ದಿಕ್ಪಾಲಕ; ಬರೆದು: ಲೇಖಿಸು, ಅಕ್ಷರದಲ್ಲಿರಿಸು; ಭಾಷೆ: ಮಾತು, ಪ್ರಮಾಣ; ಸುರ: ದೇವತೆ; ನರ: ಮನುಷ್ಯ; ಫಣಿ: ಹಾವು; ವ್ರಜ: ಗುಂಪು; ಧರಧುರ: ಆರ್ಭಟ, ಕೋಲಾ ಹಲ; ಧಟ್ಟಣೆ: ಗುಂಪು; ಧೃತಿ: ಧೈರ್ಯ; ಸ್ತೋಮ: ಗುಂಪು;

ಪದವಿಂಗಡಣೆ:
ಧರಣಿ +ಜಲ +ಪಾವಕ +ಸಮೀರಾ
ದ್ಯರುಗಳ್+ಅರಿತಿರಿ+ ಶಕ್ರ +ನೈಋತ
ವರುಣ+ವಾಯು +ಕುಬೇರ +ಯಮರೆಂಬ್+ಅಖಿಳ +ದಿಗಧಿಪರು
ಬರೆದುಕೊಂಡಿರಿ+ ಭಾಷೆಯನು +ಸುರ
ನರ+ ಫಣಿ+ವ್ರಜವೆಂಬ+ ಭೀಮನ
ಧರಧುರದ +ಧಟ್ಟಣೆಗೆ +ಧೃತಿಗೆಟ್ಟುದು +ಕುರುಸ್ತೋಮ

ಅಚ್ಚರಿ:
(೧) ಸಮೀರ, ವಾಯು – ಸಮನಾರ್ಥಕ ಪದ
(೨) ಧ ಕಾರದ ತ್ರಿವಳಿ ಪದ – ಧರಧುರದ ಧಟ್ಟಣೆಗೆ ಧೃತಿಗೆಟ್ಟುದು

ನಿಮ್ಮ ಟಿಪ್ಪಣಿ ಬರೆಯಿರಿ