ಪದ್ಯ ೩೯: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ (ಗದಾ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಡದಲ್ಲಿ ಬಲದಲ್ಲಿ ಕಾಲಲ್ಲಿ ಮೆಟ್ಟಿ ಗದೆಯಿಂದ ಅಪ್ಪಳಿಸಿ ಆನೆಗಳೆಲ್ಲವನ್ನೂ ಕೆಳಕ್ಕೆ ಕೆಡವಿದನು. ಕೌರವನ ನೂರು ಆನೆಗಳ ಹೆಣಗಳು ನಿಮಿಷ ಮಾತ್ರದಲ್ಲಿ ಸಾಲುಸಾಲಾಗಿ ಬಿದ್ದವು.

ಅರ್ಥ:
ಮೆಟ್ಟು: ತುಳಿ; ಬಲವಂಕ: ಬಲಭಾಗ; ಹೊರಗಟ್ಟು: ಬಿಸಾಡು, ನೂಕು; ವಾಮ: ಎಡಭಾಗ; ಗಜ: ಆನೆ; ಅಪ್ಪಳಿಸು: ತಟ್ಟು, ತಾಗು; ಪರಿಘ: ಗದೆ; ಘಟ್ಟಿಸು: ಹೊಡೆ, ಅಪ್ಪಳಿಸು; ಒಗ್ಗು: ಗುಂಪು, ಸಮೂಹ; ಥಟ್ಟು: ಗುಂಪು; ಕೆಡಹು: ನಾಹ್ಸ; ಅಮಮ: ಅಬ್ಬಬ್ಬಾ; ಹೆಣ: ಜೀವವಿಲ್ಲದ ಶರೀರ; ಸಾಲು: ಆವಳಿ; ನೃಪ: ರಾಜ; ನಿಮಿಷ: ಕ್ಷಣ;

ಪದವಿಂಗಡಣೆ:
ಮೆಟ್ಟಿದನು+ ಬಲವಂಕವನು+ ಹೊರ
ಗಟ್ಟಿದನು +ವಾಮದ +ಗಜಂಗಳನ್
ಇಟ್ಟನ್+ಒಂದರೊಳ್+ಒಂದನ್+ಅಪ್ಪಳಿಸಿದನು +ಪರಿಘದಲಿ
ಘಟ್ಟಿಸಿದನ್+ಒಗ್ಗಿನ +ಗಜಂಗಳ
ಥಟ್ಟು+ಕೆಡಹಿದನ್+ಅಮಮ +ಹೆಣ+ಸಾ
ಲಿಟ್ಟವೈ +ಕುರುನೃಪನ+ ನೂರಾನೆಗಳು +ನಿಮಿಷದಲಿ

ಅಚ್ಚರಿ:
(೧) ಮೆಟ್ಟಿದನು, ಅಟ್ಟಿದನು – ಪದಗಳ ಬಳಕೆ
(೨) ಆಶ್ಚರ್ಯವನ್ನು ಸೂಚಿಸುವ ಪರಿ – ಘಟ್ಟಿಸಿದನೊಗ್ಗಿನ ಗಜಂಗಳ ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ

ಪದ್ಯ ೫೨: ಆನೆಗಳು ಧರ್ಮಜನ ಮೇಲೆ ಹೇಗೆ ಆಕ್ರಮಣ ಮಾಡಿದವು?

ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ
ಜೋಡಿಸಿದ ಭರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬು ಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ (ಗದಾ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕುರುಸೇನೆಯಲ್ಲಿ ಸಾವಿರ ಆನೆಗಳ ನೆತ್ತಿಯನ್ನು ತಿವಿದು ಧರ್ಮಜನ ಮೇಲೆ ಬಿಟ್ಟರು. ಪರಿಘ, ಲೌಡಿ ಮೊದಲಾದ ಆಯುಧಗಳನ್ನು ಆನೆಗಳ ಸೊಂಡಿಲಿಗೆ ಜೋಡಿಸಿ ಬಿಡಲು ಅವು ಮಹಾರಭಸದಿಂದ ಧರ್ಮಜನ ಸಮ್ಮುಖಕ್ಕೆ ಹೋದವು.

ಅರ್ಥ:
ಜೋಡಿಸು: ಕೂಡಿಸು; ಸಾವಿರ: ಸಹಸ್ರ; ಗಜ: ಆನೆ; ಈಡು: ಹೊಡೆಯ ಬೇಕಾದ ವಸ್ತು, ಗುರಿ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ನೆತ್ತಿ: ಶಿರ; ತೋಡು: ಅಗೆ, ಹಳ್ಳ ಮಾಡು; ನೃಪ: ರಾಜ; ಮತ: ವಿಚಾರ; ದೊರೆ: ರಾಜ; ಸಮ್ಮುಖ: ಎದುರು; ಭರಿಕೈ: ಆನೆಯ ಸೊಂಡಿಲು; ಪರಿಘ: ಅಗುಳು, ಲಾಳವಿಂಡಿಗೆ, ಗದೆ; ಲೌಡಿ: ತೊತ್ತು, ದಾಸಿ; ಪಟ್ಟೆಯ: ಎರಡು ಮೊನೆಯ ಕತ್ತಿ; ಉಬ್ಬು: ಹಿಗ್ಗು; ತೂಳು: ಆವೇಶ, ಉನ್ಮಾದ; ಯಮಸುತ: ಧರ್ಮಜ; ಸುತ: ಮಗ; ಪಡಿಮುಖ: ಎದುರು, ಮುಂಭಾಗ;

