ದಳಪತಿಯು ಪವಡಿಸಿದನರಸನ
ಸುಳಿವು ಸಿಲುಕಿತು ಭಯದ ಬಲೆಯಲಿ
ಮೊಳಗುತದೆ ನಿಸ್ಸಾಳ ಸುಮ್ಮಾನದಲಿ ರಿಪುಬಲದ
ಉಳಿದರೋ ಗುರುಸೂನು ಕೃಪರೇ
ನಳಿದರೋ ಪಾಳೆಯದೊಳಗೆ ರಥ
ವಿಳಿದರೋ ತಾನೇನೆನುತ ಚಿಂತಿಸಿತು ಕುರುಸೇನೆ (ಗದಾ ಪರ್ವ, ೧ ಸಂಧಿ, ೬೫ ಪದ್ಯ)
ತಾತ್ಪರ್ಯ:
ಶಲ್ಯನು ಸತ್ತನು, ದೊರೆಯು ಭಯಗ್ರಸ್ತನಾಗಿದ್ದಾನೆ, ವಿರೋಧಿ ಬಲದಲ್ಲಿ ವಿಜಯದ ಕಹಳೆ ಕೇಳಿ ಬರುತ್ತಿದೆ. ಕೃಪ, ಅಶ್ವತ್ಥಾಮರು ಉಳಿದರೋ, ಅಳಿದರೋ, ರಥವನ್ನಿಳಿದು ಶಸ್ತ್ರತ್ಯಾಗ ಮಾಡಿದರೋ ಏನಾಯಿತೋ ಎಂದು ಕುರುಸೇನೆಯು ಚಿಂತೆಗೊಳಗಾದರು.
ಅರ್ಥ:
ದಳಪತಿ: ಸೇನಾಧಿಪತಿ; ಪವಡಿಸು: ನಿದ್ರಿಸು; ಅರಸ: ರಾಜ; ಸುಳಿವು: ಗುರುತು, ಕುರುಹು; ಸಿಲುಕು: ದೊರಕು; ಭಯ: ಹೆದರಿಕೆ; ಬಲೆ: ಜಾಲ; ಮೊಳಗು: ಧ್ವನಿಮಾಡು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸುಮ್ಮಾನ: ಸಂತೋಷ, ಹಿಗ್ಗು; ರಿಪುಬಲ: ವೈರಿ ಸೈನ್ಯ; ಉಳಿದ: ಮಿಕ್ಕ; ಸೂನು: ಮಗ; ಅಳಿ: ನಾಶ; ಪಾಳೆಯ: ಬೀಡು, ಶಿಬಿರ; ರಥ: ಬಂಡಿ; ಇಳಿ: ಕೆಳಕ್ಕೆ ಬಾ; ಚಿಂತಿಸು: ಯೋಚಿಸು;
ಪದವಿಂಗಡಣೆ:
ದಳಪತಿಯು +ಪವಡಿಸಿದನ್+ಅರಸನ
ಸುಳಿವು +ಸಿಲುಕಿತು +ಭಯದ +ಬಲೆಯಲಿ
ಮೊಳಗುತದೆ +ನಿಸ್ಸಾಳ +ಸುಮ್ಮಾನದಲಿ +ರಿಪುಬಲದ
ಉಳಿದರೋ +ಗುರುಸೂನು +ಕೃಪರೇನ್
ಅಳಿದರೋ +ಪಾಳೆಯದೊಳಗೆ+ ರಥವ್
ಇಳಿದರೋ +ತಾನೇನೆನುತ+ ಚಿಂತಿಸಿತು +ಕುರುಸೇನೆ
ಅಚ್ಚರಿ:
(೧) ಉಳಿದರೋ, ಅಳಿದರೋ, ಇಳಿದರೋ – ಪದಗಳ ಬಳಕೆ