ರಾಯದಳದಲಿ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾ ಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ (ಗದಾ ಪರ್ವ, ೧ ಸಂಧಿ, ೩೨ ಪದ್ಯ)
ತಾತ್ಪರ್ಯ:
ಧರ್ಮಜನ ಸುತ್ತಲಿದ್ದ ಚತುರಂಗ ಸೈನ್ಯದ ಸಾವು, ವೀರರನ್ನು ಹೆದರಿಸಿತು. ಕೃಪ, ಭೋಜ, ಅಶ್ವತ್ಥಾಮರು ದೊಡ್ಡ ದೊಡ್ಡ ಸೇನಾಧಿಪತಿಗಳಿಗಿದಿರಾಗಿ ನಿಂತರು. ಈ ಯುದ್ಧ ನನಗಿರಲಿ ಎಂದು ಧರ್ಮಜನು ಶತ್ರು ಸೇನೆಯನ್ನು ಹೊಗಲು, ಕಿವಿವರೆಗೆ ಬಾಣವನ್ನು ಸೆಳೆದಿದ್ದ ಅರ್ಜುನನು ಇದನ್ನು ಕಂಡನು.
ಅರ್ಥ:
ರಾಯ: ರಾಜ; ದಳ: ಸೈನ್ಯ; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬೀಯ: ವ್ಯಯ, ಹಾಳು; ಬೆದರಿಸು: ಹೆದರಿಸು; ಅದಟ: ಶೂರ, ಪರಾಕ್ರಮಿ; ಬಲು: ಬಹಳ; ನಾಯಕ: ಒಡೆಯ; ಇದಿರು: ಎದುರು; ಒಡ್ಡು: ರಾಶಿ, ಸಮೂಹ; ಸುತ: ಮಗ; ರಣ: ಯುದ್ಧ; ಹೊಕ್ಕು: ಸೇರು; ಬಳಿಕ: ನಂತರ; ಆಯತ: ವಿಶಾಲವಾದ; ಅಸ್ತ್ರ: ಶಸ್ತ್ರ; ಕಂಡು: ನೋಡು; ಅದ್ಭುತ: ಆಶ್ಚರ್ಯ; ಕರ್ಣ: ಕಿವಿ;
ಪದವಿಂಗಡಣೆ:
ರಾಯ+ದಳದಲಿ +ಚಾತುರಂಗದ
ಬೀಯ +ಬೆದರಿಸಿತ್+ಅದಟರನು +ಬಲು
ನಾಯಕರಿಗ್+ಇದಿರೊಡ್ಡಿದರು +ಕೃಪ +ಭೋಜ +ಗುರು+ಸುತರು
ಆಯಿತೀ +ರಣವೆನುತ+ ಪಾಂಡವ
ರಾಯ +ಹೊಕ್ಕನು +ಬಳಿಕಲಾ +ಕ
ರ್ಣಾಯತ+ಅಸ್ತ್ರನು+ ಕಂಡನ್+ಅರ್ಜುನನಾ +ಮಹಾದ್ಭುತವ
ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀಯ ಬೆದರಿಸಿತದಟರನು ಬಲುನಾಯಕರಿಗಿದಿರೊಡ್ಡಿದರು