ಪದ್ಯ ೩೬: ಧರ್ಮಜನೇಕೆ ದುಃಖಿಸಿದನು?

ಈಸುದಿನ ಪರಿಯಂತ ಧರ್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ (ಗದಾ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಇಷ್ಟು ದಿನ ಧರ್ಮವನ್ನು ಬಿಡದೆ ಬಹಳ ಆಯಾಸವನ್ನು ಸಹಿಸಿಕೊಂಡಿರಿ, ಎನ್ನಲು ಧರ್ಮಜನು ಈ ದಿನ ಯುದ್ಧದಲ್ಲಿ ಧರ್ಮಕ್ಕೆ ಭಂಗ ಬಂದಿತು. ಜ್ಞಾನಿಗಳು ಎಷ್ಟು ನೊಂದಾರು. ಮಕುಟವನ್ನು ಭಂಗಿಸಿದುದು ಸಲ್ಲದ ಕೆಲಸ ಎಂದು ದುಃಖಿಸಿದನು.

ಅರ್ಥ:
ಈಸುದಿನ: ಇಷ್ಟುದಿನ; ದಿನ: ದಿವಸ; ಪರಿಯಂತ: ವರೆಗೆ, ತನಕ; ಧರ್ಮ: ಧಾರಣೆ ಮಾಡಿದುದು; ಮೀಸಲು: ಮುಡಿಪು; ಅಳಿ: ನಾಶ; ಬಳಸು: ಆವರಿಸುವಿಕೆ; ಆಯಾಸ: ಪ್ರಯತ್ನ, ಬಳಲಿಕೆ; ಸೈರಿಸು:ತಾಳು, ಸಹಿಸು; ಯುದ್ಧ: ರಣ, ಕಾಳಗ; ಕೇಳಿ: ಕ್ರೀಡೆ; ಘಾಸಿ: ಪೆಟ್ಟು; ಬುಧ: ವಿದ್ವಾಂಸ; ಏಸು: ಎಷ್ಟು; ಮನಗಾಣು: ತಿಳಿದುಕೊಳ್ಳು; ವೃಥ: ಸುಮ್ಮನೆ; ಅಭಿನಿವೇಶ: ಆಸಕ್ತಿ, ಅಭಿಪ್ರಾಯ; ಮಕುಟ: ಕಿರೀಟ; ಭಂಗ: ಮುರಿ; ಭೂಪ: ರಾಜ;

ಪದವಿಂಗಡಣೆ:
ಈಸುದಿನ+ ಪರಿಯಂತ +ಧರ್ಮದ
ಮೀಸಲ್+ಅಳಿಯದೆ +ಬಳಸಿ +ಬಹಳ
ಆಯಾಸವನು +ಸೈರಿಸಿದಿರ್+ಇಂದಿನ +ಯುದ್ಧ+ಕೇಳಿಯಲಿ
ಘಾಸಿಯಾದುದು +ಧರ್ಮಗತಿ +ಬುಧರ್
ಏಸು +ಮನಗಾಣರು +ವೃಥ+ಅಭಿನಿ
ವೇಶವಾದುದು +ಮಕುಟ+ಭಂಗದೊಳ್+ಎಂದನಾ +ಭೂಪ

ಅಚ್ಚರಿ:
(೧) ಈಸು, ಏಸು – ಪ್ರಾಸ ಪದ

ಪದ್ಯ ೩೦: ದುರ್ಯೋಧನನ ತನ್ನ ಪರಾಕ್ರಮವನ್ನು ಹೇಗೆ ಹೊಗಳಿಕೊಂಡನು?

ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯನನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣಶಕ್ತಿಗೆ ಭಂಗಬಾರದು ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ಎಲೈ ಸಂಜಯ ನೋಡುತ್ತಿರು, ನಾನು ಅರ್ಜುನನ ಹೊಟ್ಟೆಯಿಂದ ಕರ್ಣನನ್ನು, ಧರ್ಮಜನನ್ನು ಸೀಳಿ ಶಲ್ಯನನ್ನು, ನಕುಲ ಸಹದೇವರಿಬ್ಬರಿಂದ ಶಕುನಿ ಉಲೂಕರನ್ನು ತೆಗೆಯುತ್ತೇನೆ. ಕೃಷ್ಣನೇ ಎದುರಾಗಿ ಪಾಂಡವರನ್ನು ರಕ್ಷಿಸಿದರೂ, ನನ್ನ ತೋಳ್ಬಲಕ್ಕೆ ಭಂಗ ಬರುವುದಿಲ್ಲ; ನೋಡು: ವೀಕ್ಷಿಸು;

