ಪದ್ಯ ೧೧: ಭೀಮನು ಹೇಗೆ ದುರ್ಯೋಧನನ ತಲೆಗೆ ಹೊಡೆದನು?

ಹೆದರು ಹಿಂಗಿತು ನೆಲಕೆ ಮಾರು
ದ್ದಿದನು ಕರವನು ಸೂಸಿ ಹಾರಿದ
ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ
ಅದಿರೆ ನೆಲನವ್ವಳಿಸಿ ಮೇಲ್ವಾ
ಯಿದನು ಹೊಳಹಿನ ಹೊಯ್ಲ ಹೊದ
ರೆದ್ದುದು ವಿಭಾಡಿಸಿ ಭೀಮ ಹೊಯ್ದನು ನೃಪನ ಮಸ್ತಕವ (ಗದಾ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನು ನಿರ್ಭೀತನಾಗಿ ಕೈಯನ್ನು ನೆಲಕ್ಕುದ್ದಿ, ಜಾರಿಹೋಗಿದ್ದ ಗದೆಯನ್ನು ಹಿಡಿದುಕೊಂಡು, ರಕ್ತವನ್ನು ಸೆರಗಿನಿಂದೊರಸಿಕೊಂದು ನೆಲನಡುಗುವಂತೆ ಕೂಗಿ, ಮೇಲಕ್ಕೆದ್ದು ಹಾರಿ ದುರ್ಯೋಧನನ ತಲೆಯನ್ನು ಗದೆಯಿಂದ ಹೊಡೆದನು.

ಅರ್ಥ:
ಹೆದರು: ಭಯಗೊಳ್ಳು; ಹಿಂಗು: ಕಡಿಮೆಯಾಗು; ನೆಲ: ಭೂಮಿ; ಮಾರುದ್ದು: ಪರಸ್ಪರ ಉಜ್ಜು; ಕರ: ಹಸ್ತ; ಸೂಸು: ಎರಚು, ಚಲ್ಲು; ಹಾರಿ: ಲಂಘಿಸು; ಗದೆ: ಮುದ್ಗರ; ಕೊಂಡು: ಪಡೆದು ಸೆರಗು: ಬಟ್ಟೆಯ ತುದಿ; ಸಂತೈಸು: ಸಮಾಧಾನ ಪಡಿಸು; ಶೋಣಿತ: ರಕ್ತ; ಅದಿರು: ನಡುಕ, ಕಂಪನ; ಅವ್ವಳಿಸು: ತಾಗು; ಹೊಳಹು: ಪ್ರಕಾಶ; ಹೊಯ್ಲು: ಹೊಡೆತ; ಹೊದರು: ತೊಡಕು, ತೊಂದರೆ; ಎದ್ದು: ಮೇಲೇಳು; ವಿಭಾಡಿಸು: ನಾಶಮಾಡು; ಹೊಯ್ದು: ಹೊಡೆ; ನೃಪ: ರಾಜ; ಮಸ್ತಕ: ಶಿರ;

ಪದವಿಂಗಡಣೆ:
ಹೆದರು +ಹಿಂಗಿತು +ನೆಲಕೆ +ಮಾರು
ದ್ದಿದನು+ ಕರವನು +ಸೂಸಿ +ಹಾರಿದ
ಗದೆಯ +ಕೊಂಡನು +ಸೆರಗಿನಲಿ +ಸಂತೈಸಿ +ಶೋಣಿತವ
ಅದಿರೆ +ನೆಲನ್+ಅವ್ವಳಿಸಿ +ಮೇಲ್ವಾ
ಯಿದನು +ಹೊಳಹಿನ +ಹೊಯ್ಲ+ ಹೊದ
ರೆದ್ದುದು +ವಿಭಾಡಿಸಿ +ಭೀಮ +ಹೊಯ್ದನು +ನೃಪನ +ಮಸ್ತಕವ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಳಹಿನ ಹೊಯ್ಲ ಹೊದರೆದ್ದುದು
(೨) ನಿರ್ಭಯವನ್ನು ಹೇಳುವ ಪರಿ – ಹೆದರು ಹಿಂಗಿತು

ಪದ್ಯ ೪೨: ಸೈಂಧವನ ತಂದೆ ಯಾವ ಶಾಪವನ್ನಿತ್ತಿದ್ದನು?

ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ (ದ್ರೋಣ ಪರ್ವ, ೧೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಇವನ ತಲೆಯನ್ನು ಯಾರು ನೆಲಕ್ಕೆ ಕೆಡಹುವರೋ ಅವನ ತಲೆ ಬಿರಿದು ಬೀಳಲಿ ಎಂದು ಇವನ ತಂದೆಯ ಶಾಪವಿದೆ. ಈ ತಲೆಯು ಇವನ ತಂದೆಯ ಕೈಗೆ ಬೀಳುವ ಹಾಗೆ ಉಪಾಯವನ್ನು ಮಾಡು ಎಂದು ಕೃಷ್ಣನು ಹೇಳಲು, ಅರ್ಜುನನು ಹಾಗೆ ಆಗಲಿ ಎಂದು ಪಾಶುಪತಾಸ್ತ್ರಕ್ಕೆ ಆದೇಶವನ್ನಿತ್ತನು.

