ಪದ್ಯ ೧೫: ಬಂಡಿಗಳಲ್ಲಿ ಏನನ್ನು ತುಂಬಲಾಯಿತು?

ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ (ಗದಾ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ನೀರಿನ ಬುದ್ದಲಿಗಳು, ಬಂಗಾರದ ಕಲಶ ಕೊಪ್ಪರಿಗೆಗಳು, ದೀಪದ ಕಂಬಗಳು, ಬಂಗಾರದ ಸರಪಣಿಹಾಕಿದ ಯಂತ್ರಚಾಲಿತ ಗೊಂಬೆಗಳು, ಮರಕತದ ಮಧುಪಾತ್ರೆಗಳು, ನೀಲದ ಕಲಶ, ವೈಢೂರ್ಯದ ತಟ್ಟೆಗಳನ್ನು ದೂತರು ತಂದು ಬಂಡಿಗಳಲ್ಲಿ ತುಂಬಿದರು.

ಅರ್ಥ:
ಕರ: ಹಸ್ತ; ಹೊಂಗಳಸ: ಚಿನ್ನದ ಕುಂಭ; ಉಪ್ಪರಿಗೆ: ಮಹಡಿ, ಸೌಧ; ದೀಪ: ಸೊಡರು; ಸ್ತಂಭ: ಕಂಬ; ಹೇಮ: ಚಿನ್ನ; ಸರಪಣಿ: ಸಂಕೋಲೆ, ಶೃಂಖಲೆ; ಮಣಿ: ಬೆಲೆಬಾಳುವ ರತ್ನ; ಜಂತ್ರ: ಯಂತ್ರ, ವಾದ್ಯ; ಜೀವ: ಉಸಿರಾಡುವ ದೇಹ; ಜೀವಪುತ್ರಿ: ಗೊಂಬೆ; ಮರಕತ: ನವರತ್ನಗಳಲ್ಲಿ ಒಂದು, ಪಚ್ಚೆ; ಮಧು: ಜೇನು; ನೀಲ: ಉದ್ದ, ದೊಡ್ಡ; ಕರಗ: ಕಲಶ; ವೈಡೂರಿಯ: ನವರತ್ನಗಳಲ್ಲಿ ಒಂದು; ಪಡಿಗ: ಪಾತ್ರೆ; ಚರರು: ದೂತರು; ಒಟ್ಟು: ಸೇರಿಸು; ಬಂಡಿ: ರಥ; ಭಾರ: ದೊಡ್ಡ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಕರವತಿಗೆ +ಹೊಂಗಳಸ +ಹೊಂಗ್
ಉಪ್ಪರಿಗೆ +ದೀಪಸ್ತಂಭ +ಹೇಮದ
ಸರಪಣಿಯ+ ಮಣಿಮಯದ +ಜಂತ್ರದ +ಜೀವಪುತ್ರಿಗಳ
ಮರಕತದ +ಮಧುಪಾತ್ರೆ +ನೀಲದ
ಕರಗ+ ವೈಡೂರಿಯದ +ಪಡಿಗವ
ಚರರು +ತಂದೊಟ್ಟಿದರು +ಬಂಡಿಗೆ +ಭಾರ+ಸಂಖ್ಯೆಯಲಿ

ಅಚ್ಚರಿ:
(೧) ಹೊಂಗಳಸ ಹೊಂಗೊಪ್ಪರಿಗೆ – ಪದಗಳ ಬಳಕೆ
(೨) ಯಂತ್ರದ ಗೊಂಬೆ ಎಂದು ಹೇಳಲು – ಜಂತ್ರದ ಜೀವಪುತ್ರಿಗಳ

ಪದ್ಯ ೩: ಅರ್ಜುನನ ಬಾಣದ ಪ್ರಭಾವ ಹೇಗಿತ್ತು?

ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಲಿನಲಿ
ನೊಸಲ ಸೀಸಕ ನುಗ್ಗು ನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ (ದ್ರೋಣ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವ ವೀರರ ಜೋಡು, ಸೀಸಕ, ಬಾಹುರಕ್ಷೆ, ಶಿರಸ್ತ್ರಾಣಗಳು ಅರ್ಜುನನು ಬಾಣಗಳಿಂದ ಸೀಳಿ ನುಗ್ಗು ನುಸಿಯಾದವು. ಕಿರೀಟಗಳಲ್ಲಿದ್ದ ವಜ್ರಗಳು ಹೊಳೆಯುತ್ತಾ ಹಾರಿದವು. ಅವಗಳನ್ನು ದೇಹಕ್ಕೆ ಬಂಧಿಸಿದ್ದ ಸರಪಣಿಗಳು ತುಂಡಾದವು.

ಅರ್ಥ:
ಕುಸುರಿ: ಸಣ್ಣ ತುಂಡು, ಚೂರು; ಅರಿ: ಕತ್ತರಿಸು; ಜೋಡು: ಜೊತೆ; ವಜ್ರ:ಗಟ್ಟಿಯಾದ; ರಸುಮೆ: ರಶ್ಮಿ, ಕಿರಣ; ಹಾರು: ಚಲಿಸು, ಉಡ್ಡಾಣ ಮಾಡು; ರಿಪು: ವೈರಿ; ಎಸೆ: ಬಾಣ ಪ್ರಯೋಗ ಮಾದು; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಕವಚ: ಹೊದಿಕೆ; ಸೀಳು: ಚೂರು, ತುಂಡು; ತೋಳು: ಬಾಹು; ನೊಸಲ: ಹಣೆ; ನುಗ್ಗು: ನೂಕಾಟ, ನೂಕುನುಗ್ಗಲು; ನುಸಿ: ಹುಡಿ, ಧೂಳು; ಬಂಧ: ಕಟ್ಟು, ಬಂಧನ; ಸರಪಣಿ: ಸಂಕೋಲೆ, ಶೃಂಖಲೆ; ಹಿಳಿ: ಹಿಂಡು ; ಅರಿ: ವೈರಿ; ಬಲ: ಸೈನ್ಯ; ಎಸಕ: ಕಾಂತಿ; ವೈರಿ: ರಿಪು; ಮೋಹರ: ಯುದ್ಧ;

ಪದವಿಂಗಡಣೆ:
ಕುಸುರಿದ್+ಅರಿದವು +ಜೋಡು +ವಜ್ರದ
ರಸುಮೆಗಳು +ಹಾರಿದವು+ ರಿಪುಗಳ
ಎಸೆವ+ ಸೀಸಕ +ಕವಚವನು +ಸೀಳಿದನು +ತೋಳಿನಲಿ
ನೊಸಲ+ ಸೀಸಕ +ನುಗ್ಗು +ನುಸಿ +ಬಂ
ಧಿಸಿದ +ಸರಪಣಿ +ಹಿಳಿದವ್+ಅರಿಬಲ
ದೆಸಕ+ ನಿಂದುದು +ಪಾರ್ಥನ್+ಎಚ್ಚನು +ವೈರಿ+ಮೋಹರವ

ಅಚ್ಚರಿ:
(೧) ವೈರಿ, ರಿಪು, ಅರಿ – ಸಮಾನಾರ್ಥಕ ಪದಗಳು
(೨) ಸೀಸಕ – ೩, ೪ ಸಾಲಿನ ಎರಡನೇ ಪದ

ಪದ್ಯ ೬೨: ರಾವುತರ ಯುದ್ಧ ವೈಖರಿ ಹೇಗಿತ್ತು?

ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದವು ಲೋಹ ಸೀಸಕ
ವಡಸಿ ಬಲ್ಲೆಯ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ರಾವುತರ ದೂಹತ್ತಿಗಳ ಹೊಡೆತಕ್ಕೆ ಲೋಹದ ಶಿರಸ್ತ್ರಾಣಗಳು ಸಿಡಿದವು. ಈಟಿಯ ಮೂತಿಗಳು ಸರಪಣಿಗಳನ್ನು ಪುಡಿಪುಡಿ ಮಾದಿದವು. ಲೌಡಿಗಳು ನೆತ್ತಿಗಳನ್ನು ಒಡೆಯಲು ಮಿದುಳು ಹಾರಿತು. ಎರಡೂ ಕಡೆಗಳಿಂದ ರಕ್ತದ ಕಡಲು ಉಕ್ಕಿ ಒಂದಾದವು.

ಅರ್ಥ:
ಹೊಡೆ: ಏಟು, ಹೊಡೆತ; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಘಾಯ; ಪೆಟ್ಟು; ಸಿಡಿ: ಚಿಮ್ಮು; ಲೋಹ: ಕಬ್ಬಿಣ, ಉಕ್ಕು; ಸೀಸಕ: ಶಿರಸ್ತ್ರಾಣ; ಬಲ್ಲೆ: ಈಟಿ; ಬಿಗಿ: ಕಟ್ಟು; ನಟ್ಟು: ತಾಗು; ಸರಪಣಿ: ಸಂಕೋಲೆ, ಶೃಂಖಲೆ; ಝಗೆ: ಹೊಳಪು, ಪ್ರಕಾಶ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಒತ್ತು: ಚುಚ್ಚು; ನೆತ್ತಿ: ಶಿರ; ಬಿಡುಮಿದುಳು: ಒಡೆದ ತಲೆಯದಂಗ; ಕೆದರು: ಹರಡು; ರಕುತ: ನೆತ್ತರು; ಕಡಲು: ಸಾಗರ; ಕೂಡೆ: ಜೊತೆ; ಹೊಯ್ದಾಡು: ಹೋರಾಡು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಅಡಸು: ಬಿಗಿಯಾಗಿ ಒತ್ತು, ಆಕ್ರಮಿಸು;

ಪದವಿಂಗಡಣೆ:
ಹೊಡೆವ +ದೂಹತ್ತಿಗಳ +ಘಾಯದಲ್
ಒಡೆದು +ಸಿಡಿದವು+ ಲೋಹ +ಸೀಸಕವ್
ಅಡಸಿ +ಬಲ್ಲೆಯ+ ಬಗಿದು+ ನಟ್ಟುದು +ಸರಪಣಿಯ +ಝಗೆಯ
ಹೊಡೆವ+ ಲೌಡಿಗಳೊತ್ತಿ+ ನೆತ್ತಿಯ
ಬಿಡುಮಿದುಳ +ಕೆದರಿದವು +ರಕುತದ
ಕಡಲು+ ಕಡಲನು+ ಕೂಡೆ +ಹೊಯ್ದಾಡಿದರು+ ರಾವುತರು

ಅಚ್ಚರಿ:
(೧) ಯುದ್ದದ ತೀವ್ರತೆ – ರಕುತದ ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು

ಪದ್ಯ ೩೦: ಯುದ್ಧಭೂಮಿ ಯಮನಂಗಡಿಯ ಸರಕಾಗಿ ಏಕೆ ಕಂಡಿತು?

ಕೆಡೆದ ಝಲ್ಲರಿಗಳ ರಥಾಗ್ರದೊ
ಳುಡಿದ ಸಿಂಧದ ಮಕುಟ ಪದಕದ
ಖಡೆಯ ಸರಪಣಿ ತೋಳಬಂದಿಯ ವಜ್ರಮಾಣಿಕದ
ಕಡುಕು ಹೀರಾವಳಿಯ ಹಾರದ
ಕಡಿಯ ರಚನೆಯ ರಾಶಿ ಯಮನಂ
ಗಡಿಯ ಪಸರವಿದೆನಲು ಮೆರೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಥದ ಮೇಲಿಂದ ಬಿದ್ದ ಛತ್ರ, ಧ್ವಜಗಳು, ಯೋಧರು ಧರಿಸಿದ ಕಿರೀಟ, ಪದಕ, ಖಡೆಯ, ಸರಪಳಿ, ತೋಳ ಬಂದಿ, ವಜ್ರಮಾಣಿಕ್ಯಗಳ ಕಿವಿಯಾಭರಣ, ವಜ್ರಹಾರಗಳು ಹರಿದು ರಣರಂಗದಲ್ಲಿ ಬಿದ್ದಿದ್ದವು. ಇದು ಯಮನ ಅಂಗಡಿಯ ಸರಕೇನೋ ಎಂಬಂತೆ ಯುದ್ಧರಂಗದಲ್ಲಿ ಕಾಣಿಸಿದವು.

