ಸರಸ ಸೌಗಂಧಿಕದ ಪುಷ್ಪೋ
ತ್ತರಕೆ ಪವನಜ ಹೋದನೆಂಬುದ
ನರಸಿಯಿಂದರಿದವನಿಪನು ಪೂರಾಯದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆಂತೆನುತ ಚಿಂತಾ
ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ (ಅರಣ್ಯ ಪರ್ವ, ೧೨ ಸಂಧಿ, ೨ ಪದ್ಯ)
ತಾತ್ಪರ್ಯ:
ಸೌಗಂಧಿಕ ಪುಷ್ಪವನ್ನು ತರಲೆಂದು ಭೀಮನು ಹೋದುದನ್ನು ತನ್ನ ಹೆಂಡತಿ ದ್ರೌಪದಿಯಿಂದ ಕೇಳಿದ ಬಳಿಕ ಧರ್ಮರಾಯನು ದುಃಖಾತಿಶಯದಿಂದ ಕೂಡಿ, ಅರ್ಜುನನು ಹೇಗಿರುವನೋ, ಭೀಮನು ಎಲ್ಲಿರುವನೋ ಎಂದು ಚಿಂತಿಸುತ್ತಾ ಭೀಮನ ನೋಡುವ ತವಕದಲ್ಲಿದ್ದನು.
ಅರ್ಥ:
ಸರಸ: ಸೊಬಗು; ಪುಷ್ಪ: ಹೂವು; ಪವನಜ: ವಾಯುಪುತ್ರ (ಭೀಮ); ಹೋದ: ತೆರಳು; ಅರಸಿ: ರಾಣಿ; ಅರಿ: ತಿಳಿ; ಅವನಿಪ: ರಾಜ; ಪೂರಾಯ: ಪರಿಪೂರ್ಣ; ದುಗುಡ: ದುಃಖ; ನರ: ಅರ್ಜುನ; ಹದ: ಸ್ಥಿತಿ; ವೃಕೋದರ: ಭೀಮ; ಇರವು: ನೆಲೆ; ಚಿಂತೆ: ಯೋಚನೆ; ಭರಿತ: ತುಂಬಿದ; ಕಾಂಬ: ನೋಡುವ; ತವಕ: ಆತುರ;
ಪದವಿಂಗಡಣೆ:
ಸರಸ +ಸೌಗಂಧಿಕದ +ಪುಷ್ಪೋ
ತ್ತರಕೆ +ಪವನಜ +ಹೋದನೆಂಬುದನ್
ಅರಸಿಯಿಂದ್+ಅರಿದ್+ಅವನಿಪನು +ಪೂರಾಯ+ದುಗುಡದಲಿ
ನರನ +ಹದನೇನೋ +ವೃಕೋದರನ್
ಇರವು +ತಾನೆಂತ್+ಎನುತ +ಚಿಂತಾ
ಭರಿತನಿದ್ದನು +ಭೀಮಸೇನನ +ಕಾಂಬ +ತವಕದಲಿ
ಅಚ್ಚರಿ:
(೧) ನರಸಿಯಿಂದರಿದವನಿಪನು – ಪದದ ರಚನೆ
(೨) ಜೋಡಿ ಅಕ್ಷರ ಪದದ ಬಳಕೆ – ಸರಸ ಸೌಗಂಧಿಕದ; ಪುಷ್ಪೋತ್ತರಕೆ ಪವನಜ;
(೩) ಪವನಜ, ವೃಕೋದರ, ಭೀಮಸೇನ – ಭೀಮನನ್ನು ಕರೆದ ಪರಿ