ಇದು ಮಹಾದೇವರದು ವೃತ್ರನ
ಕದನದಲಿ ಕೈ ಸಾರ್ದುದೀಶನಿ
ನಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ (ದ್ರೋಣ ಪರ್ವ, ೧೦ ಸಂಧಿ, ೪೭ ಪದ್ಯ)
ತಾತ್ಪರ್ಯ:
ಇದು ಶಿವನ ಕವಚ, ವೃತ್ರನೊಡನೆ ಯುದ್ಧಮಾದುವಾಗ ಶಿವನು ದೇವೇಂದ್ರನಿಗೆ ಕೊಟ್ಟನು, ಇಂದ್ರನು ಇದನ್ನು ಆಂಗಿರನಿಗೆ ನೀಡಿದನು, ಅವನು ಇದನ್ನು ಬೃಹಸ್ಪತಿಗೆ ಕೊಟ್ಟನು. ಅದು ಬೃಹಸ್ಪತಿಯಿಂದ ಭರದ್ವಾಜನಿಗೆ ಬಂದಿತು, ಭರದ್ವಾಜನು ಇದನ್ನು ನನಗೆ ನೀಡಿದನು ಎಂದು ದ್ರೋಣನು ದುರ್ಯೋಧನನಿಗೆ ಹೇಳಿದನು.
ಅರ್ಥ:
ಮಹಾದೇವ: ಶಿವ, ಶಂಕರ; ಕದನ: ಯುದ್ಧ; ಸುರೇಂದ್ರ: ಇಂದ್ರ; ಇತ್ತು: ನೀಡು; ಬಳಿಕ: ನಂತರ; ಕರುಣ: ದಯೆ;
ಪದವಿಂಗಡಣೆ:
ಇದು +ಮಹಾದೇವರದು +ವೃತ್ರನ
ಕದನದಲಿ +ಕೈ +ಸಾರ್ದುದ್+ಈಶನಿ
ನಿದು +ಸುರೇಂದ್ರಂಗ್+ಆ+ ಸುರೇಶ್ವರನ್+ಆಗಿರಂಗಿತ್ತ
ಇದು +ಬೃಹಸ್ಪತಿಗ್+ಆಂಗಿರನನಿನಾ
ದುದು +ಭರದ್ವಾಜಂಗೆ +ಬಳಿಕಾ
ದುದು +ಭರದ್ವಾಜಾಖ್ಯನಿತ್ತನು +ತನಗೆ +ಕರುಣದಲಿ
ಅಚ್ಚರಿ:
(೧) ಕವಚವು ಬಂದ ಪರಿ – ಮಹಾದೇವ, ಸುರೇಂದ್ರ, ಆಂಗಿರ, ಬೃಹಸ್ಪತಿ, ಭಾರದ್ವಾಜ, ದ್ರೋಣ