ಅರ್ಥ:
ತಂದೆ: ಅಪ್ಪ, ಪಿತ; ಶಾಪ: ನಿಷ್ಠುರದ ನುಡಿ; ತಲೆ: ಶಿರ; ನೆಲ: ಭೂಮಿ; ಕೆಡಹು: ಬೀಳು; ಮಸ್ತಕ: ತಲೆ; ಬಿರಿ: ಸೀಳು; ಬೀಳು: ಕುಸಿ; ಕೈ: ಹಸ್ತ; ಉಪಾಯ: ಯೋಚನೆ; ದಿವಿಜಪತಿ: ದೇವತೆಗಳ ರಾಜ (ಇಂದ್ರ); ಅಸ್ತ್ರ: ಶಸ್ತ್ರ; ಬೆಸಸು: ಕಾರ್ಯ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ಇವನ +ತಂದೆಯ +ಶಾಪವ್+ಆವವನ್
ಇವನ +ತಲೆಯನು +ನೆಲಕೆ +ಕೆಡಹುವನ್
ಅವನ +ಮಸ್ತಕ +ಬಿರಿದು +ಬೀಳಲಿ+ಎಂದನ್+ಈ+ ತಲೆಯ
ಇವನ +ತಂದೆಯ +ಕೈಯೊಳಗೆ +ಬೀ
ಳುವ+ಉಪಾಯವ +ಮಾಡು +ನೀನ್+ಎನೆ
ದಿವಿಜಪತಿ+ಸುತನ್+ಆ+ ಮಹಾಸ್ತ್ರಕೆ +ಬೆಸಸಿದನು +ಹದನ

ಅಚ್ಚರಿ:
(೧) ತಲೆ, ಮಸ್ತಕ – ಸಮಾನಾರ್ಥಕ ಪದ
(೨) ಇವನ ತಂದೆಯ – ೧, ೪ ಸಾಲಿನ ಮೊದಲ ಪದ

ಪದ್ಯ ೧೬: ಕಾಂಭೋಜಭೂಪನ ಅಂತ್ಯವನ್ನು ಯಾರು ಮಾಡಿದರು?

ಸರಳು ಸವೆಯಲು ಶಕ್ತಿಯಲಿ ಕಾ
ತರಿಸಿ ಕವಿದಿಡೆ ಶಕ್ತಿಯನು ಕ
ತ್ತರಿಸಿದನು ಕಾಂಭೋಜಭೂಪನ ಮುಕುಟಮಸ್ತಕವ
ಕೊರಳ ತೊಲಗಿಸಿ ಮುಂದೆ ನೂಕುವ
ವರಶ್ರುತಾಯುವಿನೊಡನೆ ಘನಸಂ
ಗರಕೆ ತೆಗೆದನು ಕಳುಹಿದನು ಕಾಂಭೋಜನೊಡನವರ (ದ್ರೋಣ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕಾಂಭೋಜನ ಬಾಣಗಳು ಮುಗಿಯಲು, ಅವನು ಕಾತರಿಸಿ ಶಕ್ತಿಯನ್ನು ಅರ್ಜುನನ ಮೇಲೆ ಪ್ರಯೋಗಿಸಿದನು. ಅರ್ಜುನನು ಅವನ ಕಿರೀಟ ಭೂಷಿತವಾದ ತಲೆಯನ್ನು ಕತ್ತರಿಸಿದನು. ಆಗ ಶ್ರುತಾಯುವು ಯುದ್ಧಕ್ಕೆ ಬಂದನು, ಘನ ಸಂಗ್ರಾಮವಾಯಿತು. ಶ್ರುತಾಯುವನ್ನು ಕಾಂಭೋಜನೊಡನೆ ಸಂಹರಿಸಿದನು.

ಅರ್ಥ:
ಸರಳು: ಬಾಣ; ಸವೆ: ಕೊರಗು; ಶಕ್ತಿ: ಬಲ; ಕಾತರ: ಕಳವಳ; ಕವಿ: ಮುಚ್ಚು; ಕತ್ತರಿಸು: ತುಂಡು ಮಾದು; ಭೂಪ: ರಾಜ; ಮುಕುಟ: ಕಿರೀಟ; ಮಸ್ತಕ: ಶಿರ; ಕೊರಳು: ಗಂಟಲು; ತೊಲಗು: ಹೊರಹಾಕು; ಮುಂದೆ: ಎದುರು; ನೂಕು: ತಳ್ಳು; ವರ: ಶ್ರೇಷ್ಠ; ಘನ: ಶ್ರೇಷ್ಠ; ಸಂಗರ: ಯುದ್ಧ; ತೆಗೆ: ಹೊರತರು; ಕಳುಹು: ತೆರಳು;