ಅರ್ಥ:
ನರ: ಅರ್ಜುನ; ಬಸುರು: ಹೊಟ್ಟೆ; ಭೂವರ: ರಾಜ; ಸೀಳು: ಕತ್ತರಿಸು; ಕಾತರ: ಕಳವಳ; ಯಮಳ: ನಕುಲ ಸಹದೇವ; ಹರಿಬ: ಕೆಲಸ, ಕಾರ್ಯ; ಇದಿರು: ಎದುರು; ಮುರಾಂತಕ: ಕೃಷ್ಣ; ಹರಹು: ವಿಸ್ತಾರ, ವೈಶಾಲ್ಯ;ಮದೀಯ: ನನ್ನ; ಬಾಹು: ಭುಜ, ತೋಳು; ಸ್ಫುರಣ: ಹೊಳೆ, ಕಂಪನ; ಶಕ್ತಿ: ಬಲ; ಭಂಗ: ಮುರಿ, ಚೂರುಮಾಡು; ನೋಡು: ವೀಕ್ಷಿಸು;

ಪದವಿಂಗಡಣೆ:
ನರನ +ಬಸುರಲಿ +ಕರ್ಣನನು +ಭೂ
ವರನ +ಸೀಳಿದು +ಶಲ್ಯನನು +ಕಾ
ತರಿಸದಿರು +ಶಕುನಿಯನ್+ಉಳೂಕನ +ಯಮಳರ್+ಇಬ್ಬರಲಿ
ಹರಿಬಕ್+ಇದಿರಾಗಲಿ +ಮುರಾಂತಕ
ಹರಹಿಕೊಳಲಿ +ಮದೀಯ+ಬಾಹು
ಸ್ಫುರಣಶಕ್ತಿಗೆ+ ಭಂಗಬಾರದು+ ನೋಡು +ನೀನೆಂದ

ಅಚ್ಚರಿ:
(೧) ನರನ, ಭೂವರನ – ಪ್ರಾಸ ಪದ
(೨) ದುರ್ಯೋಧನನ ಶಕ್ತಿಯ ವಿವರ – ಮದೀಯಬಾಹು ಸ್ಫುರಣಶಕ್ತಿಗೆ ಭಂಗಬಾರದು

ಪದ್ಯ ೩೪: ಪಾಂಡವರ ಸೈನ್ಯದ ಸ್ಥಿತಿ ಹೇಗಿತ್ತು?

ಬೆರಳ ಬಾಯ್ಗಳ ಬಿಸುಟ ಕೈದುಗ
ಳರೆಗಿರಿದ ಹಲ್ಲುಗಳ ಕೂಡಿದ
ಕರಪುಟದ ಬಿಡುದಲೆಯ ಬಸಿವೇರುಗಳ ಶೋಣಿತದ
ನರಳುವಾರೋಹಕರ ರಾವ್ತರ
ವರ ಮಹಾರಥ ಪಾಯದಳದು
ಬ್ಬರದ ಭಂಗವನೇನನೆಂಬೆನು ವೈರಿಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ವೈರಿಗಳಾದ ಪಾಂಡವರ ಸೈನ್ಯದಲ್ಲುಂಟಾದ ಕೆಡುಕನ್ನು ನಾನು ಹೇಗೆ ಹೇಳಲಿ? ಬೆರಳುಗಳನ್ನು ಬಾಯಲ್ಲಿಟ್ಟು, ಹಲ್ಲುಗಳನ್ನು ಕಿರಿದು, ಕೈ ಮುಗಿಯುವವರು, ತಲೆ ಕೂದಲನ್ನು ಬೆಲ್ಲಾಪಿಲ್ಲಿಯಾಗಿ ಕೆದರಿಕೊಂಡವರು, ಗಾಯಗಳಿಂದ ರಕ್ತ ಒಸರುತ್ತಿರುವವರು, ನರಳುತ್ತಿರುವ ಮಾವುತ, ರಾವುತ, ಮಹಾರಥರು, ಕಾಲಾಳುಗಳು ಎಲ್ಲೆಲ್ಲಿಯೂ ಆ ಸೈನ್ಯದಲ್ಲಿ ಕಾಣಿಸಿದರು.