ಅರ್ಥ:
ಕೆಡೆ:ಬೀಳು; ಝಲ್ಲರಿ:ಕುಚ್ಚು, ಗೊಂಡೆ; ರಥ: ಬಂಡಿ; ಅಗ್ರ: ತುದಿ; ಉಡಿ: ತುಂಡು ಮಾಡು; ಸಿಂಧ: ಬಾವುಟ; ಮಕುಟ: ಕಿರೀಟ; ಪದಕ: ಅಲಂಕಾರಿಕ ಬಿಲ್ಲೆ; ಖಡೆ: ಕಾಲ ಕಡುಗ; ಸರಪಣಿ: ಹಾರ; ತೋಳಬಂಧಿ: ತೋಳಿನಲ್ಲಿ ತೊಡುವ ಆಭರಣ; ವಜ್ರಮಾಣಿಕ: ಬೆಲೆಬಾಳುವ ರತ್ನ; ಕಡುಕು: ಗಂಡಸರು ಕಿವಿಯಲ್ಲಿ ಧರಿಸುವ ಆಭರಣ; ಹೀರಾವಳಿ: ನವರತ್ನಗಳಲ್ಲಿ ಒಂದು, ವಜ್ರ; ಆವಳಿ: ಸಾಲು; ಹಾರ: ಸರ, ಮಾಲೆ; ಕಡಿ:ತುಂಡು; ರಚನೆ: ನಿರ್ಮಾಣ, ಸೃಷ್ಟಿ; ರಾಶಿ: ಗುಂಪು; ಯಮ: ಕಾಲ; ಅಂಗಡಿ: ಮಾರಾಟದ ವಸ್ತುಗಳನ್ನು ಚಿಲ್ಲರೆಯಾಗಿ ಮಾರುವ ಸ್ಥಳ; ಪಸರ:ಅಂಗಡಿ; ಮೆರೆ:ಶೋಭಿಸು; ರಣಭೂಮಿ: ಯುದ್ಧಭೂಮಿ;

ಪದವಿಂಗಡಣೆ:
ಕೆಡೆದ +ಝಲ್ಲರಿಗಳ+ ರಥಾಗ್ರದೊಳ್
ಉಡಿದ +ಸಿಂಧದ +ಮಕುಟ +ಪದಕದ
ಖಡೆಯ +ಸರಪಣಿ+ ತೋಳಬಂದಿಯ +ವಜ್ರಮಾಣಿಕದ
ಕಡುಕು +ಹೀರಾವಳಿಯ +ಹಾರದ
ಕಡಿಯ+ ರಚನೆಯ +ರಾಶಿ +ಯಮನಂ
ಗಡಿಯ +ಪಸರವಿದೆನಲು +ಮೆರೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ರಣಭೂಮಿಯಲ್ಲಿ ಬಿದ್ದಿದ್ದ ಬೆಲೆಬಾಳುವ ವಸ್ತುವನ್ನು ಯಮನಂಗಡಿಯ ಸರಕು ಎಂದು ಹೋಲಿಸಿರುವುದು
(೨) ಝಲ್ಲರಿ, ಸಿಂಧ, ಮಕುಟ, ಪದಕ, ಖಡೆ, ಸರಪಣಿ, ತೋಳಬಂದಿ, ಕಡುಕು, ಹೀರಾವಳಿ, ಹಾರ, – ಆಭರಣದ ವಿವರ