ಪದವಿಂಗಡಣೆ:
ಸರಳು +ಸವೆಯಲು +ಶಕ್ತಿಯಲಿ +ಕಾ
ತರಿಸಿ +ಕವಿದಿಡೆ +ಶಕ್ತಿಯನು +ಕ
ತ್ತರಿಸಿದನು +ಕಾಂಭೋಜಭೂಪನ+ ಮುಕುಟ+ಮಸ್ತಕವ
ಕೊರಳ +ತೊಲಗಿಸಿ +ಮುಂದೆ +ನೂಕುವ
ವರ+ಶ್ರುತಾಯುವಿನೊಡನೆ +ಘನ+ಸಂ
ಗರಕೆ +ತೆಗೆದನು +ಕಳುಹಿದನು +ಕಾಂಭೋಜನೊಡನವರ

ಅಚ್ಚರಿ:
(೧) ಜೋಡಿ ಪದಗಳು – ಸರಳು ಸವೆಯಲು, ಕಾತರಿಸಿ ಕವಿದಿಡೆ, ಕತ್ತರಿಸಿದನು ಕಾಂಭೋಜಭೂಪನ

ಪದ್ಯ ೧೪: ಶ್ರುತಾಯುಧನ ಅಂತ್ಯವು ಹೇಗಾಯಿತು?

ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ (ದ್ರೋಣ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ವರುಣನು ಶ್ರುತಾಯುಧನಿಗೆ ಆ ಗದೆಯನ್ನು ಕೊಟ್ಟು ಇದನ್ನು ಯುದ್ಧಮಾಡದಿರುವವರ ಮೇಲೆ ಪ್ರಯೋಗಿಸಬೇಡ ಎಂದು ಎಚ್ಚರಿಸಿದ್ದನು. ಹಾಗೇನಾದರೂ ನೀನು ಪ್ರಯೋಗಿಸಿದರೆ ಅದು ನಿನ್ನನ್ನೇ ಕೊಲ್ಲುತ್ತದೆ ಎಂದು ಹೇಳಿದ್ದನು. ಶ್ರುತಾಯುಧನು ಇದನ್ನು ಮರೆತು ಶ್ರೀಕೃಷ್ಣನ ಮೇಲೆ ಆ ಗದೆಯನ್ನು ಹೊಯ್ಯಲು, ಆ ಗದೆಯು ಕೋಪಗೊಂಡು ಶ್ರೀಕೃಷ್ಣನನ್ನು ಮುಟ್ಟದೆ ಶ್ರುತಾಯುಧನನ್ನೇ ಕೊಂದಿತು, ಏನಾಶ್ಚರ್ಯ ದೈವ ದ್ರೋಹಿಗೆ ಎಲ್ಲಿ ಒಳಿತಾದೀತು.

ಅರ್ಥ:
ವರುಣ: ನೀರಿನ ಅಧಿದೇವತೆ; ಉಪದೇಶ: ಬೋಧಿಸುವುದು; ಬರಿ: ಕೇವಲ; ಹೊಯ್ದು: ಹೊಡೆ; ಕೊಲು: ಸಾಯಿಸು; ನಿರುತ: ದಿಟ, ಸತ್ಯ; ಮರೆ: ಜ್ಞಾಪಕವಿಲ್ಲದ ಸ್ಥಿತಿ; ಹರಿ: ವಿಷ್ಣು; ಮಸ್ತಕ: ತಲೆ; ಕೆರಳು: ಕೋಪಗೊಳ್ಳು; ಗದೆ: ಮುದ್ಗರ; ಮುರಹರ: ಕೃಷ್ಣ; ಮುಟ್ಟು: ತಾಗು; ಮರಳಿ: ಮತ್ತೆ, ಹಿಂದಿರುಗು; ಕೊಂದು: ಸಾಯಿಸು; ಅಚ್ಚರಿ: ಆಶ್ಚರ್ಯ; ದೈವ: ಭಗವಂತ; ದ್ರೋಹ: ಮೋಸ; ಲೇಸು: ಒಳಿತು;

ಪದವಿಂಗಡಣೆ:
ವರುಣನಿತ್+ಉಪದೇಶ +ಬರಿದಿ
ದ್ದರನು+ ಹೊಯ್ದರೆ +ತನ್ನ +ಕೊಲುವುದು
ನಿರುತವ್+ಎನಲ್+ಅದ +ಮರೆದು +ಹೊಯ್ದನು +ಹರಿಯ+ ಮಸ್ತಕವ
ಕೆರಳಿ +ಗದೆ +ಮುರಹರನ +ಮುಟ್ಟದೆ
ಮರಳಿ +ತನ್ನನೆ +ಕೊಂದುದ್+ಏನ್
ಅಚ್ಚರಿಯೊ +ದೈವ+ದ್ರೋಹಿಗ್+ಎತ್ತಣ+ ಲೇಸುಬಹುದೆಂದ

ಅಚ್ಚರಿ:
(೧) ಹರಿ, ಮುರಹರ – ಕೃಷ್ಣನನ್ನು ಕರೆದ ಪರಿ
(೨) ಹಿತನುಡಿ – ದೈವದ್ರೋಹಿಗೆತ್ತಣ ಲೇಸುಬಹುದೆಂದ

ಪದ್ಯ ೫೫: ಕೌರವನ ಆಗಮನ ಹೇಗಿತ್ತು?

