ಪದ್ಯ ೫೬: ಧರ್ಮಜನ ಸಾರಥಿಯು ರಥವನ್ನೆಲ್ಲಿಗೆ ಕೊಂಡೊಯ್ದನು?

ವಾರುವದ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೇಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕ ಸಾವಿರವ (ಶಲ್ಯ ಪರ್ವ, ೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮಜನ ಸಾರಥಿಯು ರಥದ ಕುದುರೆಗಳನ್ನು ವಿಚಿತ್ರವಾಗಿ ನಡೆಸಿ ಒಂದು ಪಕ್ಕಕ್ಕೆ ಕೊಂಡೊಯ್ದನು. ಶಲ್ಯನು ಕೂಗುತ್ತಾ ಕುದುರೆ, ಆನೆ ಪದಾತಿ ತೇರುಗಳನ್ನು ಸಹಸ್ರ ಸಂಖ್ಯೆಯಲ್ಲಿ ಕೊಂದನು.

ಅರ್ಥ:
ವಾರುವ: ಅಶ್ವ, ಕುದುರೆ; ವೈಚಿತ್ರ: ಆಶ್ಚರ್ಯಕರವಾದುದು; ಗತಿ: ವೇಗ; ನಿಹಾರ: ಹಿಂದಕ್ಕೆ ಸರಿಯುವುದು; ಸಾರಥಿ: ಸೂತ; ನರೇಂದ್ರ: ರಾಜ; ತೇರು: ಬಂಡಿ; ತಿರುಗಿಸು: ಸುತ್ತು, ಸಂಚರಿಸು; ವಿಘಾತ: ನಾಶ, ಧ್ವಂಸ; ಬಾಹೆ: ಪಕ್ಕ, ಪಾರ್ಶ್ವ; ಹೊಯ್ದು: ಹೊಡೆ; ಹಯ: ಕುದುರೆ; ಅಗ್ಗ: ಶ್ರೇಷ್ಠ; ವಾರಣ: ಆನೆ; ಆವಳಿ: ಗುಂಪು; ಪದಾತಿ: ಸೈನಿಕ, ಕಾಲಾಳು; ತೇರು: ಬಂಡಿ; ತೆಕ್ಕೆ: ಗುಂಪು, ಸಮೂಹ; ಇಕ್ಕು: ಇರಿಸು, ಇಡು; ಪ್ರತ್ಯೇಕ: ಬೇರೆ; ಸಾವಿರ: ಸಹಸ್ರ;

ಪದವಿಂಗಡಣೆ:
ವಾರುವದ+ ವೈಚಿತ್ರ+ಗತಿಯ+ ನಿ
ಹಾರದಲಿ+ ಸಾರಥಿ+ ನರೇಂದ್ರನ
ತೇರ +ತಿರುಗಿಸಿದನು +ವಿಘಾತಿಯಲೊಂದು +ಬಾಹೆಯಲಿ
ಆರಿ+ ಹೊಯ್ದನು +ಹಯವನ್+ಅಗ್ಗದ
ವಾರಣಾವಳಿಗಳ +ಪದಾತಿಯ
ತೇರ +ತೆಕ್ಕೆಯನ್+ಇಕ್ಕಿದನು +ಪ್ರತ್ಯೇಕ +ಸಾವಿರವ

ಅಚ್ಚರಿ:
(೧) ತೇರ – ೩, ೬ ಸಾಲಿನ ಮೊದಲ ಪದ
(೨) ಧರ್ಮಜ ಎಂದು ಹೇಳಲು ನರೇಂದ್ರ ಪದದ ಬಳಕೆ