ಶ್ರೀಗಿರಿಜೆಯರಸನನು ವಿಮಲಗು
ಣಾಗಮೋತ್ತಮವರ್ಣನನು ವರ
ಯೋಗಾಭಿವಂದ್ಯನನಖಿಳ ಶೃತಿ ಪೌರಾಣದಾಯಕನ
ನಾಗಭೂಷಣನಮರವಂದಿತ
ಯೋಗಿಜನ ಹೃದಯನನು ಕರುಣಾ
ಸಾಗರನ ಬಲಗೊಂಡು ಭಾರತಕಥೆಯ ವಿರಚಿಸುವೆ (ಆದಿ ಪರ್ವ, ೧ ಸಂಧಿ, ೨೪ ಪದ್ಯ)
ತಾತ್ಪರ್ಯ:
ಪಾರ್ವತೀಪತಿಯೂ, ಆಗಮಗಳಿಂದ ಉತ್ತಮ ಗುಣವುಳ್ಳವನೆಂದು ವರ್ಣೀತನಾದವನೂ, ಶ್ರೇಷ್ಠಜ್ಞಾನಿಗಯೆಂದು ವಂದಿತನೂ, ವೇದಪುರಾಣಗಳನ್ನು ನೀಡಿದವನೂ, ಯೋಗಿಗಳ ಹೃದಯದಲ್ಲಿ ವಾಸಿಸುವವನೂ, ಕರುಣಾಸಾಗರನೂ, ನಾಗಭೂಷಣನೂ ಆದ ಶಿವನನ್ನು ಪ್ರದಕ್ಷಿಣೆ ಮಾಡಿ ಮಹಾಭಾರತದ ಕಥೆಯನ್ನು ರಚಿಸಲು ಪ್ರಾರಂಭಿಸುತ್ತೇನೆ.
ಅರ್ಥ:
ಗಿರಿಜೆ: ಪಾರ್ವತಿ; ಅರಸು: ರಾಜ; ವಿಮಲ: ನಿರ್ಮಲ; ಗುಣ: ನಡತೆ, ಸ್ವಭಾವ; ಆಗಮ: ಶಾಸ್ತ್ರ ಗ್ರಂಥ, ಜ್ಞಾನ; ವರ್ಣ:ಹೊಳಪು,ರೂಪ; ವರ: ಶ್ರೇಷ್ಠ; ಯೋಗಾಭಿ: ಶ್ರೇಷ್ಠರಾದ; ಅಭಿವಂದ್ಯ: ನಮಸ್ಕರಿಸಲ್ಪಟ್ಟ; ಶೃತಿ: ವೇದ; ಪೌರಾಣ; ಗ್ರಂಥ; ದಾಯಕ: ನೀಡಿದ; ನಾಗ: ಹಾವು; ಭೂಷಣ: ಅಲಂಕಾರ; ಅಮರ: ದೇವತೆ; ವಂದಿತ: ಆರಾಧಿಸಲ್ಪಡುವ; ಯೋಗಿಜನ: ಋಷಿ ಮುನಿಗಳು; ಹೃದಯ: ಎದೆ, ವಕ್ಷಸ್ಥಳ; ಕರುಣೆ: ದಯೆ; ಸಾಗರ: ಸಮುದ್ರ; ಬಲ: ದಕ್ಷಿಣ ಪಾರ್ಶ್ವ; ಬಲಗೊಂಡು: ಪ್ರದಕ್ಷಿಣೆ; ವಿರಚಿಸು: ರಚಿಸು;
ಪದವಿಂಗಡಣೆ:
ಶ್ರೀಗಿರಿಜೆ+ಅರಸನನು +ವಿಮಲ+ಗುಣ
ಆಗಮೋತ್ತಮ+ವರ್ಣನನು +ವರ
ಯೋಗ+ ಅಭಿವಂದ್ಯನನ್+ಅಖಿಳ +ಶೃತಿ +ಪೌರಾಣ+ದಾಯಕನ
ನಾಗಭೂಷಣನ್+ಅಮರ+ವಂದಿತ
ಯೋಗಿಜನ+ ಹೃದಯನನು +ಕರುಣಾ
ಸಾಗರನ +ಬಲಗೊಂಡು +ಭಾರತಕಥೆಯ+ ವಿರಚಿಸುವೆ
ಅಚ್ಚರಿ:
(೧) ಶಿವನ ಗುಣವಾಚಕಗಳು: ಗಿರಿಜೆಯ ಅರಸ, ವಿಮಲಗುಣ, ಆಗಮೋತ್ತಮ, ಯೋಗಾಭಿವಂದ್ಯ, ಶೃತಿ ಪೌರಾಣದಾಯಕ, ನಾಗಭೂಷಣ, ಅಮರವಂದಿತ, ಯೋಗಿಜನ ಹೃದಯ, ಕರುಣಾಸಾಗರ