ಅರಸು ಮಕ್ಕಳ ಕೊಂದನೈನೂ
ರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ
ಧುರವ ಗೆಲಿದನು ಪಡಿತಳಿಸಿ ನಾ
ವುರವಣಿಸಲಡಹಾಯ್ದು ನಮ್ಮನು
ಹರನ ವರವುಂಟೆಂದು ತಡೆದನು ಸಿಂಧು ಭೂಪಾಲ (ದ್ರೋಣ ಪರ್ವ, ೮ ಸಂಧಿ, ೨೮ ಪದ್ಯ)
ತಾತ್ಪರ್ಯ:
ಅಭಿಮನ್ಯುವು ಐನೂರು ರಾಜಕುಮಾರರನ್ನು ಕೊಂದನು, ಮೂರು ಅಕ್ಷೋಹಿಣಿ ಸೈನ್ಯವನ್ನು ಒರಸಿದನು. ಮಹಾರಥರ ಮೈಗಳನ್ನು ಗಾಯಗೊಳಿಸಿದನು. ಅವನು ಅತ್ತ ಜಯಶಾಲಿಯಾಗುತ್ತಿದ್ದಾಗ ನಾವು ಅವನ ಹಿಂದೆ ಹೋಗಲು ಪದ್ಮವ್ಯೂಹದ ಬಾಗಿಲಿನಲ್ಲಿ ನನಗೆ ಶಿವನ ವರವಿದೆ, ಎಂದು ಸೈಂಧವನು ನಮ್ಮನ್ನು ತಡೆದನು.
ಅರ್ಥ:
ಅರಸು: ರಾಜ; ಮಕ್ಕಳು: ಸುತ; ಕೊಂದು: ಸಾಯಿಸು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸೈನ್ಯ: ಸೇನೆ; ಒರಸು: ನಾಶ; ಮಸೆ: ಉಜ್ಜು, ತಿಕ್ಕು; ಅಗ್ಗ: ಶ್ರೇಷ್ಠ; ಮಹಾರಥ: ಪರಾಕ್ರಮ; ಧುರ: ಯುದ್ಧ; ಗೆಲಿದು: ಜಯಿಸು; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಉರವಣಿಸು: ಆತುರಿಸು; ಅಡಹಾಯ್ದು: ಅಡ್ಡ ಬಂದು ಹೋರಾಡು; ಹರ: ಶಿವ; ವರ: ಆಶೀರ್ವಾದ; ತಡೆ: ನಿಲ್ಲಿಸು; ಭೂಪಾಲ: ರಾಜ; ಸಿಂಧುಭೂಪಾಲ: ಸೈಂಧವ;
ಪದವಿಂಗಡಣೆ:
ಅರಸು +ಮಕ್ಕಳ +ಕೊಂದನ್+ಐನೂ
ರ್ವರನು +ಮೂರಕ್ಷೋಣಿ +ಸೈನ್ಯವನ್
ಒರಸಿದನು +ಮಸೆಗಾಣಿಸಿದನ್+ಅಗ್ಗದ +ಮಹಾರಥರ
ಧುರವ +ಗೆಲಿದನು +ಪಡಿತಳಿಸಿ +ನಾವ್
ಉರವಣಿಸಲ್+ಅಡಹಾಯ್ದು +ನಮ್ಮನು
ಹರನ +ವರವುಂಟೆಂದು +ತಡೆದನು +ಸಿಂಧು +ಭೂಪಾಲ
ಅಚ್ಚರಿ:
(೧) ಸೈಂಧವ ನೆಂದು ಹೇಳಲು – ಸಿಂಧು ಭೂಪಾಲ ಪದದ ಬಳಕೆ
(೨) ಅಭಿಮನ್ಯುವಿನ ಪರಾಕ್ರಮ – ಅರಸು ಮಕ್ಕಳ ಕೊಂದನೈನೂರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