ಅರ್ಥ:
ಬೆರಳು: ಅಂಗುಲಿ; ಬಿಸುಟು: ಹೊರಹಾಕು; ಕೈದು: ಆಯುಧ; ಅರೆ: ಅರ್ಧ; ಕಿರಿ: ಹಲ್ಲು ಕಿಸಿ; ಹಲ್ಲು: ದಂತ; ಕೂಡು: ಜೊತೆ; ಕರಪುಟ: ಹಸ್ತ; ಬಿಡು: ತೊರೆ; ತಲೆ: ಶಿರ; ಬಸಿ: ಒಸರು, ಸ್ರವಿಸು; ಏರು: ಹೆಚ್ಚಾಗು; ಶೋಣಿತ: ರಕ್ತ; ನರಳು: ಕೊರಗು; ಆರೋಹಕ: ಹೆಚ್ಚಾಗು; ರಾವ್ತರು: ಕುದುರೆ ಮೇಲೆ ಹೋರಾಡುವವ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಪಾಯದಳ: ಸೈನಿಕ; ಉಬ್ಬರ: ಅತಿಶಯ; ಭಂಗ: ಮುರಿಯುವಿಕೆ; ವೈರಿ: ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ಬೆರಳ +ಬಾಯ್ಗಳ +ಬಿಸುಟ +ಕೈದುಗಳ್
ಅರೆ+ಕಿರಿದ +ಹಲ್ಲುಗಳ +ಕೂಡಿದ
ಕರಪುಟದ+ ಬಿಡು+ತಲೆಯ +ಬಸಿವ್+ಏರುಗಳ+ ಶೋಣಿತದ
ನರಳುವ್+ಆರೋಹಕರ +ರಾವ್ತರ
ವರ+ ಮಹಾರಥ+ ಪಾಯದಳದ್
ಉಬ್ಬರದ +ಭಂಗವನೇನನ್+ಎಂಬೆನು +ವೈರಿ+ಸೇನೆಯಲಿ

ಅಚ್ಚರಿ:
(೧) ಹೆಚ್ಚು ಎಂದು ಹೇಳಲು ಆರೋಹಕರ ಪದದ ಬಳಕೆ
(೨) ಪಾಂಡವ ಸೈನಿಕರ ಮುಖದ ವೈಖರಿ – ಬೆರಳ ಬಾಯ್ಗಳ ಬಿಸುಟ ಕೈದುಗಳರೆಗಿರಿದ ಹಲ್ಲುಗಳ ಕೂಡಿದ
ಕರಪುಟದ ಬಿಡುದಲೆಯ ಬಸಿವೇರುಗಳ ಶೋಣಿತದ

ಪದ್ಯ ೨೨: ಮಹಾರಥರು ಹೇಗೆ ಸೋಲನ್ನುಂಡಿದರು?

ಘಾಸಿಯಾದುದು ಸೇನೆ ಸುಡಲೆನು
ತಾ ಸುಭಟರಿದಿರಾಗಿ ಕಾದಿದ
ರೈಸೆ ಬಳಿಕೇನವರ ಸತ್ವತ್ರಾಣವೇನಲ್ಲಿ
ಸೂಸುಗಣೆಗಳ ಸೊಗಡು ಹೊಯ್ದುಪ
ಹಾಸಕೊಳಗಾದರು ಮಹಾರಥ
ರೀಸು ಭಂಗಕೆ ಬಂದುದಿಲ್ಲ ನೃಪಾಲ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೈನ್ಯವು ಘಾಸಿಯಾಯಿತು. ಧೂ, ಈ ದುರ್ಗತಿಯನ್ನು ಸುಡಲಿ ಎಂದು ಸುಭಟರು ದ್ರೋಣನನ್ನೆದುರಿಸಿ ಕಾದಿದರು. ಅಷ್ಟೇ ಅವರ ಸತ್ವ ತ್ರಾಣಗಳು ಅಲ್ಲಿ ಏನೂ ಮಾಡಲಿಲ್ಲ. ಮುನ್ನುಗ್ಗುವ ಬಾಣಗಳ ಸೊಗಡು ಹೊಯ್ದು ಅವರು ನಗೆಗೀಡಾದರು. ಮಹಾರಥರು ಇಂತಹ ಸೋಲು ಅಪಮಾನಗಳನ್ನು ಎಂದೂ ಕಂಡಿರಲಿಲ್ಲ.

ಅರ್ಥ:
ಘಾಸಿ: ಆಯಾಸ, ದಣಿವು; ಸೇನೆ: ಸೈನ್ಯ; ಸುಡು: ದಹಿಸು; ಸುಭಟ: ಪರಾಕ್ರಮ; ಇದಿರು: ಎದುರು; ಕಾದು: ಹೋರಾಟ, ಯುದ್ಧ; ಐಸೆ: ಅಷ್ಟು; ಬಳಿಕ: ನಮ್ತರ; ಸತ್ವ: ಶಕ್ತಿ, ಬಲ; ತ್ರಾಣ: ಕಾಪು, ರಕ್ಷಣೆ; ಸೂಸು: ಎರಚು, ಚಲ್ಲು; ಕಣೆ: ಬಾಣ; ಸೊಗಡು: ಕಂಪು, ವಾಸನೆ; ಹೊಯ್ದು: ಹೊಡೆ; ಹಾಸ: ಸಂತೋಷ; ಮಹಾರಥ: ಪರಾಕ್ರಮಿ; ಭಂಗ: ಮುರಿಯುವಿಕೆ; ನೃಪಾಲ: ರಾಜ; ಕೇಳು: ಹೇಳು;

ಪದವಿಂಗಡಣೆ:
ಘಾಸಿಯಾದುದು+ ಸೇನೆ +ಸುಡಲೆನು
ತಾ +ಸುಭಟರ್+ಇದಿರಾಗಿ +ಕಾದಿದರ್
ಐಸೆ +ಬಳಿಕೇನ್+ಅವರ +ಸತ್ವತ್ರಾಣವೇನಲ್ಲಿ
ಸೂಸು+ಕಣೆಗಳ +ಸೊಗಡು +ಹೊಯ್ದ್+ಉಪ
ಹಾಸಕೊಳಗಾದರು+ ಮಹಾರಥರ್
ಈಸು +ಭಂಗಕೆ +ಬಂದುದಿಲ್ಲ +ನೃಪಾಲ +ಕೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೇನೆ ಸುಡಲೆನುತಾ ಸುಭಟರಿದಿರಾಗಿ

ಪದ್ಯ ೧೪: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹಂಗಿಸಿದನು?

ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣಿಯುಂಟಾಗೆ ಮೆಚ್ಚುವೆನೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಪಾಂಡವರ ಸೈನ್ಯವನ್ನು ಕಂಡು, ಭಲೇ, ಚೆನ್ನಾಗಿ ಜೋಡಿಸಿಕೊಂಡು ಬಂದಿದ್ದೀರಿ, ಶಿವನೂ ನಿಮ್ಮನ್ನು ಇದಿರಿಸಲಾರ ಎನ್ನಿಸುತ್ತದೆ. ಆದರೆ ಸಿಂಹದಂತಹ ಒಂದು ಬಾಣ ನಿಮ್ಮ ಮೇಲೆ ಬಂದರೆ, ಓಟದಲ್ಲಿ ಮೊಲವನ್ನು ಮೀರಿಸುತ್ತೀರಿ, ನಿರಾಯಾಸವಾಗಿ ಸತ್ತು ನಿಮ್ಮ ತಂದೆಗೆ ಅಪಕೀರ್ತಿಯನ್ನು ತರದಂತೆ ಯುದ್ಧಮಾಡುವ ಇಚ್ಛೆ ನಿಮಗಿದ್ದರೆ ಆಗ ಮೆಚ್ಚುತ್ತೇನೆ ಎಂದು ದ್ರೋಣನು ಸೈನಿಕರನ್ನು ಹೀಯಾಳಿಸಿದನು.

ಅರ್ಥ:
ಅಂಗವಣೆ: ರೀತಿ, ಬಯಕೆ; ಒಳ್ಳಿತು: ಚೆನ್ನು; ಮೊಗಸು: ಬಯಕೆ, ಅಪೇಕ್ಷೆ; ಅರಿ: ತಿಳಿ; ಮೊದಲು: ಆದಿ; ಸಿಂಗ: ಸಿಂಹ; ಆಯತ: ವಿಸ್ತಾರ; ಅಂಬು: ಬಾಣ; ಸುಳಿ: ಆವರಿಸು, ಮುತ್ತು; ಮುಂಚು: ಮುಂದೆ; ಭಂಗ: ಮುರಿಯುವಿಕೆ; ಬಿದ್ದು: ಬೀಳು; ಅಯ್ಯ: ತಂದೆ; ಹಳಿ: ದೂಷಿಸು, ನಿಂದಿಸು; ಹೊರಿಸು: ಭಾರವನ್ನು ಹೊರುವಂತೆ ಮಾಡು; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ;