ನೆಗಹಿದವು ಕೈದೀವಿಗೆಯ ಸಾ
ಲುಗಳು ಹೊಂದಂಡಿಗೆಯ ದೂವಾ
ರಿಗಳು ವೆಂಠಣಿಸಿದರು ಸೀಗುರಿ ಮೊಗವ ಮೋಹಿದವು
ಉಗಿದ ಕಡಿತಲೆ ಮುಸುಕಿದವು ಚೌ
ರಿಗಳ ಡೊಂಕಣಿ ತುರುಗಿದವು ಮೌ
ಳಿಗಳ ಮಸ್ತಕದವರು ನೆಲನುಗ್ಗಡಿಸಲೈತಂದ (ದ್ರೋಣ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಕೌರವನು ಬರುವಾಗ ಕೈದೀವಿಗೆಗಳ ಸಾಲು ಸಾಲೇ ಬರುತ್ತಿತ್ತು. ಬಂಗಾರದ ಪಲ್ಲಕ್ಕಿಯನ್ನು ಹೊರುವವರು ನಡೆದರು. ಸೀಗುರಿಗಳು ಕಾಣಿಸಿದವು. ಸೆಳೆದ ಕತ್ತಿ ಡೊಂಕಣಿಗಳು ದೊರೆಗೆ ರಕ್ಷಣೆ ಕೊಡುತ್ತಿದ್ದವು. ತಲೆಯ ಮೇಲೆ ಕೈಯೆತ್ತಿ ಅವನ ಬಿರುದುಗಳನ್ನು ಉಚ್ಚ ಧ್ವನಿಯಲ್ಲಿ ಘೋಷಿಸುತ್ತಿದ್ದರು.

ಅರ್ಥ:
ನೆಗಹು: ಮೇಲೆತ್ತು; ದೀವಿಗೆ: ಸೊಡರು, ದೀಪಿಕೆ; ಸಾಲು: ಆವಳಿ; ಹೊಂದು: ದೂವಾರಿ: ಹೊರುವವನು; ವೆಂಠಣಿಸು: ಮುತ್ತಿಗೆ ಹಾಕು; ಸೀಗುರಿ: ಚಾಮರ; ಮೊಗ: ಮುಖ; ಮೋಹ: ಮೈ ಮರೆಯುವಿಕೆ ಎಚ್ಚರ ತಪ್ಪುವಿಕೆ; ಉಗಿ: ಹೊರಹಾಕು; ಕಡಿ: ತುಂಡುಮಾಡು, ತರಿ; ತಲೆ: ಶಿರ; ಮುಸುಕು: ಹೊದಿಕೆ; ಯೋನಿ; ಚೌರಿ: ಚೌರಿಯ ಕೂದಲು; ಡೊಂಕಣಿ: ಈಟಿ; ತುರುಗು: ಸಂದಣಿ, ದಟ್ಟಣೆ; ಮೌಳಿ: ಶಿರ; ಮಸ್ತಕ: ಶಿರ; ನೆಲ: ಭೂಮಿ; ಉಗ್ಗಡಿಸು: ಸಾರು, ಘೋಷಿಸು; ಅಂಡಲೆ: ಕಾಡು;

ಪದವಿಂಗಡಣೆ:
ನೆಗಹಿದವು +ಕೈದೀವಿಗೆಯ +ಸಾ
ಲುಗಳು +ಹೊಂದಂಡಿಗೆಯ+ ದೂವಾ
ರಿಗಳು +ವೆಂಠಣಿಸಿದರು +ಸೀಗುರಿ +ಮೊಗವ +ಮೋಹಿದವು
ಉಗಿದ +ಕಡಿತಲೆ +ಮುಸುಕಿದವು +ಚೌ
ರಿಗಳ +ಡೊಂಕಣಿ +ತುರುಗಿದವು +ಮೌ
ಳಿಗಳ +ಮಸ್ತಕದವರು +ನೆಲನ್+ಉಗ್ಗಡಿಸಲ್+ಐತಂದ

ಅಚ್ಚರಿ:
(೧) ಸಾಲುಗಳು, ದುವಾರಿಗಳು – ಪ್ರಾಸ ಪದಗಳು

ಪದ್ಯ ೭೪: ಸುಪ್ರತೀಕಗಜದ ಅಂತ್ಯವು ಹೇಗಾಯಿತು?

