ಎನಲು ಬಿದ್ದನು ನೆಲಕೆ ಸಿಂಹಾ
ಸನದಿನಾ ಮುನಿವಚನಶರ ಮರು
ಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ
ಜನಪನಿರೆ ಗಾಂಧಾರಿ ನೃಪ ಮಾ
ನಿನಿಯರೊರಲಿತು ರಾಜಗೃಹ ರೋ
ದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ (ಗದಾ ಪರ್ವ, ೧೧ ಸಂಧಿ, ೮ ಪದ್ಯ)
ತಾತ್ಪರ್ಯ:
ವ್ಯಾಸ ಮುನಿಗಳು ಈ ರೀತಿ ನುಡಿದೊಡೆ ದುಃಖದಿಂದ ಧೃತರಾಷ್ಟ್ರನು ಸಿಂಹಾಸನದಿಂದ ನೆಲಕ್ಕೆ ಬಿದ್ದನು. ಮೊದಲೇ ಆದ ನೋವಿಗೆ ವ್ಯಾಸರ ವಚನ ಬಾಣವು ಮತ್ತೆ ಚುಚ್ಚಿ, ಮೂರ್ಛೆ ಹೋಗಲು, ಗಾಂಧಾರಿಯೂ ರಾಣೀವಾಸದವರೂ ಒರಲಿಕೊಂಡರು. ಆ ರೋದನವು ಅರಮನೆಯನ್ನು ತುಂಬಿ ಹೊರಬಿದ್ದು ಇಡೀ ಹಸ್ತಿನಾಪುರವನ್ನೇ ತುಂಬಿತು.
ಅರ್ಥ:
ಬಿದ್ದು: ಜಾರು; ನೆಲ: ಭೂಮಿ; ಸಿಂಹಾಸನ: ರಾಜನು ಕೂರುವ ಸ್ಥಳ, ಭದ್ರಾಸನ; ಮುನಿ: ಋಷಿ; ವಚನ: ಮಾತು; ಮರು: ಎರಡನೆಯ, ದ್ವಿತೀಯ; ಮೊನೆ: ತುದಿ; ಬಂದು: ಆಗಮಿಸು; ಬಹಳ: ತುಂಬ; ಮೂರ್ಛೆ: ಎಚ್ಚರ ತಪ್ಪಿದ ಸ್ಥಿತಿ; ವಶ್ಯ: ಅಧೀನಗೊಳಿಸಬಹುದಾದ; ಅಪಾರ: ದೊಡ್ಡ; ಜನಪ: ರಾಜ; ನೃಪ: ರಾಜ; ಮಾನಿನಿ: ಹೆಣ್ಣು; ಒರಲು: ಅರಚು, ಕೂಗಿಕೊಳ್ಳು; ರಾಜಗೃಹ: ಅರಮನೆ; ರೋದನ: ದುಃಖ; ಧ್ವನಿ: ರವ; ಮೀರಿ: ಹೆಚ್ಚಾಗು; ಮೊಗೆ: ಬಾಚು, ತುಂಬು;
ಪದವಿಂಗಡಣೆ:
ಎನಲು +ಬಿದ್ದನು +ನೆಲಕೆ +ಸಿಂಹಾ
ಸನದಿನ್+ಆ+ ಮುನಿ+ವಚನ+ಶರ +ಮರು
ಮೊನೆಗೆ +ಬಂದುದು+ ಬಹಳ +ಮೂರ್ಛ+ಅಪಾರವಶ್ಯದಲಿ
ಜನಪನಿರೆ +ಗಾಂಧಾರಿ +ನೃಪ+ ಮಾ
ನಿನಿಯರ್+ಒರಲಿತು +ರಾಜಗೃಹ +ರೋ
ದನ +ಮಹಾಧ್ವನಿ+ ಮೀರಿ +ಮೊಗೆದುದು +ಹಸ್ತಿನಾಪುರವ
ಅಚ್ಚರಿ:
(೧) ರೂಪಕದ ಪ್ರಯೋಗ – ಮುನಿವಚನಶರ ಮರುಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