ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠಿರ
ಸಕಲ ಬಲ ಪರಿಶೇಷವೇನೆಂದರಸ ಬೆಸಗೊಂಡ (ಗದಾ ಪರ್ವ, ೩ ಸಂಧಿ, ೩ ಪದ್ಯ)
ತಾತ್ಪರ್ಯ:
ಆಗ ಜನಮೇಜಯನು ಅಯ್ಯೋ ನಮ್ಮ ಪೂರ್ವರಾಜರಿಗೆ ಇಂತಹ ವಿಧಿ ಬಂದಿತು. ಕೌರವನು ಧರ್ಮಕಂಟಕನಾಗಿಬಿಟ್ಟನು. ಶಕುನಿಯ ಅಭಿಪ್ರಾಯವೆಂಬ ವಿಷಬೀಜವು ದುರ್ಯೋಧನನ ಐಶ್ವರ್ಯಕ್ಕೆ ಬಾಧಕವಾಯಿತು. ಯುಧಿಷ್ಠಿರನ ಸೇನೆ ಎಷ್ಟು ಉಳಿಯಿತು ಎಂದು ಕೇಳಿದನು.
ಅರ್ಥ:
ಅಕಟ: ಅಯ್ಯೋ; ಪೂರ್ವ: ಹಿಂದಿನ; ರಾಜ: ನೃಪ; ಪ್ರಕರ: ಗುಂಪು, ಸಮೂಹ; ವಿಧಿ: ನಿಯಮ; ಕಂಟಕ: ವಿಪತ್ತು; ಪ್ರಭಾವ: ಬಲ, ಪರಾಕ್ರಮ; ಮತ: ವಿಚಾರ; ವಿಷ: ನಂಜು; ಬೀಜ: ಉತ್ಪತ್ತಿ ಸ್ಥಾನ, ಮೂಲ; ಬಾಧಕ: ತೊಂದರೆ; ತಂದು: ಬರೆಮಾಡು; ಸಕಲ: ಎಲ್ಲಾ; ಬಲ: ಶಕ್ತಿ; ಪರಿಶೇಷ: ಉಳಿದ; ಅರಸ: ರಾಜ; ಬೆಸ: ಅಪ್ಪಣೆ, ಆದೇಶ;
ಪದವಿಂಗಡಣೆ:
ಅಕಟ +ನಮ್ಮಯ +ಪೂರ್ವರಾಜ
ಪ್ರಕರಕ್+ಈ+ ವಿಧಿಯಾಯ್ತಲಾ +ಕಂ
ಟಕನಲಾ +ಧರ್ಮಪ್ರಭಾವಕೆ +ಕೌರವೇಶ್ವರನು
ಶಕುನಿ+ಮತ +ವಿಷ+ಬೀಜವೇ+ ಬಾ
ಧಕವ+ ತಂದುದಲಾ+ ಯುಧಿಷ್ಠಿರ
ಸಕಲ +ಬಲ +ಪರಿಶೇಷವೇನೆಂದ್+ಅರಸ+ ಬೆಸಗೊಂಡ
ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಕಂಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
(೨) ಶಕುನಿಯನ್ನು ನೋಡಿದ ಪರಿ – ಶಕುನಿಮತ ವಿಷಬೀಜವೇ ಬಾಧಕವ ತಂದುದಲಾ