ಅತ್ತ ಸಾತ್ಯಕಿಗಾಯ್ತು ರಣದೊ
ತ್ತೊತ್ತೆ ಮೋಹರ ಮಧ್ಯರಂಗದೊ
ಳಿತ್ತಲರ್ಜುನನಾಹವವನೇನೆಂಬೆನದ್ಭುತವ
ಮತ್ತೆ ಕೃಷ್ಣನ ಶಂಖನಾದವ
ನಿತ್ತಲವನೀಪಾಲ ಕೇಳಿದು
ಚಿತ್ತ ಕದಡಿದುದಡಿಗಡಿಗೆ ಮನನೊಂದು ಬಿಸುಸುಯ್ದು (ದ್ರೋಣ ಪರ್ವ, ೧೧ ಸಂಧಿ, ೧೮ ಪದ್ಯ)
ತಾತ್ಪರ್ಯ:
ಹಂಸವ್ಯೂಹದಲ್ಲಿ ಸಾತ್ಯಕಿಯ ಸುತ್ತಲೂ ಯುದ್ಧವು ಒತ್ತರಿಸಿತ್ತು. ಇತ್ತ ಅರ್ಜುನನೂ ಅದ್ಭುತವಾಗಿ ಹೋರಾಡುತ್ತಿದ್ದನು. ಕೃಷ್ಣನು ಮತ್ತೆ ಪಾಂಚಜನ್ಯವನ್ನೂದಿದನು. ಕೃಷ್ಣನ ಶಂಖನಾದವನ್ನು ಕೇಳಿ ಯುಧಿಷ್ಠಿರನ ಮನಸ್ಸು ಕದಡಿ ನೋವನ್ನುಂಡು ನಿಟ್ಟುಸಿರು ಬಿಟ್ಟನು.
ಅರ್ಥ:
ರಣ: ಯುದ್ಧ; ಒತ್ತು: ಆಕ್ರಮಿಸು, ಮುತ್ತು; ಮೋಹರ: ಯುದ್ಧ; ಮಧ್ಯ: ನಡುವೆ; ರಂಗ: ಯುದ್ಧ; ಆಹವ: ಯುದ್ಧ; ಅದ್ಭುತ: ಆಶ್ಚರ್ಯ; ಶಂಖ: ಕಂಬು; ನಾದ: ಶಬ್ದ; ಅವನೀಪಾಲ: ರಾಜ; ಕೇಳು: ಆಲಿಸು; ಚಿತ್ತ: ಮನಸ್ಸು; ಕದಡು: ಕಲಕು; ಅಡಿಗಡಿ: ಮತ್ತೆ ಮತ್ತೆ; ಮನ: ಮನಸ್ಸು; ನೊಂದು: ನೋವುಂಡು; ಬಿಸುಸುಯ್: ನಿಟ್ಟುಸಿರು ಬಿಡು;
ಪದವಿಂಗಡಣೆ:
ಅತ್ತ +ಸಾತ್ಯಕಿಗಾಯ್ತು +ರಣದ್
ಒತ್ತೊತ್ತೆ +ಮೋಹರ +ಮಧ್ಯ+ರಂಗದೊಳ್
ಇತ್ತಲ್+ಅರ್ಜುನನ್+ಆಹವವನ್+ಏನೆಂಬೆನ್+ಅದ್ಭುತವ
ಮತ್ತೆ +ಕೃಷ್ಣನ +ಶಂಖನಾದವನ್
ಇತ್ತಲ್+ಅವನೀಪಾಲ +ಕೇಳಿದು
ಚಿತ್ತ +ಕದಡಿದುದ್+ಅಡಿಗಡಿಗೆ +ಮನನೊಂದು +ಬಿಸುಸುಯ್ದು
ಅಚ್ಚರಿ:
(೧) ಅತ್ತ, ಇತ್ತ, ಚಿತ್ತ – ಪ್ರಾಸ ಪದಗಳು