ಮಾತು ತಪ್ಪಿತು ರಿಪುಗಳೈವರಿ
ಗೌತಣಿಸಿದವು ನೆರವಿನಲಿ ಪುರು
ಹೂತ ಶಿಖಿ ಯಮ ನಿರುತಿ ವರುಣ ಸಮೀರ ಹರಸಖರು
ಆತುಕೊಳಲಿಂದೀ ಸುಯೋಧನ
ಜಾತಪುಣ್ಯನೊ ಧರ್ಮಪುತ್ರನೆ
ಭೂತಭಾಗ್ಯನೊ ಕಾಣಲಹದೈ ಶಲ್ಯ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೧೦ ಪದ್ಯ)
ತಾತ್ಪರ್ಯ:
ಕರ್ಣನು ಶಲ್ಯನಿಗೆ ಹೇಳಿದನು, ಈಗ ನಾನಾಡಿದ ಮಾತು ತಪ್ಪಾಗಿದೆ, ಪಾಂಡವರ ಐವರಿಗೂ ನಾನು ಯುದ್ಧಕ್ಕೆ ಔತಣವನ್ನು ನೀಡುತ್ತಿದ್ದೇನೆ. ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರರೂ ಅವರಿಗೆ ಸಹಾಯವಾಗಿ ಬಂದು ನಮ್ಮನ್ನಿದಿರಿಸಲಿ ಧರ್ಮಜನೇ ಪುಣ್ಯಶಾಲಿಯೋ, ದುರ್ಯೋಧನನೇ ಪೂರ್ವದಲ್ಲಿ ಪುಣ್ಯಮಾಡಿದವನೋ ಎಂಬುದನ್ನು ಈ ದಿವಸ ನೋಡಬಹುದು.
ಅರ್ಥ:
ಮಾತು: ನುಡಿ; ತಪ್ಪಿತು: ಸಿಕ್ಕದೆ ಹೋಗು, ಗುರಿ ತಪ್ಪು; ರಿಪು: ವೈರಿ; ಔತಣ: ಆಮಂತ್ರಣ; ನೆರವು: ಸಹಾಯ, ಬೆಂಬಲ; ಪುರುಹೂತ: ಇಂದ್ರ; ಶಿಖಿ: ಬೆಂಕಿ; ಯಮ: ಜವರಾಯ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಸಮೀರ: ಗಾಳಿ, ವಾಯು; ಹರ: ಶಿವ; ಸಖ: ಮಿತ್ರ; ಹರಸಖ: ಕುಬೇರ; ಒಳಿತು: ಯೋಗ್ಯವಾದುದು, ಒಳ್ಳೆಯದು; ಜಾತ: ಹುಟ್ಟಿದ; ಪುಣ್ಯ: ಸದಾಚಾರ, ಪರೋಪಕಾರ; ಪುತ್ರ: ಮಗ; ಭಾಗ್ಯ: ವಿಧಿ, ಹಣೆಬರಹ; ಕಾಣು: ತೋರು; ಕೇಳು: ಆಲಿಸು;
ಪದವಿಂಗಡಣೆ:
ಮಾತು +ತಪ್ಪಿತು +ರಿಪುಗಳ್+ಐವರಿಗ್
ಔತಣಿಸಿದವು +ನೆರವಿನಲಿ +ಪುರು
ಹೂತ +ಶಿಖಿ +ಯಮ +ನಿರುತಿ +ವರುಣ +ಸಮೀರ +ಹರಸಖರು
ಆತುಕ್+ಒಳಲ್+ಇಂದ್+ಈ+ಸುಯೋಧನ
ಜಾತಪುಣ್ಯನೊ +ಧರ್ಮಪುತ್ರನೆ
ಭೂತಭಾಗ್ಯನೊ +ಕಾಣಲಹದೈ+ ಶಲ್ಯ +ಕೇಳೆಂದ
ಅಚ್ಚರಿ:
(೧) ಯಾರ ಸಹಾಯ ಪಡೆಯಲು ಪಾಂಡವರಿಗೆ ಹೇಳಿದನು – ಪುರುಹೂತ, ಶಿಖಿ, ಯಮ, ನಿರುತಿ, ವರುಣ, ಸಮೀರ, ಹರಸಖರು