ಪದ್ಯ ೩೧: ದ್ರುಪದನೇಕೆ ದ್ರೋಣನನ್ನು ಭೇಟಿಯಾಗಲಿಲ್ಲ?

ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿವರ್ಗ
ತಿರಿವ ಹಾರುವರೊಡನೆ ಭೂಮೀ
ಶ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯಬೇಡೆನೆ ಬಂದು ಬಾಗಿಲಲವ ನಿವಾರಿಸಿದ (ಆದಿ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಧನಮದ ಅಧಿಕವಾದ ಪ್ರತಾಪದ ಮದ ಮೊದಲಾದವು ದ್ರುಪದನ ಮನಸ್ಸಿನಲ್ಲಿ ಹೊಕ್ಕು ಅವುಗಳ ಪಾದಧೂಳಿಯಿಂದ ಮನಸ್ಸಿನ ಸ್ವಚ್ಛತೆಯು ಮಾಸಿಹೋಯಿತು. ದ್ರುಪದನು ದ್ವಾರಪಾಲಕನಿಗೆ ತಿರುಗಾಡುವ ಬ್ರಾಹ್ಮನನೊಡನೆ ರಾಜನಿಗೆ ಎಲ್ಲಿಯ ಸ್ನೇಹ? ಅವನನ್ನು ಕರೆಯಬೇಡ, ಹೋಗಿಬಿಡಲಿ ಎಂದು ಹೇಳಿದನು. ದ್ವಾರಪಾಲಕನು ಬಂದು ದೊರೆಯ ಮಾತನ್ನು ಹೇಳಿ ದ್ರೋಣನನ್ನು ತಡೆದನು.

ಅರ್ಥ:
ಸಿರಿ: ಐಶ್ವರ್ಯ; ಮದ: ಅಹಂಕಾರ; ಅಧಿಕ: ಹೆಚ್ಚು; ಪ್ರತಾಪ: ಪರಾಕ್ರಮ; ಉತ್ಕರ: ಹೆಚ್ಚು; ಮೊದಲಾದ: ಮುಂತಾದ; ಸಂಚರಣ: ಸಂಚಾರ; ರಜ: ಧೂಳು, ಹುಡಿ, ಅಂಧಕಾರ; ಮಾಸು: ಮಲಿನವಾಗು, ಕೊಳೆಯಾಗು; ಮನ: ಮನಸ್ಸು; ಮಡಿ: ಸ್ವಚ್ಛ; ವರ್ಗ: ಗುಂಪು; ತಿರಿ: ಸುತ್ತಾಡು; ಹಾರುವ: ಬ್ರಾಹ್ಮಣ; ಭೂಮೀಶ್ವರ: ರಾಜ; ಎತ್ತಣ: ಎಲ್ಲಿಯ; ಮೈತ್ರಿ: ಸ್ನೇಹ; ಹೋಗು: ತೆರಳು; ಕರೆ: ಬರೆಮಾಡು; ಬಾಗಿಲಲವ: ಕಾವಲುಗಾರ; ನಿವಾರಿಸು: ಹೋಗಲಾಡಿಸು;

ಪದವಿಂಗಡಣೆ:
ಸಿರಿಯ +ಮದವಧಿಕ +ಪ್ರತಾಪ
ಉತ್ಕರದ +ಮದ +ಮೊದಲಾದ +ಮದ +ಸಂ
ಚರಣ+ ರಜದಲಿ +ಮಾಸಿತ್+ಈತನ +ಮನದ+ ಮಡಿವರ್ಗ
ತಿರಿವ+ ಹಾರುವರೊಡನೆ+ ಭೂಮೀ
ಶ್ವರರಿಗ್+ಎತ್ತಣ +ಮೈತ್ರಿ +ಹೋಗಲಿ
ಕರೆಯಬೇಡ್+ಎನೆ +ಬಂದು +ಬಾಗಿಲಲವ +ನಿವಾರಿಸಿದ

ಅಚ್ಚರಿ:
(೧) ಅಹಂಕಾರದ ಮಾತು: ತಿರಿವ ಹಾರುವರೊಡನೆ ಭೂಮೀಶ್ವರರಿಗೆತ್ತಣ ಮೈತ್ರಿ
(೨) ಮದ ಪದದ ಬಳಕೆ – ಸಿರಿಯ ಮದವಧಿಕ ಪ್ರತಾಪೋತ್ಕರದ ಮದ ಮೊದಲಾದ ಮದ
(೩) ರೂಪಕದ ಬಳಕೆ – ಮದ ಸಂಚರಣ ರಜದಲಿ ಮಾಸಿತೀತನ ಮನದ ಮಡಿವರ್ಗ