ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ (ಗದಾ ಪರ್ವ, ೯ ಸಂಧಿ, ೧೦ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ಪಾಳೆಯದಲ್ಲಿರಲು ಬಿಡುವುದಿಲ್ಲ ಎನ್ನುವುದು ಒಂದು ವಾದವಾದರೆ, ಒಂದು ಪಕ್ಷ ಅವರನ್ನು ಇಲ್ಲಿಯೇ ಇರಲು ಬಿಟ್ಟಿದ್ದರೆ ತನ್ನ ಚಕ್ರವನ್ನು ಅಡ್ಡಹಿಡಿದು ಅವರು ಸಾಯುವುದನ್ನು ತಪ್ಪಿಸುತ್ತಾನೆ. ಹಗಲಾಗಲಿ, ರಾತ್ರಿಯಾಗಲಿ, ಮನೆ, ಕಾಡು, ಬೆಟ್ಟ, ಸಮುದ್ರ, ಅಗ್ನಿ, ಪಾಂಡವರು ಎಲ್ಲೇ ಇದ್ದರೂ ಅವರನ್ನು ರಕ್ಷಿಸುತ್ತಾನೆ. ತನ್ನ ಭಕ್ತರಲ್ಲಿ ಶ್ರೀಕೃಷ್ಣನಿಗೆ ಅಷ್ಟು ಅಭಿಮಾನ.
ಅರ್ಥ:
ಇರಿಸು: ಇರಲು ಬಿಡು; ಮುರಾರಿ: ಕೃಷ್ಣ; ಕೌಂತೇಯರು: ಪಾಂಡವರು; ನಿಧಾನ: ತಡೆ, ಆತುರವಿಲ್ಲದೆ; ಮೇಣ್: ಅಥವ; ಕೊಲು: ಸಾಯಿಸು; ಅಡ್ಡೈಸು: ಅಡ್ಡಪಡಿಸು; ಚಕ್ರ: ಸುದರ್ಶನ ಚಕ್ರ; ಇರುಳು: ರಾತ್ರಿ; ಹಗಲು: ಬೆಳಗ್ಗೆ; ಅಡವಿ: ಕಾಡು; ಮನೆ: ಆಲಯ; ಶರಧಿ: ಸಮುದ್ರ; ಪರ್ವತ: ಬೆಟ್ಟ; ಅಗ್ನಿ: ಬೆಂಕಿ; ಅವಧಾನ: ಎಚ್ಚರಿಕೆ ಹೇಳುವುದು, ಸ್ತುತಿಮಾಡು; ಬಲುಹು: ಶಕ್ತಿ, ದೃಢತೆ;
ಪದವಿಂಗಡಣೆ:
ಇರಿಸನ್+ಇಲ್ಲಿ +ಮುರಾರಿ +ಕೌಂತೇ
ಯರನ್+ಇದೊಂದು +ನಿಧಾನ +ಮೇಣ್+
ಇಲ್ಲಿರಿಸಿದಡೆ +ಕೊಲಲೀಯನ್+ಅಡ್ಡೈಸುವನು +ಚಕ್ರದಲಿ
ಇರುಳು +ಹಗಲ್+ಅಡವಿಯಲಿ +ಮನೆಯಲಿ
ಶರಧಿಯಲಿ +ಪರ್ವತದಲ್+ಅಗ್ನಿಯಲ್
ಇರಲಿ +ತನ್ನವರಲ್ಲಿ+ ಹರಿಗ್+ಅವಧಾನ +ಬಲುಹೆಂದ
ಅಚ್ಚರಿ:
(೧) ಕೃಷ್ಣನ ಶಕ್ತಿ – ತನ್ನವರಲ್ಲಿ ಹರಿಗವಧಾನ ಬಲುಹೆಂದ