ನಗುತ ಹರಿ ನಿಂದಿರಲು ಕೈ ದೀ
ವಿಗೆಯವರು ಹೊದ್ದಿದರು ರೂವಾ
ರಿಗೆಗೆ ಬಿಜಯಂಗೈದನುಘೆಯೆಂದುದು ಸುರಸ್ತೋಮ
ಬಿಗಿದ ದಡ್ಡಿಯ ಬದ್ದರದ ಬೀ
ಯಗದ ರಾಣಿವಾಸದಂದಣ
ತೆಗೆದು ನಡೆದುವು ಮುಂದೆ ಸಂದಣಿಸಿತ್ತು ಯದುಸೇನೆ (ವಿರಾಟ ಪರ್ವ, ೧೧ ಸಂಧಿ, ೬೮ ಪದ್ಯ)
ತಾತ್ಪರ್ಯ:
ಕತ್ತಲಾಗುತ್ತಾ ಬರಲು, ಕೈದೀವಿಗೆಯವರು ಶ್ರೀಕೃಷ್ಣನ ಬಳಿಗೆ ಬಂದರು. ಶ್ರೀಕೃಷ್ಣನು ನಸುನಗುತ್ತಾ ಊರ ಪಕ್ಕದ ಬಯಲಿಗೆ ಬಂದನು, ದೇವತೆಗಳು ಜಯಘೋಷವನ್ನು ಮೊಳಗಿದರು. ಬೀಗ ಹಾಕಿದ್ದ ರಾಣೀವಾಸದ ಪಲ್ಲಕ್ಕಿಗಳು ಮುಂದುವರಿದವು. ಅದರ ಮುಮ್ದೆ ಯಾದವರ ಸೇನೆ ನಡೆಯುತ್ತಿತ್ತು.
ಅರ್ಥ:
ನಗು: ಹಸನ್ಮುಖ; ಹರಿ: ವಿಷ್ಣು; ನಿಂದಿರು: ನಿಲ್ಲು; ಕೈ: ಹಸ್ತ; ದೀವಿಗೆ: ಸೊಡರು, ದೀಪಿಕೆ; ಹೊದ್ದು: ಹೊಂದು, ಸೇರು; ರೂವಾರಿ: ವಿಗ್ರಹ, ಶಾಸನಗಳನ್ನು ಕೆತ್ತುವವನು, ಶಿಲ್ಪಿ; ಬಿಜಯಂಗೈ: ದಯಮಾಡು; ಸುರಸ್ತೋಮ: ದೇವತೆಗಳ ಗುಂಪು; ಬಿಗಿ: ಬಂಧಿಸು; ದಡ್ಡಿ: ಜವನಿಕೆ, ಪಂಜರ; ಉಘೆ: ಜಯಘೋಷ; ಬದ್ದರ:ಮಂಗಳಕರವಾದುದು; ಬೀಯ: ವ್ಯಯ, ನಷ್ಟ; ರಾಣೀವಾಸ: ಅಂತಃಪುರ; ಅಂದಣ: ಸೊಬಗು; ತೆಗೆ: ಹೊರತರು; ನಡೆ: ಚಲಿಸು; ಮುಂದೆ: ಅಗ್ರಭಾಗ; ಸಂದಣಿಸು: ಗುಂಪು; ಸೇನೆ: ಸೈನ್ಯ;
ಪದವಿಂಗಡಣೆ:
ನಗುತ +ಹರಿ +ನಿಂದಿರಲು+ ಕೈ+ ದೀ
ವಿಗೆಯವರು +ಹೊದ್ದಿದರು +ರೂವಾ
ರಿಗೆಗೆ+ ಬಿಜಯಂಗೈದನ್+ಉಘೆಯೆಂದುದು +ಸುರಸ್ತೋಮ
ಬಿಗಿದ +ದಡ್ಡಿಯ +ಬದ್ದರದ +ಬೀ
ಯಗದ +ರಾಣಿವಾಸದ್+ಅಂದಣ
ತೆಗೆದು +ನಡೆದುವು+ ಮುಂದೆ +ಸಂದಣಿಸಿತ್ತು +ಯದುಸೇನೆ
ಅಚ್ಚರಿ:
(೧) ಬಿಜಯಂಗೈ, ನಡೆ – ಸಾಮ್ಯಾರ್ಥ ಪದಗಳು