ಪದ್ಯ ೩೪: ದ್ರುಪದನು ದ್ರೋಣನ ಸ್ನೇಹವನ್ನು ಏಕೆ ಅಲ್ಲಗಳೆದನು?

ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ
ಧೀರರಿಗೆ ಹಂದೆಗಳಿಗೆತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ (ಆದಿ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ವಿದ್ವಾಂಸರಿಗೂ, ಮುರ್ಖರಿಗೂ, ಗಂಭೀರಾದವರಿಗೂ, ನಾಚಿಕೆಗೆಟ್ಟ ಭಂಡರಿಗೂ, ವೇದವಿಹಿತವಾದ ಆಚಾರವುಳ್ಳವರಿಗೂ, ಅನಾಚಾರದಲ್ಲಿ ಮುಳುಗಿರುವವರಿಗೂ, ಧೀರರಿಗೂ, ಹೇಡಿಗಳಿಗೂ, ಎಲ್ಲಿ ಹೊಂದಿಕೆಯಾಗುತ್ತದೆ? ರಾಜರಿಗೂ, ಬಡ ಬ್ರಾಹ್ಮಣರಿಗೂ ಎಲ್ಲಿಯ ಸ್ನೇಹ ಎಂದು ದ್ರುಪದನು ಕೇಳಿದನು.

ಅರ್ಥ:
ಸೂರಿ: ವಿದ್ವಾಂಸ; ಅತಿ: ಬಹಳ; ಮೂರ್ಖ: ಮೂಢ; ಗಂಭೀರ: ಘನವಾದ; ಭಂಡ: ನಾಚಿಕೆ ಇಲ್ಲದವನು; ವೇದಾಚಾರ: ವೇದವಿಹಿತವಾದ ಆಚಾರವುಳ್ಳವ; ಪ್ರಸಕ್ತ: ಸದ್ಯದ, ತೊಡಗಿದ; ಧೀರ: ಶೂರ; ಹಂದೆ: ಅಂಜುಬುರುಕ, ಹೇಡಿ; ಸೇರು: ಜೋಡಿ; ಭೂಪ: ರಾಜ; ಬಡ: ದಾರಿದ್ರ; ಹಾರುವ: ಬ್ರಾಹ್ಮಣ; ಎತ್ತಣ: ಎಲ್ಲಿಯ; ಸಖತನ: ಮೈತ್ರಿ;

ಪದವಿಂಗಡಣೆ:
ಸೂರಿಗಳಿಗ್+ಅತಿ +ಮೂರ್ಖರಿಗೆ+ ಗಂ
ಭೀರರಿಗೆ +ಭಂಡರಿಗೆ +ವೇದಾ
ಚಾರ +ಸಂಯುಕ್ತರಿಗ್+ಅನಾಚಾರ +ಪ್ರಸಕ್ತರಿಗೆ
ಧೀರರಿಗೆ+ ಹಂದೆಗಳಿಗ್+ಎತ್ತಣ
ಸೇರುವೆಗಳೈ+ ಭೂಪರಿಗೆ+ ಬಡ
ಹಾರುವರಿಗ್+ಎತ್ತಣದು+ ಸಖತನವ್+ಎಂದನಾ +ದ್ರುಪದ

ಅಚ್ಚರಿ:
(೧) ವೈರುದ್ಯ ಪದಗಳ ಬಳಕೆ – ಸೂರಿ, ಮೂರ್ಖ; ಗಂಭೀರ, ಭಂಡ, ವೇದಾಚಾರ, ಅನಾಚಾರ; ಧೀರ, ಹಂದೆ;