ಎಲವೆಲವೊ ಭಗದತ್ತ ಕಲಿತನ
ದಳವ ತೋರಿನ್ನೆನಗೆನುತ ಹೊಳೆ
ಹೊಳೆವ ಕುರಮ್ಬಿನಲಿ ಕೋದನು ಗಜದ ಮಸ್ತಕವ
ನಿಲುಕಿ ನೆತ್ತಿಯನೊಡೆದು ನಿಡುಪ
ಚ್ಚಳಕೆ ಹಾಯ್ದವು ಬಾಣ ದಿಕ್ಕರಿ
ನೆಲಕೆ ದಾಡೆಯನೂರಿ ಕೆಡೆದುದು ಸುಪ್ರತೀಕಗಜ (ದ್ರೋಣ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಎಲವೆಲವೋ, ಭಗದತ್ತ, ನಿನ್ನ ಪರಾಕ್ರಮದ ಆಳವನ್ನು ಇನ್ನು ತೋರಿಸು, ಎನ್ನುತ್ತಾ ಅರ್ಜುನನು ಹೊಳೆ ಹೊಳೆವ ಬಾಣದಿಂದ ಆನೆಯ ತಲೆಗೆ ಹೊಡೆಯಲು, ಬಾಣವು ನೆತ್ತಿಯನ್ನು ಸೀಳಿತು. ಗರಿಗಳು ಹೊರಬಂದವು. ದಿಗ್ಗಜ ಸುಪ್ರತೀಕವು ತನ್ನ ದಂತಗಳನ್ನು ನೆಲಕ್ಕೂರಿ ಬಿದ್ದಿತು.

ಅರ್ಥ:
ಕಲಿ: ಶೂರ; ದಳ: ಸೈನ್ಯ; ತೋರು: ಪ್ರದರ್ಶಿಸು; ಹೊಳೆ: ಪ್ರಕಾಶ; ಕೂರಂಬು: ಹರಿತವಾದ ಬಾಣ; ಕೋದು: ಹೊಡೆ; ಗಜ: ಆನೆ; ಮಸ್ತಕ: ತಲೆ; ನಿಲುಕು: ಚಾಚುವಿಕೆ; ನೆತ್ತಿ: ಶಿರ; ಒಡೆ: ಸೀಳು; ಹಾಯ್ದು: ಹೊಡೆ; ಬಾಣ: ಸರಳು; ದಿಕ್ಕರಿ: ದಿಗ್ಗಜ; ನೆಲ: ಭೂಮಿ; ದಾಡೆ: ದವಡೆ; ಊರು: ತೊಡೆ; ಗಜ: ಆನೆ;

ಪದವಿಂಗಡಣೆ:
ಎಲವೆಲವೊ +ಭಗದತ್ತ +ಕಲಿತನದ್
ಅಳವ +ತೋರಿನ್ನೆನಗ್+ಎನುತ +ಹೊಳೆ
ಹೊಳೆವ+ ಕೂರಂಬಿನಲಿ +ಕೋದನು +ಗಜದ +ಮಸ್ತಕವ
ನಿಲುಕಿ+ ನೆತ್ತಿಯನೊಡೆದು +ನಿಡುಪ
ಚ್ಚಳಕೆ+ ಹಾಯ್ದವು +ಬಾಣ +ದಿಕ್ಕರಿ
ನೆಲಕೆ +ದಾಡೆಯನೂರಿ+ ಕೆಡೆದುದು +ಸುಪ್ರತೀಕಗಜ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಲುಕಿ ನೆತ್ತಿಯನೊಡೆದು ನಿಡುಪಚ್ಚಳಕೆ

ಪದ್ಯ ೩೫: ಭೀಮ ಮತ್ತು ಸುಪ್ರತೀಕದ ಯುದ್ಧ ಹೇಗಿತ್ತು?

ಚಿಗಿದು ಹರಿಸುತ ಹಳಚಿದರೆ ಕುಲ
ದಿಗಿಭವೆದೆಯೊಡೆದವು ನಗಂಗಳ
ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ
ಜಿಗಿವ ರಕುತದ ಗದೆಯ ಬಿರುವೊ
ಯ್ಲುಗಳೊಲಗೆ ಕಿಡಿ ಮಸಗಿ ಕಬ್ಬೊಗೆ
ನೆಗೆಯೆ ಹೊಯ್ದನು ಭೀಮ ಲಂಘಿಸಿ ಗಜದ ಮಸ್ತಕವ (ದ್ರೋಣ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಮನು ಹಾರಿ, ಸುಪ್ರತೀಕದೊಡನೆ ಕಾಳಗಮಾಡಲು ದಿಗ್ಗಜಗಳ ಎದೆಯೊಡೆಯಿತು. ಬೆಟ್ಟಗಳು ಅಲುಗಾಡಿದವು. ಪಾದಗಳ ತುಳಿತಕ್ಕೆ ಭೂಮಿ ಕುಸಿಯಿತು. ಭೀಮನ ಗದೆಯ ಮೇಲೆಲ್ಲಾ ರಕ್ತಧಾರೆಯಾದವು. ಅವನು ಹೊಡೆದಾಗ ಕಿಡಿಗೆದರಿ ಕರಿಹೊಗೆ ಹಬ್ಬಿತು. ಭೀಮನು ಹಾರಿ ಆನೆಯ ತಲೆಗೆ ಹೊಡೆದನು.

