ಏನು ಮಾಡುವೆನಿನ್ನು ಭಾಗ್ಯವಿ
ಹೀನನಕಟಾ ಕೌರವನು ಸುರ
ಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು
ಹಾನಿಯಿವದಿರಿಗೊಲಿದುದಾರಿ
ದ್ದೇನಹುದು ಪರದೈವದನುಸಂ
ಧಾನವತ್ತಲು ಸುಡಲೆನುತ ತಿರುಗಿದನು ಪಾಳೆಯಕೆ (ದ್ರೋಣ ಪರ್ವ, ೧೯ ಸಂಧಿ, ೫೨ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನು ನಾನಿನ್ನೇನು ಮಾಡಲಿ, ಕಾಮಧೇನು ಗೊಡ್ಡಾಯಿತು, ನಾರಾಯಣಾಸ್ತ್ರವು ನಿಷ್ಫಲವಾಯಿತು, ಕಲ್ಪವೃಕ್ಷವು ಕಾಡುಮರವಾಯಿತು. ಕೌರವನು, ಅಯ್ಯೋ ಭಾಗ್ಯಹೀನನು, ಇವರಿಗೆ ಹಾನಿಯು ಒಲಿದು ಬಂದರೆ ಯಾರಿದ್ದು ಏನು ಮಾಡಲು ಸಾಧ್ಯ, ಸುಡಲಿ, ಪರದೈವವು ಪಾಂಡವರತ್ತ ಒಲಿದಿದೆ, ಎಂದು ಚಿಂತಿಸುತ್ತಾ ಪಾಳೆಯಕ್ಕೆ ಹೋದನು.
ಅರ್ಥ:
ಭಾಗ್ಯ: ಮಂಗಳ; ವಿಹೀನ: ತೊರೆದ, ತ್ಯಜಿಸಿದ; ಅಕಟಾ: ಅಯ್ಯೋ; ಸುರಧೇನು: ಕಾಮಧೇನು; ನೆರೆ: ಗುಂಪು; ಗೊಡ್ಡು: ಗಬ್ಬವಾಗದ ಹಸು, ನಿಷ್ಫಲತೆ; ಸುರತರು: ಕಲ್ಪವೃಕ್ಷ; ಕಾಡು: ವನ; ಮರ: ತರು; ಹಾನಿ: ನಷ್ಟ; ಒಲಿ: ಒಪ್ಪು; ಪರದೈವ: ಪರಮಾತ್ಮ; ಅನುಸಂಧಾನ: ಪರಿಶೀಲನೆ; ಸುಡು: ದಹಿಸು; ತಿರುಗು: ಮರಳು; ಪಾಳೆಯ: ಬೀಡು, ಶಿಬಿರ;
ಪದವಿಂಗಡಣೆ:
ಏನು +ಮಾಡುವೆನ್+ಇನ್ನು +ಭಾಗ್ಯವಿ
ಹೀನನ್+ಅಕಟಾ +ಕೌರವನು +ಸುರ
ಧೇನು +ನೆರೆ +ಗೊಡ್ಡಾಯ್ತು +ಸುರತರು +ಕಾಡಮರನಾಯ್ತು
ಹಾನಿಯಿವದಿರಿಗ್+ಒಲಿದುದ್+ಆರಿ
ದ್ದೇನಹುದು +ಪರದೈವದ್+ಅನುಸಂ
ಧಾನವ್+ಅತ್ತಲು +ಸುಡಲೆನುತ +ತಿರುಗಿದನು +ಪಾಳೆಯಕೆ
ಅಚ್ಚರಿ:
(೧) ರೂಪಕದ ಪ್ರಯೋಗ – ಸುರಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು