ತರಣಿತನಯನ ತೆಗೆದು ಭೀಮನೊ
ಳುರವಣಿಸಿ ಗುರುಸೂನು ಕಾದು
ತ್ತಿರೆ ಧನಂಜಯ ತೆರಳಿದನು ಪಾಳೆಯದ ಪಥವಿಡಿದು
ಅರರೆ ಫಲುಗುಣನೋಟವನು ಸಂ
ಗರಸಮರ್ಥರ ನೋಟಾನು ನ
ಮ್ಮರಸ ಕಂಡನಲಾ ಎನುತ ನೂಕಿದನು ಕಲಿಕರ್ಣ (ಕರ್ಣ ಪರ್ವ, ೧೪ ಸಂಧಿ, ೩೨ ಪದ್ಯ)
ತಾತ್ಪರ್ಯ:
ಕರ್ಣನನ್ನು ಕಳುಹಿಸಿ ಅಶ್ವತ್ಥಾಮನು ಭೀಮನೊಡನೆ ಯುದ್ಧಕ್ಕೆ ನಿಂತನು, ಇತ್ತ ಅರ್ಜುನನು ಧರ್ಮರಾಯನನ್ನು ನೋಡಲು ವೇಗವಾಗಿ ಪಾಂಡವರ ಬಿಡಾರಕ್ಕೆ ಹೋಗುತ್ತಿದ್ದನು. ಇದನ್ನು ನೋಡಿದ ಕರ್ಣನು, ಅರೇ, ಅರ್ಜುನನು ಓಡುವುದನ್ನು ನಮ್ಮ ದೊರೆ ಕಂಡ ಹಾಗಾಯಿತು ಎಂದು ಸಂತೋಷಿಸಿ ಅರ್ಜುನನನ್ನು ತಡೆದನು.
ಅರ್ಥ:
ತರಣಿ: ಸೂರ್ಯ; ತನಯ: ಮಗ; ತೆಗೆ: ಹೊರತರು; ಉರವಣಿಸು:ಆತುರಿಸು; ಸೂನು: ಮಗ; ಕಾದು:ಹೋರಾಟ, ಯುದ್ಧ; ತೆರಳು: ಹೋಗು, ನಡೆ; ಪಾಳೆಯ: ಬೀಡು, ಶಿಬಿರ; ಪಥ: ದಾರಿ; ಓಟ: ವೇಗವಾಗಿ ತೆರಳು; ಸಂಗರ: ಯುದ್ಧ; ಸಮರ್ಥ: ಬಲಶಾಲಿ, ಗಟ್ಟಿಗ;ಅರಸ: ರಾಜ; ಕಂಡನು: ನೋಡು; ನೂಕು: ತಳ್ಳು; ಕಲಿ: ಶೂರ;
ಪದವಿಂಗಡಣೆ:
ತರಣಿತನಯನ +ತೆಗೆದು ಭೀಮನೊಳ್
ಉರವಣಿಸಿ +ಗುರುಸೂನು +ಕಾದು
ತ್ತಿರೆ+ ಧನಂಜಯ +ತೆರಳಿದನು +ಪಾಳೆಯದ +ಪಥವಿಡಿದು
ಅರರೆ+ ಫಲುಗುಣನ್ + ಓಟವನು +ಸಂ
ಗರ+ಸಮರ್ಥರ +ನೋಟವನು +ನ
ಮ್ಮರಸ+ ಕಂಡನಲಾ+ ಎನುತ+ ನೂಕಿದನು+ ಕಲಿಕರ್ಣ
ಅಚ್ಚರಿ:
(೧) ತರಣಿತನಯ, ಕರ್ಣ – ಪದ್ಯದ ಮೊದಲ ಮತ್ತು ಕೊನೆ ಪದ
(೨) ಓಟವನು, ನೋಟವನು – ಪ್ರಾಸ ಪದಗಳು
(೩) ತರಣಿತನಯನ ತೆಗೆದು; ಪಾಳೆಯದ ಪಥವಿಡಿದು; ಸಂಗರ ಸಮರ್ಥರ; ನೋಟವನು ನಮ್ಮರಸ – ಜೋಡಿ ಪದಗಳ ಬಳಕೆ