ಅರ್ಥ:
ಚಿಗಿ: ಬೆರಳುಗಳಿಂದ ಚಿಮ್ಮಿಸು, ನೆಗೆ; ಹರಿ: ವಾಯು; ಹರಿಸುತ: ಭೀಮ; ಹಳಚು: ತಾಗುವಿಕೆ; ಕುಲ: ವಂಶ; ಇಭ: ಆನೆ; ಎದೆ: ವಕ್ಷಸ್ಥಳ; ಒಡೆ: ಸೀಳು; ನಗ: ಪರ್ವತ, ಬೆಟ್ಟ; ಬಿಗುಹು: ದೃಢತೆ; ಸಡಿಲಿಸು: ಬಿಗಿಯಿಲ್ಲದಿರುವುದು, ಶಿಥಿಲ; ನೆಗ್ಗು: ಕುಗ್ಗು, ಕುಸಿ; ಧರಣಿ: ಭೂಮಿ; ನೆಗ್ಗು: ಜಿಗಿ; ಚರಣ: ಪಾದ; ಹತಿ: ಪೆಟ್ಟು, ಹೊಡೆತ; ಜಿಗಿ: ನೆಗೆ; ರಕುತ: ನೆತ್ತರು; ಗದೆ: ಮುದ್ಗರ; ಬಿರು: ಗಟ್ಟಿಯಾದುದು; ಕಿಡಿ: ಬೆಂಕಿ; ಮಸಗು: ಹರಡು, ತಿಕ್ಕು; ಕಬ್ಬೊಗೆ: ಕರಿಹೊಗೆ; ನೆಗೆ: ಜಿಗಿ; ಹೊಯ್ದು: ಹೊಡೆ; ಲಂಘಿಸು: ಎಗರು; ಗಜ: ಆನೆ; ಮಸ್ತಕ: ಶಿರ;

ಪದವಿಂಗಡಣೆ:
ಚಿಗಿದು +ಹರಿಸುತ +ಹಳಚಿದರೆ +ಕುಲದಿಗ್
ಇಭವೆದೆ+ಒಡೆದವು +ನಗಂಗಳ
ಬಿಗುಹು +ಸಡಿಲಿತು +ಧರಣಿ +ನೆಗ್ಗಿತು +ಚರಣ +ಹತಿಗಳಲಿ
ಜಿಗಿವ +ರಕುತದ +ಗದೆಯ +ಬಿರುವೊಯ್ಲ್
ಉಗಳೊಲಗೆ+ ಕಿಡಿ+ ಮಸಗಿ +ಕಬ್ಬೊಗೆ
ನೆಗೆಯೆ +ಹೊಯ್ದನು +ಭೀಮ +ಲಂಘಿಸಿ +ಗಜದ +ಮಸ್ತಕವ

ಅಚ್ಚರಿ:
(೧) ಯುದ್ಧದ ತೀವ್ರತೆಯನ್ನು ಚಿತ್ರಿಸುವ ಪರಿ – ಕುಲದಿಗಿಭವೆದೆಯೊಡೆದವು ನಗಂಗಳ ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ

ಪದ್ಯ ೯೧: ಶರನಿಧಿಗೆ ರತ್ನಾಕರನೆಂಬ ಬಿರುದು ಏಕೆ ಸಾರ್ಥಕವಾಯಿತು?

ಅರರೆ ಶರಸಾಗರದ ಜೋದರ
ಸರಳಹತಿಯಲಿ ಮಂದರಾಚಲ
ಕರಿಯ ಮಸ್ತಕವೊಡೆದು ಕೆದರಿತು ಮೌಕ್ತಿಕವ್ರಾತ
ಹರೆದು ತಾರಗೆಯಾದವಭ್ರದೊ
ಳುರುಳೆ ರತ್ನಾಕರನೆನಿಪ್ಪಾ
ಬಿರುದು ಸಂದುದು ಶರನಿಧಿಗೆ ಭೂಪಾಲ ಕೇಳೆಂದ (ಭೀಷ್ಮ ಪರ್ವ, ೪ ಸಂಧಿ, ೯೧ ಪದ್ಯ)

ತಾತ್ಪರ್ಯ:
ಜೋದರ ಬಾಣಗಳ ಹೊಡೆತದಿಂದ ಆನೆಗಳ ಮುಖಗಳಿಗೆ ಹೊಡೆತ ಬಿದ್ದು ಅಲ್ಲಿದ್ದ ಮುತ್ತುಗಳು ಆಕಾಶದಲ್ಲಿ ಕಂಡವು. ಬಾಣಗಳ ಮೊತ್ತದ ನಡುವೆ ಅವುಗಳು ಬೀಳಲು ಶರನಿಧಿಗೆ ರತ್ನಾಕರನೆಂಬ ಬಿರುದು ಸಾರ್ಥಕವಾಯಿತು.