ಪದವಿಂಗಡಣೆ:
ಅಂಗವಣೆ+ಒಳ್ಳಿತು +ಮಹಾದೇ
ವಂಗೆ+ ಮೊಗಸುವಡ್+ಅರಿದು+ ಮೊದಲಲಿ
ಸಿಂಗದ್+ಆಯತದ್+ಅಂಬು +ಸುಳಿದರೆ +ಮೊಲನ +ಮುಂಚುವಿರಿ
ಭಂಗವಿಲ್ಲದೆ +ಬಿದ್ದ +ನಿಮ್ಮ್
ಅಯ್ಯಂಗೆ+ಹಳಿವನು +ಹೊರಿಸದಿಹ+ ಮನದ್
ಅಂಗವಣಿ+ಉಂಟಾಗೆ +ಮೆಚ್ಚುವೆನೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಅಂಗವಣೆಯೊಳ್ಳಿತು ಮಹಾದೇವಂಗೆ ಮೊಗಸುವಡರಿದು; ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ

ಪದ್ಯ ೨೯: ಪಾಂಡವ ಸೇನಾನಾಯಕರು ಹೇಗೆ ಮುನ್ನುಗ್ಗಿದರು?

ಎಲೆಲೆ ದೊದ್ದೆಗರೇಕೆ ಕೊಬ್ಬಿದ
ರಳವನರಿಯದೆ ನುಗ್ಗು ಮುರಿದರೆ
ದಳದ ದೊರೆಗದು ಭಂಗವೇ ಬಾಹಿರನ ಹೊಯ್ಯೆನುತ
ಒಳಸರಿವ ನಾಯಕರ ನೆರೆ ಮೂ
ದಲಿಸಿ ಲಗ್ಗೆಯ ಲಹರಿಯಲಿ ಪಡಿ
ತಳಿಸಿದರು ಪಾಂಚಾಲ ಸೃಂಜಯ ಮತ್ಸ್ಯ ಕೇಕೆಯರು (ದ್ರೋಣ ಪರ್ವ, ೧೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎಲೋ ಕ್ಷುಲ್ಲಕರೇಕೆ ಯೋಗ್ಯತೆಯರಿಯದೆ ಮಾತಾಡುತ್ತಾರೆ? ಸೈನ್ಯ ಸೋತರೆ ದೊರೆಗೆ ಅಪಮಾನವಾಗುವುದಾದರೂ ಹೇಗೆ? ಆ ಬಾಹಿರನನ್ನು ಹೊಡೆಯಿರಿ ಎಂದು ಹಿಮ್ಮೆಟ್ಟುವ ಸೇನಾನಾಯಕರನ್ನು ಮೂದಲಿಸಿ, ವೈರಿ ಸೈನ್ಯಕ್ಕೆ ಆಕ್ರಮಣಮಾಡಲು, ಸೇನಾಸನ್ನದ್ಧರಾಗಿ ಪಾಂಚಾಲ, ಸೃಂಜಯ, ಮತ್ಸ್ಯ, ಕೇಕೆಯರು ನುಗ್ಗಿದರು.

ಅರ್ಥ:
ದೊದ್ದೆ: ಗುಂಪು, ಸಮೂಹ; ಕೊಬ್ಬು: ಹೆಚ್ಚಾಗು, ಅಧಿಕವಾಗು; ಅರಿ: ತಿಳಿ; ನುಗ್ಗು: ನೂಕು; ಮುರಿ: ಸೀಳು; ದಳ: ಸೈನ್ಯ; ದೊರೆ: ರಾಜ; ಭಂಗ: ತುಂಡು, ನಾಶ; ಬಾಹಿರ: ಹೊರಗಿನವ; ಹೊಯ್ಯ್: ಹೊಡೆ; ಒಳಸರಿ: ಹಿಮ್ಮೆಟ್ಟು; ನಾಯಕ: ಒಡೆಯ; ನೆರೆ: ಗುಂಪು; ಮೂದಲಿಸು: ಹಂಗಿಸು; ಲಗ್ಗೆ: ಮುತ್ತಿಗೆ, ಆಕ್ರಮಣ; ಲಹರಿ: ರಭಸ, ಆವೇಗ; ಪಡಿ: ಸಮಾನವಾದುದು, ಎಣೆ; ಅಳವು: ಶಕ್ತಿ;

ಪದವಿಂಗಡಣೆ:
ಎಲೆಲೆ +ದೊದ್ದೆಗರೇಕೆ +ಕೊಬ್ಬಿದರ್
ಅಳವನ್+ಅರಿಯದೆ +ನುಗ್ಗು +ಮುರಿದರೆ
ದಳದ+ ದೊರೆಗದು +ಭಂಗವೇ +ಬಾಹಿರನ+ ಹೊಯ್ಯೆನುತ
ಒಳಸರಿವ +ನಾಯಕರ +ನೆರೆ +ಮೂ
ದಲಿಸಿ+ ಲಗ್ಗೆಯ +ಲಹರಿಯಲಿ+ ಪಡಿ
ತಳಿಸಿದರು +ಪಾಂಚಾಲ +ಸೃಂಜಯ +ಮತ್ಸ್ಯ +ಕೇಕೆಯರು

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಲಗ್ಗೆಯ ಲಹರಿಯಲಿ; ಪಡಿತಳಿಸಿದರು ಪಾಂಚಾಲ; ಭಂಗವೇ ಬಾಹಿರನ

ಪದ್ಯ ೧೬: ಕೌರವರ ಪರಾಭವ ಹೇಗೆ ಕಂಡಿತು?

ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇಳಿದ ಕುದುರೆಗಳಿಗೆ, ಬಿಟ್ಟೋಡಿದ ರಥಗಳಿಗೆ, ಕೆಳಗಿಳಿಸಿದ ಧ್ವಜಗಳಿಗೆ, ಕೈಯಿಂದ ಕೆಳಬಿದ್ದ ಆಯುಧಗಳಿಗೆ, ಸರಿಸಿ ಹಾಕಿದ ಕವಚ, ಸೀಸಕಗಳಿಗೆ, ಕಳಚಿಹಾಕಿದ ಆಭರನಗಳಿಗೆ, ಎಸೆದ ಕೊಡೆಗಳಿಗೆ ಲೆಕ್ಕವೇ ಇಲ್ಲ. ನಿನ್ನ ವೀರರು ಇಷ್ಟೊಂದು ಕೊಲೆಗೆ ಅಪಮಾನಕ್ಕೆ ಎಂದೂ ಸಿಕ್ಕಿರಲಿಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಕುದುರೆ: ಅಶ್ವ; ಬಿಸುಟು: ಹೊರಹಾಕು; ರಥ: ಬಂಡಿ; ಸಂಕುಳ: ಗುಂಪು; ಹಾಯ್ಕು: ಇಡು, ಇರಿಸು; ಟೆಕ್ಕೆ: ಬಾವುಟ, ಧ್ವಜ; ಕೈ: ಹಸ್ತ; ಆಯುಧ: ಶಸ್ತ್ರ; ತತಿ: ಗುಂಪು; ನೂಕು: ತಳ್ಳು; ಜೋಡು: ಜೊತೆ; ಸೀಸಕ: ಶಿರಸ್ತ್ರಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಆಭರಣ: ಒಡವೆ; ಆತಪತ್ರ: ಕೊಡೆ, ಛತ್ರಿ; ಆವಳಿ: ಗುಂಪು; ಕಾಣು: ತೋರು; ಪರಿ: ರೀತಿ; ಕೊಲೆ:ಸಾವು; ಭಂಗ: ಮುರಿಯುವಿಕೆ; ಬಿರುದರು: ವೀರರು;

ಪದವಿಂಗಡಣೆ:
ಇಳಿದ +ಕುದುರೆಗೆ +ಬಿಸುಟ +ರಥ+ಸಂ
ಕುಳಕೆ +ಹಾಯ್ಕಿದ +ಟೆಕ್ಕೆಯಕೆ +ಕೈ
ಬಳಿಚಿದ್+ಆಯುಧ+ತತಿಗೆ +ನೂಕಿದ +ಜೋಡು +ಸೀಸಕಕೆ
ಕಳಚಿದ್+ಆಭರಣ+ಆತಪತ್ರ
ಆವಳಿಗೆ +ಕಾಣೆನು +ಕಡೆಯನೀ +ಪರಿ
ಕೊಲೆಗೆ +ಭಂಗಕೆ +ನಿನ್ನ +ಬಿರುದರು+ ಬಂದುದಿಲ್ಲೆಂದ

ಅಚ್ಚರಿ:
(೧) ವೀರರು ಎಂದು ಹೇಳಲು – ಬಿರುದರು ಪದದ ಬಳಕೆ
(೨) ಸಂಕುಳ, ತತಿ – ಸಾಮ್ಯಾರ್ಥ ಪದ

ಪದ್ಯ ೨೮: ಸೈನ್ಯವು ಏಕೆ ಮತ್ತೆ ಒಟ್ಟುಗೂಡಿತು?

