ಶರಹತಿಗೆ ಸೆಡೆಯದೆ ವೃಕೋದರ
ನೆರಡು ಕವಲಂಬಿನಲಿ ಕರ್ಣನ
ಶಿರವನೆಚ್ಚಡೆ ತರುದನೆಡೆಯಲಿ ಭಾನುಸುತ ನಗುತ
ತಿರುಹಿ ಶಕ್ತಿಯಲಿಟ್ಟರೆಡೆಯಲಿ
ತರುದು ಭೀಮನ ಕರದ ಚಾಪವ
ನೆರಡು ಕಡಿ ಮಾಡಿದನು ಬಳಿಯಲಿ ನೊಸಲನೊಡನೆಚ್ಚ (ದ್ರೋಣ ಪರ್ವ, ೧೩ ಸಂಧಿ, ೫೬ ಪದ್ಯ)
ತಾತ್ಪರ್ಯ:
ಬಾಣಗಳಿಂದ ತಬ್ಬಿಬ್ಬಾಗದೆ ಭೀಮನು ಎರಡು ಕವಲಂಬುಗಳಿಂದ ಕರ್ಣನ ತಲೆಗೆ ಗುರಿಯಿಟ್ಟು ಬಿಟ್ಟರೆ ಕರ್ಣನು ನಗುತ್ತಾ ಅವನ್ನು ಕತ್ತರಿಸಿದನು. ಭೀಮನು ಶಕ್ತಿಯನ್ನು ಪ್ರಯೋಗಿಸಿದರೆ ಅದನ್ನು ಮಧ್ಯದಲ್ಲೇ ಕತ್ತರಿಸಿದನು. ಬಳಿಕ ಭೀಮನ ಬಿಲ್ಲನ್ನು ಎರಡು ತುಂಡಾಗಿ ಕತ್ತರಿಸಿ, ಅವನ ಹಣೆಯೊಡೆಯುವಂತೆ ಬಾಣಗಳನ್ನು ಬಿಟ್ಟನು.
ಅರ್ಥ:
ಶರ: ಬಾಣ; ಹತಿ: ಪೆಟ್ಟು, ಸೆಡೆ: ಗರ್ವಿಸು, ಅಹಂಕರಿಸು; ಹೊಡೆತ; ವೃಕೋದರ: ತೋಳದಂತಹ ಹೊಟ್ಟೆಯುಳ್ಳವ; ಕವಲಂಬು: ಹರಿತವಾದ ಬಾಣ; ಶಿರ: ತಲೆ; ಎಚ್ಚು: ಬಾಣ ಪ್ರಯೋಗ ಮಾಡು; ಭಾನು: ಸೂರ್ಯ; ನಗು: ಹರ್ಷ; ತಿರುಹಿ: ಮರಳಿ; ಶಕ್ತಿ: ಕಸುವು, ಬಲ; ಕರ: ಹಸ್ತ; ಚಾಪ: ಬಿಲ್ಲು; ಕಡಿ: ಸೀಳು; ಬಳಿ: ಹತ್ತಿರ; ನೊಸಲು: ಹಣೆ; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ಶರಹತಿಗೆ +ಸೆಡೆಯದೆ +ವೃಕೋದರನ್
ಎರಡು +ಕವಲಂಬಿನಲಿ +ಕರ್ಣನ
ಶಿರವನ್+ಎಚ್ಚಡೆ +ತರುದನ್+ಎಡೆಯಲಿ +ಭಾನುಸುತ +ನಗುತ
ತಿರುಹಿ+ ಶಕ್ತಿಯಲಿಟ್ಟರ್+ಎಡೆಯಲಿ
ತರುದು +ಭೀಮನ +ಕರದ +ಚಾಪವನ್
ಎರಡು +ಕಡಿ +ಮಾಡಿದನು +ಬಳಿಯಲಿ +ನೊಸಲನ್+ ಒಡನೆಚ್ಚ
ಅಚ್ಚರಿ:
(೧) ಕರ್ಣ, ಭಾನುಸುತ; ಭೀಮ, ವೃಕೋದರ – ಹೆಸರನ್ನು ಕರೆದ ಪರಿ