ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ
ಮಲೆತು ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ (ಗದಾ ಪರ್ವ, ೫ ಸಂಧಿ, ೫೨ ಪದ್ಯ)
ತಾತ್ಪರ್ಯ:
ಆಗ ಭೀಮನು, ಹೇ ಕೃಷ್ಣ ನಿನ್ನ ಮುಂದೆ ನಾನು ಹೆಚ್ಚಿನವನೆಂದು ಹೇಳಿಕೊಳ್ಳುವುದಿಲ್ಲ. ನಿಮ್ಮ ಪಾದಗಳ ಅಮೃತಸಮಾನವಾದ ಕರುಣೆಯೇ ನನಗೆ ವಜ್ರಕವಚ. ನನ್ನನ್ನು ವಿರೋಧಿಸಿ ನಿಂತವನೊಡನೆ ಹೋರಾಡಿ ಗದೆಯಿಂದ ಅರಸನ ಬಿರುದುಗಳನ್ನು ಬರೆದು ಎತ್ತಿ ಹಿಡಿಯುತ್ತೇನೆ ಎಂದನು.
ಅರ್ಥ:
ಮುರಾಂತಕ: ಕೃಷ್ಣ; ಮುಂದೆ: ಎದುರು; ಅಗ್ಗಳೆ: ಶ್ರೇಷ್ಠ; ನಿಮ್ಮಡಿ: ನಿಮ್ಮ ಪಾದ; ಸುಧಾ: ಅಮೃತ; ಕರುಣ: ದಯೆ; ಅವಧಾನ: ಏಕಚಿತ್ತತೆ; ವಜ್ರ: ಗಟ್ಟಿ; ಕವಚ: ಹೊದಿಕೆ; ಮಲೆ: ಉದ್ಧಟತನದಿಂದ ಕೂಡಿರು; ಹಗೆ: ವೈರ; ಪಡಿ: ಎದುರು; ಮುಖ: ಎದುರು; ಬಲುವಲಗೆ: ಹೋರಾಡು; ಗದೆ: ಮುದ್ಗರ; ರಾಯ: ರಾಜ; ಬಲುಹ: ಶಕ್ತಿ; ಬಿರುದಾವಳಿ: ಗೌರವ ಸೂಚಕ ಪದ; ಬರೆ: ಲಿಖಿತ; ಕೇಳು: ಆಲಿಸು;
ಪದವಿಂಗಡಣೆ:
ಎಲೆ +ಮುರಾಂತಕ +ನಿಮ್ಮ +ಮುಂದ್
ಅಗ್ಗಳೆಯತನವ್+ಎಮಗಿಲ್ಲ+ ನಿಮ್ಮಡಿ
ಗಳ+ ಸುಧಾ+ಕರುಣ+ಅವಧಾನವೆ +ವಜ್ರ+ಕವಚವಲಾ
ಮಲೆತು +ಹಗೆವನ +ಪಡಿಮುಖದ +ಬಲು
ವಲಗೆಯಲಿ +ಗದೆಯಿಂದ +ರಾಯನ
ಬಲುಹ+ ಬಿರುದಾವಳಿಯ +ಬರೆವೆನು +ಕೃಷ್ಣ+ ಕೇಳೆಂದ
ಅಚ್ಚರಿ:
(೧) ಕೃಷ್ಣನ ಗುಣಗಾನ – ನಿಮ್ಮಡಿಗಳ ಸುಧಾಕರುಣಾವಧಾನವೆ ವಜ್ರಕವಚವಲಾ