ಮಾತು ಹಿಂಚಿತು ತೇರು ಸೇನಾ
ವ್ರಾತವನು ಹಿಂದಿಕ್ಕಿ ಗಂಗಾ
ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ
ಸೋತು ಚೆಲ್ಲಿದ ಸೇನೆ ಹರ್ಷದೊ
ಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ ಕೇಳು ಜನಮೇಜಯ ಮಹೀಪಾಲ (ಭೀಷ್ಮ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ಮಾತು ಮುಗಿಯುವುದರೊಳಗಾಗಿ ಶ್ರೀಕೃಷ್ಣನು ಅರ್ಜುನನ ರಥವನ್ನು ಭೀಷ್ಮನೆದುರಿನಲ್ಲಿ ನಿಲ್ಲಿಸಿದನು. ಆ ಮಹಾದ್ಭುತವನ್ನು ಕಂಡು, ಸೋತು ಓಡಿಹೋಗಿದ್ದ ಸೈನ್ಯವು ಮತ್ತೆ ಒಟ್ಟಾಗಿ ನಿಂತಿತು. ಇನ್ನು ಸೋಲೆಂಬ ಮಾತೆಲ್ಲಿ ಉಳಿಯಿತು.

ಅರ್ಥ:
ಮಾತು: ನುಡಿ; ಹಿಂಚು: ತಡ, ಸಾವಕಾಶ; ತೇರು: ಬಂಡಿ; ಸೇನೆ: ಸೈನ್ಯ; ವ್ರಾತ: ಗುಂಪು; ಹಿಂದೆ: ಹಿಂಬದಿ; ಗಂಗಾಜಾತ: ಗಂಗೆಯಲ್ಲಿ ಹುಟ್ಟಿದ (ಭೀಷ್ಮ); ನಿಂದು: ನಿಲ್ಲು; ಅದ್ಭುತ: ಆಶ್ಚರ್ಯ; ಸೋತು: ಪರಾಭವ; ಚೆಲ್ಲು: ಹರಡು; ಹರ್ಷ: ಸಮ್ತಸ; ನಿಂದು: ನಿಲ್ಲು; ಭಂಗ: ಮುರಿಯುವಿಕೆ; ಕೇಳು: ಆಲಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಮಾತು +ಹಿಂಚಿತು +ತೇರು +ಸೇನಾ
ವ್ರಾತವನು +ಹಿಂದಿಕ್ಕಿ +ಗಂಗಾ
ಜಾತನಿದಿರಲಿ+ ನಿಂದುದ್+ಏನೆಂಬೆನು+ ಮಹಾದ್ಭುತವ
ಸೋತು +ಚೆಲ್ಲಿದ +ಸೇನೆ +ಹರ್ಷದೊಳ್
ಆತು +ನಿಂದುದು+ ಮತ್ತೆ+ ಭಂಗದ
ಮಾತದ್+ಏತಕೆ +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ಸೈನ್ಯವು ಹುರಿದುಂಬಿದ ಪರಿ – ಸೋತು ಚೆಲ್ಲಿದ ಸೇನೆ ಹರ್ಷದೊಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ

ಪದ್ಯ ೩೪: ಅರ್ಜುನನು ಏನನ್ನು ಗಮನಿಸಿ ಪ್ರಶ್ನಿಸಿದನು?

ಉಳಿದ ಮೂವರು ಕಲಿತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲಕೆ ಭಂಗವ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ (ವಿರಾಟ ಪರ್ವ, ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭೀಮ ನಕುಲ ಸಹದೇವರು ತ್ರಿಗರ್ತರನ್ನು ಗೆದ್ದ ರೀತಿಯನ್ನೂ, ಕೌರವ ಸೈನ್ಯದ ಪರಾಜಯವನ್ನು ಅರ್ಜುನನು ಹೇಳುತಿರಲು, ಧರ್ಮಜನ ಹಣೆಯ ಗಾಯವನು ನೋಡಿದನು. ಇದೇನು ಅಣ್ಣನ ಹಣೆಯಿಂದ ಚಿಕ್ಕ ರಕ್ತ ಬಿಂದುಗಳು ಒಸರುತ್ತಿವೆ ಎಂದು ಅರ್ಜುನನು ಕೇಳಿದನು.

ಅರ್ಥ:
ಉಳಿದ: ಮಿಕ್ಕ; ಕಲಿ: ಶೂರ; ತ್ರಿಗರ್ತ: ಒಂದು ದೇಶ; ಗೆಲಿದು: ಜಯಿಸು; ಪರಿ: ರೀತಿ; ಬಲ: ಸೈನ್ಯ; ಭಂಗ: ತುಂಡು, ಚೂರು; ನಿಲುಕಿ: ಮುಟ್ಟು, ತಾಗು; ರಾಯ: ರಾಜ; ಹಣೆ: ಲಲಾಟ; ಗಾಯ: ಪೆಟ್ಟು; ಬಳಿಕ: ನಂತರ; ಕಂಡು: ನೋಡು; ನೊಸಲು: ಹಣೆ; ಇಳಿ: ಕೆಳಕ್ಕೆ ಜಾರು; ನಸು: ಕೊಂಚ, ಸ್ವಲ್ಪ; ರಕ್ತ: ನೆತ್ತರು; ಬಿಂದು: ಹನಿ, ತೊಟ್ಟು;