ಅರ್ಥ:
ಅರರೆ: ಆಶ್ಚರ್ಯದ ಸಂಕೇತ; ಶರ: ಬಾಣ ಸಾಗರ: ಸಮುದ್ರ; ಜೋದ: ಯೋಧ; ಸರಳ: ಬಾಣ; ಹತಿ: ಪೆಟ್ಟು, ಹೊಡೆತ; ಅಚಲ: ಬೆಟ್ಟ; ಕರಿ: ಆನೆ; ಮಸ್ತಕ: ತಲೆ, ಶಿರ; ಒಡೆ: ಸೀಳು; ಕೆದರು: ಹರಡು; ಮೌಕ್ತಿಕ: ಮುತ್ತಿನ; ವ್ರಾತ: ಗುಂಪು; ಹರೆದು: ವ್ಯಾಪಿಸು; ತಾರಕಿ: ನಕ್ಷತ್ರ; ಅಭ್ರ: ಆಗಸ; ಉರುಳು: ಕೆಳಕ್ಕೆ ಬೀಳು; ರತ್ನಾಕರ: ಸಾಗರ; ಬಿರುದು: ಗೌರವ ಸೂಚಕ ಪದ; ಸಂದು: ಪಡೆದುದು; ಶರನಿಧಿ: ಸಮುದ್ರ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರರೆ +ಶರ+ಸಾಗರದ+ ಜೋದರ
ಸರಳ+ಹತಿಯಲಿ +ಮಂದರಾಚಲ
ಕರಿಯ +ಮಸ್ತಕ+ಒಡೆದು +ಕೆದರಿತು +ಮೌಕ್ತಿಕ+ವ್ರಾತ
ಹರೆದು +ತಾರಗೆ+ಆದವ್+ಅಭ್ರದೊಳ್
ಉರುಳೆ +ರತ್ನಾಕರನ್+ಎನಿಪ್ಪ+ಆ
ಬಿರುದು +ಸಂದುದು +ಶರನಿಧಿಗೆ+ ಭೂಪಾಲ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಹರೆದು ತಾರಗೆಯಾದವಭ್ರದೊಳುರುಳೆ ರತ್ನಾಕರನೆನಿಪ್ಪಾಬಿರುದು ಸಂದುದು ಶರನಿಧಿಗೆ
(೨) ರತ್ನಾಕರ, ಶರನಿಧಿ, ಸಾಗರ – ಸಮನಾರ್ಥಕ ಪದ

ಪದ್ಯ ೭೭: ಆನೆಗಳಿಗೆ ಯಾವುದರಿಂದ ತಿವಿದರು?

ಕುಲಗಿರಿಗಳಗ್ರದೊಳು ಕೈಗಳ
ನಿಳುಹಿಸಿದನೊ ರವಿಯೆನಲು ಮಿಗೆ ಹೊಳೆ
ಹೊಳೆವ ಕೂರಂಕುಶವನಿಕ್ಕಿದರಿಭದ ಮಸ್ತಕಕೆ
ಉಲಿದವಿದಿರೊಳು ಡೌಡೆ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರಲೊದರಿದವು ನಿಸ್ಸಾಳಕೋಟಿಗಳು (ಭೀಷ್ಮ ಪರ್ವ, ೪ ಸಂಧಿ, ೭೭ ಪದ್ಯ)

ತಾತ್ಪರ್ಯ:
ಕುಲಗಿರಿಗಳ ಶಿಖರದ ಮೇಲೆ ಸೂರ್ಯನು ಕೈಯಿಡುವಂತೆ, ಆನೆಗಳ ನೆತ್ತಿಗೆ ಹೊಳೆಯುವ ಅಂಕುಶಗಳಿಂದ ತಿವಿದರು. ಎದುರಿನಲ್ಲಿ ಡೌಡೆಗಳನ್ನು ಬಾರಿಸಿದರು, ಬಿರುದಿನ ಕಹಳೆಗಳೂ, ಭೇರಿಗಳೂ ಮೊಳಗಿದವು

ಅರ್ಥ:
ಕುಲಗಿರಿ: ದೊಡ್ಡ ಬೆಟ್ಟ; ಅಗ್ರ: ಮುಂಭಾಗ, ತುದಿ; ಕೈ: ಹಸ್ತ; ರವಿ: ಸೂರ್ಯ; ಇಳುಹು: ಇಳಿಸು; ಮಿಗೆ: ಮತ್ತು; ಹೊಳೆ: ಪ್ರಕಾಶ; ಕೂರಂಕುಶ: ಹರಿತವಾದ ಅಂಕುಶ, ಆಯುಧ; ಇಕ್ಕು: ಇರಿಸು, ಇಡು; ಇಭ: ಆನೆ; ಮಸ್ತಕ: ತಲೆ, ಶಿರ; ಉಲಿ: ಶಬ್ದ; ಇದಿರು: ಎದುರು; ಡೌಡೆ: ನಗಾರಿ; ಬಿರುದು: ಗೌರವಸೂಚಕ ಪದ; ಆವಳಿ: ಗುಂಪು; ಕಹಳೆ:ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಊದು: ಧ್ವನಿ ಮಾಡು, ನುಡಿಸು; ನೆಲ: ಭೂಮಿ; ಮೊಳಗು: ಧ್ವನಿ, ಸದ್ದು; ಒದರು: ಕಿರುಚು, ಗರ್ಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ;

