ಅರಳಿತರಸನ ವದನ ಶಕುನಿಯ
ಹರುಷಮಿಗೆ ದುಶ್ಯಾಸನಂಗು
ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ
ಗುರುಜ ಕೃಪ ಕೃತವರ್ಮ ಶಲ್ಯಾ
ದ್ಯರಿಗೆ ಹೊಸಕದೊಲಹು ಮಿಗಿಲಾ
ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳೆಂದ (ಕರ್ಣ ಪರ್ವ, ೧ ಸಂಧಿ, ೩೦ ಪದ್ಯ)
ತಾತ್ಪರ್ಯ:
ಜನಮೇಜಯ ಕೇಳು, ಕರ್ಣನು ಸೇನಾಧಿಪತಿಯಾಗುತ್ತಲೇ ದುರ್ಯೋಧನನ ಮುಖವರಳಿತು, ಶಕುನಿಗೆ ಅತಿಶಯ ಸಂತೋಷವಾಯಿತು. ದುಶ್ಯಾಸನಿಗೆ ಸಂತೋಷದ ರೋಮಾಂಚನವಾಯಿತು. ವಿಕರ್ಣಾದಿಗಳು ನಲಿದರು. ಅಶ್ವತ್ಥಾಮ, ಕೃಪಚಾರ್ಯರು, ಕೃತವರ್ಮ, ಶಲ್ಯನೇ ಮೊದಲಾದವರು ಮೇಲು ನೋಟಕ್ಕೆ ಸಂತೋಷಗೊಂಡರು ಒಳಗೆ ಕತ್ತಲೆಯನ್ನು ಕಾಣತೊಡಗಿದರು.
ಅರ್ಥ:
ಅರಳು: ಸಂತೋಷಗೊಳ್ಳು, ಅಗಲವಾಗು; ವದನ: ಮುಖ; ಅರಸ: ರಾಜ; ಹರುಷ: ಸಂತೋಷ; ಉಬ್ಬರಿಸು: ಹೆಚ್ಚಳ; ರೊಮ: ಕೂದಲು; ಆವಳಿ: ಸಾಲು; ಮನ: ಮನಸ್ಸು; ನಲಿ: ಸಂತೋಷಪಡು, ಆನಂದಿಸು; ಗುರುಜ: ಅಶ್ವತ್ಥಾಮ; ಆದಿ: ಮುಂತಾದ; ಹೊಸಕು: ಉಜ್ಜು, ತಿಕ್ಕು; ಒಲುಹು: ಒಲವು; ಮಿಗಿಲು: ಹೆಚ್ಚಾಗು; ಇರುಳು: ಕತ್ತಲೆ; ಭೂಪ: ರಾಜ;
ಪದವಿಂಗಡಣೆ:
ಅರಳಿತ್+ಅರಸನ +ವದನ +ಶಕುನಿಯ
ಹರುಷಮಿಗೆ +ದುಶ್ಯಾಸನಂಗ್+
ಉಬ್ಬರಿಸೆ+ ರೋಮಾವಳಿ +ವಿಕರ್ಣಾದಿಗಳ +ಮನ +ನಲಿಯೆ
ಗುರುಜ +ಕೃಪ +ಕೃತವರ್ಮ +ಶಲ್ಯಾ
ದ್ಯರಿಗೆ +ಹೊಸಕದ್+ಒಲಹು +ಮಿಗಿಲಾಯ್ತ್
ಇರುಳು +ಕರ್ಣಗೆ +ಪಟ್ಟವಾಯಿತು +ಭೂಪ +ಕೇಳೆಂದ
ಅಚ್ಚರಿ:
(೧) ಅರಳಿತು, ಹರುಷ, ಉಬ್ಬರಿಸು – ಸಂತೋಷವನ್ನು ಸೂಚಿಸುವ ಪದಗಳು
(೨) ಅಶ್ವತ್ಥಾಮನನ್ನು ಗುರುಜ ಎಂದು ಕರೆದಿರುವುದು
(೩) ಹೊಸಕದೊಲಹು ಮಿಗಿಲಾಯ್ತಿರುಳು – ಪದಗಳ ಬಳಕೆ