ನರನ ರಥ ಕುಣಿದುದು ಯುಧಿಷ್ಠಿರ
ನುರು ವರೂಥ ಸಗಾಢದೊಳು ಚೀ
ತ್ಕರಿಸಿತನಿಲಾತ್ಮಜನ ಸ್ಯಂದನ ಮುಂದುವರಿಯುತಿರೆ
ಭರದಿ ಮಾದ್ರೀಸುತರ ತೇರುಗ
ಳುರವಣಿಸಲಭಿಮನ್ಯು ಸಾತ್ಯಕಿ
ಯಿರದೆ ಕೈಕೊಳಲಾಯಿತಿತ್ತಲು ಕದನಕುದ್ಯೋಗ (ಭೀಷ್ಮ ಪರ್ವ, ೫ ಸಂಧಿ, ೨ ಪದ್ಯ)
ತಾತ್ಪರ್ಯ:
ಅರ್ಜುನ, ಧರ್ಮಜ, ಭೀಮ, ನಕುಲ, ಸಹದೇವರು ಇವರ ರಥಗಳು ಮುಂದುವರಿಯಲು ಸಾತ್ಯಕಿ, ಅಭಿಮನ್ಯುಗಳೂ ಯುದ್ಧಸನ್ನದ್ಧರಾಗಿ ಹೊರಟರು.
ಅರ್ಥ:
ನರ: ಅರ್ಜುನ; ರಥ: ಬಂಡಿ; ಕುಣಿ: ನರ್ತಿಸು; ಉರು: ಶ್ರೇಷ್ಠ; ವರೂಥ: ತೇರು, ರಥ; ಸಗಾಢ: ಹೆಚ್ಚಾದ, ಅತಿಶಯವಾದ; ಚೀತ್ಕರಿಸು: ಗಟ್ಟಿಯಾಗಿ ಅರಚು, ಆರ್ತನಾದ ಮಾಡು; ಆತ್ಮಜ: ಮಗ; ಸ್ಯಂದ: ಸ್ರವಿಸುವಿಕೆ; ಮುಂದುವರಿ: ಮುನ್ನುಗ್ಗು; ಭರದಿ: ರಭಸ, ವೇಗ; ಸುತ: ಮಕ್ಕಳು; ತೇರು: ಬಂಡಿ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕದನ: ಯುದ್ಧ; ಉದ್ಯೋಗ: ಕಾರ್ಯ, ಕೆಲಸ; ಅನಿಲ: ವಾಯು;
ಪದವಿಂಗಡಣೆ:
ನರನ +ರಥ +ಕುಣಿದುದು +ಯುಧಿಷ್ಠಿರನ್
ಉರು +ವರೂಥ +ಸಗಾಢದೊಳು +ಚೀ
ತ್ಕರಿಸಿತ್+ಅನಿಲ್+ಆತ್ಮಜನ +ಸ್ಯಂದನ +ಮುಂದುವರಿಯುತಿರೆ
ಭರದಿ+ ಮಾದ್ರೀಸುತರ+ ತೇರುಗಳ್
ಉರವಣಿಸಲ್+ಅಭಿಮನ್ಯು +ಸಾತ್ಯಕಿ
ಯಿರದೆ +ಕೈಕೊಳಲಾಯಿತ್+ಇತ್ತಲು+ ಕದನಕ್+ಉದ್ಯೋಗ
ಅಚ್ಚರಿ:
(೧) ತೇರುಗಳು ಮುಂದುವರೆದುದನ್ನು ತಿಳಿಸಲು ಬಳಸಿದ ಪದಗಳು – ಕುಣಿ, ಚೀತ್ಕರಿಸು, ಸ್ಯಂದ, ಉರವಣಿಸು