ಪದವಿಂಗಡಣೆ:
ಕುಲಗಿರಿಗಳ್+ಅಗ್ರದೊಳು +ಕೈಗಳನ್
ಇಳುಹಿಸಿದನೊ+ ರವಿಯೆನಲು +ಮಿಗೆ +ಹೊಳೆ
ಹೊಳೆವ +ಕೂರಂಕುಶವನ್+ಇಕ್ಕಿದರ್+ಇಭದ+ ಮಸ್ತಕಕೆ
ಉಲಿದವ್+ಇದಿರೊಳು +ಡೌಡೆ +ಬಿರುದಾ
ವಳಿಯ +ಕಹಳೆಗಳ್+ಊದಿದವು +ನೆಲ
ಮೊಳಗಿದಂತಿರಲ್+ಒದರಿದವು +ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುಲಗಿರಿಗಳಗ್ರದೊಳು ಕೈಗಳನಿಳುಹಿಸಿದನೊ ರವಿಯೆನಲು

ಪದ್ಯ ೬೩: ಗುಜ್ಜರ ದೇಶದ ರಾವುತರು ಹೇಗೆ ಹೋರಾಡಿದರು?

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ ತ
ತ್ತರಿದರಿದು ಹೊಯ್ದಾಡಿದರು ಗುಜ್ಜರದ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಗುಜ್ಜರ ದೇಶದ ರಾವುತರು ಎದುರಾಳಿಗಳನ್ನು ಜರೆದು ಹೊಡೆದ ಸದ್ದು ಸಿಡಿಲು ಬಡಿತದಂತೆ ಕೇಳಿತು. ದೂಹತ್ತಿಗಳ ಹೊಡೆತ ರಾವುತರ ತಲೆಗಳನ್ನು ಕಡಿದು ನೆಲಕ್ಕೆ ಅಪ್ಪಳಿಸಿತು. ಕುದುರೆಗಳನ್ನು ಅಟ್ಟಿದರೆ ಹೊಡೆತದಿಂದ ಕೂರ್ಮನು ಒರಲಿದನು. ಶತ್ರುಗಳನ್ನು ತರಿತರಿದು ಅವರು ಹೋರಾಡಿದರು.

ಅರ್ಥ:
ಜರೆ: ಬಯ್ಯುವುದು; ಸರಿಸ: ವೇಗ, ರಭಸ; ಏರು: ಮೇಲೇಳು; ಸಿಡಿಲು: ಅಶನಿ; ಉರುಬು: ಅತಿಶಯವಾದ ವೇಗ; ಘಾಯ: ಪೆಟ್ಟು; ಅರುಹು:ತಿಳಿಸು, ಹೇಳು; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಸ್ತಕ: ಶಿರ; ಇಳಿ: ಕೆಳಗೆ ಬಾಗು; ಕೊರೆ: ಕತ್ತರಿಸು; ಇಳೆ: ಭೂಮಿ; ಹಯ: ಕುದುರೆ; ನೂಕು: ತಳ್ಳು; ಒರಲು: ಅರಚು, ಕೂಗಿಕೊಳ್ಳು; ತಳ: ಸಮತಟ್ಟಾದ ಪ್ರದೇಶ; ಕಮಠ:ಕೂರ್ಮ; ತತ್ತರಿ: ಒಂದೇಸವನೆ ಹೊಡೆ; ಹೊಯ್ದಾಡು: ಹೋರಾಡು; ಗುಜ್ಜರ: ಒಂದು ಪ್ರಾಂತ್ಯದ ಹೆಸರು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಜರೆದು +ಸರಿಸದಲ್+ಏರಿದರೆ+ ಸಿಡಿಲ್
ಉರುಬಿದಂತಾಯಿತ್ತು +ಘಾಯವನ್
ಅರುಹಿದರೆ+ ದೂಹತ್ತಿ+ ರಾವ್ತರ+ ಮಸ್ತಕದೊಳ್+ಇಳಿದು
ಕೊರೆದುದ್+ಇಳೆಯನು +ಹಯವ +ನೂಕಿದಡ್
ಒರಲಿದನು +ತಳ+ ಕಮಠನ್+ಎನೆ +ತ
ತ್ತರಿದರಿದು +ಹೊಯ್ದಾಡಿದರು +ಗುಜ್ಜರದ+ ರಾವುತರು

ಅಚ್ಚರಿ:
(೧) ಕುದುರೆಗಳು ಓಡುವ ವೇಗವನ್ನು ಹೇಳುವ ಪರಿ – ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