ಪದವಿಂಗಡಣೆ:
ಉಳಿದ +ಮೂವರು +ಕಲಿ+ತ್ರಿಗರ್ತರ
ಗೆಲಿದ +ಪರಿಯನು +ಪಾರ್ಥ +ಕೌರವ
ಬಲಕೆ+ ಭಂಗವ +ತಂದ +ಪರಿಯನು +ಹೇಳುತಿರುತಿರಲು
ನಿಲುಕಿ+ ರಾಯನ +ಹಣೆಯ +ಗಾಯವ
ಬಳಿಕ+ ಕಂಡನ್+ಇದೇನು +ನೊಸಲಿಂದ್
ಇಳಿವುತಿದೆ +ನಸು +ರಕ್ತಬಿಂದುಗಳ್+ಎಂದನಾ +ಪಾರ್ಥ

ಅಚ್ಚರಿ:
(೧) ತ್ರಿಗರ್ತರ ಗೆಲಿದ ಪರಿ, ಕೌರವ ಬಲಕೆ ಭಂಗ ತಂದ ಪರಿ – ಪರಿ ಪದದ ಬಳಕೆ
(೨) ಹಣೆ, ನೊಸಲು – ಸಮನಾರ್ಥಕ ಪದ

ಪದ್ಯ ೧: ಕೌರವರು ಹೇಗೆ ಹಿಂದಿರುಗಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೌನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ (ವಿರಾಟ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸೋಲು ಅಪಮಾನಗಳಿಂದ ಭಂಗಪಟ್ಟ ಕೌರವರು ಹಸ್ತಿನಾಪುರಕ್ಕೆ ಬಂದರು. ಮುಖಕ್ಕೆ ಮುಸುಕು ಹಾಕಿಕೊಂಡು, ವಾದ್ಯದ ಅಬ್ಬರವಿಲ್ಲದೆ ದುಃಖಸಂತಪ್ತರಾಗಿ ತಮ್ಮ ಮನೆಗಳಿಗೆ ಹೊಕ್ಕರು.

ಅರ್ಥ:
ಧರಿತ್ರೀ: ಭೂಮಿ; ಪಾಲ: ರಕ್ಷಕ; ಭಂಗ: ತುಂಡು, ಚೂರು; ಅಖಿಳ: ಎಲ್ಲಾ; ಜಾಲ: ಕಪಟ, ಮೋಸ; ತಿರುಗು: ಚಲಿಸು, ಸುತ್ತು; ದುಗುಡ: ದುಃಖ; ಗಜಪುರ: ಹಸ್ತಿನಾಪುರ; ನಡೆ: ಚಲಿಸು; ಮುಸುಕು: ಹೊದಿಕೆ; ಮೊಗ: ಮುಖ; ವಾದ್ಯ: ಸಂಗೀತದ ಸಾಧನ; ಮೇಳ: ಗುಂಪು; ಮೌನ: ನಿಶ್ಯಬ್ದ, ನೀರವತೆ; ಅಖಿಳ: ಎಲ್ಲಾ; ನೃಪ: ರಾಜ; ನಿಜಾಲಯ: ತಮ್ಮ ಮನೆ; ಬಂದು: ಆಗಮಿಸು; ಹೊಕ್ಕು: ಸೇರು; ಹೊತ್ತು: ಕರಿಕಾಗು; ದುಗುಡ: ದುಃಖ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಭಂಗದಲ್+ಅಖಿಳ +ಕೌರವ
ಜಾಲ +ತಿರುಗಿತು +ದುಗುಡದಲಿ +ಗಜಪುರಕೆ+ ನಡೆತಂದು
ಮೇಲು +ಮುಸುಕಿನ+ ಮೊಗದ+ ವಾದ್ಯದ
ಮೇಳ +ಮೌನದಲ್+ಅಖಿಳ +ನೃಪರು +ನಿಜ
ಆಲಯಂಗಳ+ ಬಂದು +ಹೊಕ್ಕರು +ಹೊತ್ತ +ದುಗುಡದಲಿ

ಅಚ್ಚರಿ:
(೧) ಮ ಕಾರದ ಪದಗಳು – ಮೇಲು ಮುಸುಕಿನ ಮೊಗದ ವಾದ್ಯದ ಮೇಳ ಮೌನದಲಖಿಳ