ತಾಗಿ ವಜ್ರವ ಮುಕ್ಕುಗಳೆವಡೆ
ಸಾಗರವ ಹೊಗಳೇಕ ಗಿರಿಗಳು
ಹೋಗಲಿನ್ನಾ ಮಾತು ಮೀರಿದ ದೈತ್ಯನುಪಟಳವ
ಈಗ ಮಾಣಿಸು ನಮ್ಮ ಸುಭಟರು
ಯೋಗಿಗಳವೊಲು ದಂಡಹೀನರು
ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ (ದ್ರೋಣ ಪರ್ವ, ೧೬ ಸಂಧಿ, ೨೭ ಪದ್ಯ)
ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಆಗಲಿ, ಇನ್ನು ನಮ್ಮ ವೀರರನ್ನು ನಿಂದಿಸುವುದಿಲ್ಲ. ವಜ್ರಾಯುಧವನ್ನು ನಿಷ್ಕ್ರಿಯಗೊಳಿಸಲು, ಪರ್ವತಗಳು ಸಮುದ್ರವನ್ನೇಕೆ ಹೊಗಬೇಕು. ಈಗ ಈ ರಾಕ್ಷಸನ ಉಪಟಳವನ್ನು ನಿಲ್ಲಿಸು. ಉಳಿದ ವೀರರೆಲ್ಲಾ ಯೋಗಿಗಳಂತೆ ಪ್ರತೀಕಾರಕ್ಕಾಗಿ ದಂಡೋಪಾಯವನ್ನು ತ್ಯಜಿಸಿದ್ದಾರೆ. ಬಹುಬೇಗ ಘಟೋತ್ಕಚನನ್ನು ಸಂಹರಿಸು ಎಂದು ಕರ್ಣನಿಗೆ ಹೇಳಿದನು.
ಅರ್ಥ:
ತಾಗು: ಮುಟ್ಟು; ವಜ್ರ: ಗಟ್ಟಿಯಾದ; ಮುಕ್ಕು: ಸೊಕ್ಕು, ಗರ್ವ; ಕಳೆ: ತೀರಿಸು; ಸಾಗರ: ಸಮುದ್ರ; ಹೊಗಲು: ತೆರಳಲು; ಗಿರಿ: ಬೆಟ್ಟ; ಮಾತು: ನುಡಿ; ಮೀರು: ದಾಟು; ದೈತ್ಯ: ರಾಕ್ಷಸ; ಉಪಟಳ: ಕಿರುಕುಳ; ಮಾಣಿಸು: ನಿಲ್ಲಿಸು; ಸುಭಟ: ಪರಾಕ್ರಮಿ; ಯೋಗಿ: ಋಷಿ; ದಂಡ: ಕೋಲು, ಆಯುಧ; ಹೀನ: ತೊರೆದ; ಬೇಗ: ರಭಸ; ಅಮರವೈರಿ: ರಾಕ್ಷಸ; ಅಮರ: ದೇವತೆ; ವೈರಿ: ಶತ್ರು; ತರಿ: ಕಡಿ, ಕತ್ತರಿಸು; ಬಿಸುಡು: ಬಿಸಾಡು, ಹೊರಹಾಕು;
ಪದವಿಂಗಡಣೆ:
ತಾಗಿ +ವಜ್ರವ +ಮುಕ್ಕು+ಕಳೆವಡೆ
ಸಾಗರವ +ಹೊಗಲೇಕ +ಗಿರಿಗಳು
ಹೋಗಲಿನ್ನಾ + ಮಾತು +ಮೀರಿದ +ದೈತ್ಯನ್+ಉಪಟಳವ
ಈಗ+ ಮಾಣಿಸು +ನಮ್ಮ +ಸುಭಟರು
ಯೋಗಿಗಳವೊಲು +ದಂಡಹೀನರು
ಬೇಗ +ಮಾಡಿನ್+ಅಮರವೈರಿಯ +ತರಿದು +ಬಿಸುಡೆಂದ
ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ
(೨) ಕೌರವ ರಾಜರನ್ನು ತೆಗಳುವ ಪರಿ – ನಮ್ಮ ಸುಭಟರು ಯೋಗಿಗಳವೊಲು ದಂಡಹೀನರು