ಪದವಿಂಗಡಣೆ:
ಜೋಡಿಸಿದ+ ಸಾವಿರ+ ಗಜಂಗಳನ್
ಈಡಿರಿದರ್+ಅಂಕುಶದಿ+ ನೆತ್ತಿಯ
ತೋಡಿಬಿಟ್ಟರು +ನೃಪನ +ಮತದಲಿ +ದೊರೆಯ +ಸಮ್ಮುಖಕೆ
ಜೋಡಿಸಿದ +ಭರಿಕಯ್ಯ +ಪರಿಘದ
ಲೌಡಿಗಳ +ಪಟ್ಟೆಯದಲ್+ಉಬ್ಬುಳಿ
ಗೂಡಿ +ತೂಳಿದವ್+ಆನೆಗಳು +ಯಮಸುತನ+ ಪಡಿಮುಖಕೆ

ಅಚ್ಚರಿ:
(೧) ಸಮ್ಮುಖ, ಪಡಿಮುಖ – ೩, ೬ ಸಾಲಿನ ಕೊನೆಯ ಪದ
(೨) ಜೋಡಿಸಿದ – ೧, ೪ ಸಾಲಿನ ಮೊದಲ ಪದ

ಪದ್ಯ ೨೬: ಶಲ್ಯನ ಬೆಂಬಲಕ್ಕೆ ಯಾರು ಬಂದರು?

ನೆತ್ತಿಯಗತೆಗಳಂಕುಶದ ಬೆರ
ಳೊತ್ತುಗಿವಿಗಳ ಕರದ ಪರಿಘದ
ಮತ್ತಗಜಘಟೆಗಳನು ನೂಕಿದರೆಂಟು ಸಾವಿರವ
ಸುತ್ತು ಝಲ್ಲಿಯ ಝಲ್ಲರಿಯ ಬಲು
ಹತ್ತುಗೆಯ ಬಿರುಬುಗಳ ತೇರಿನ
ಹತ್ತುಸಾವಿರ ಹೊದರುದೆಗೆದವು ಶಲ್ಯನೆಡಬಲಕೆ (ಶಲ್ಯ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಂಕುಶವನ್ನು ನೆತ್ತಿಗೊತ್ತಿ ಬೆರಳಿನೀಮ್ದ ಕಿವಿಗಳನ್ನೊತ್ತಿ ಸೊಂಡಿಲಿಗೆ ಪರಿಘವನ್ನು ಕೊಟ್ಟು ಎಂಟು ಸಾವಿರ ಆನೆಗಳನ್ನು ಕದನಕ್ಕೆ ಬಿಟ್ಟರು. ಗೊಂಡೆಗಳು ಸುತ್ತಲೂ ತೂಗುತ್ತಿರಲು, ಝಲ್ಲೈರ್ಗಳು ಹಾರಾಡುತ್ತಿರಲು ಹತ್ತು ಸಾವಿರ ರಥಗಳು ಶಲ್ಯನ ಬೆಂಬಲಕ್ಕೆ ಬಂದವು.

ಅರ್ಥ:
ನೆತ್ತಿ: ಶಿರ; ಅಂಕುಶ: ಹಿಡಿತ, ಹತೋಟಿ; ಬೆರಳು: ಅಂಗುಲಿ; ಒತ್ತು: ಆಕ್ರಮಿಸು, ಮುತ್ತು; ಕಿವಿ: ಕರ್ಣ; ಕರ: ಹಸ್ತ; ಪರಿಘ: ಗದೆ; ಮತ್ತ: ಸೊಕ್ಕು; ಗಜ: ಆನೆ; ಘಟೆ: ಗುಂಪು; ನೂಕು: ತಳ್ಳು; ಸಾವಿರ: ಸಹಸ್ರ; ಸುತ್ತು: ಆವರಿಸು; ಝಲ್ಲಿ: ಕುಚ್ಚು, ತೋರಣ; ಝಲ್ಲರಿ: ಕುಚ್ಚು, ಗೊಂಡೆ; ಬಲು: ಹೆಚ್ಚು; ಹತ್ತುಗೆ: ಪಕ್ಕ, ಸಮೀಪ; ಬಿರುಬು: ಆವೇಶ; ತೇರು: ಬಂಡಿ; ಹೊದರು: ಗುಂಪು, ಸಮೂಹ; ತೆಗೆ: ಹೊರತರು; ಎಡಬಲ: ಅಕ್ಕ ಪಕ್ಕ;

ಪದವಿಂಗಡಣೆ:
ನೆತ್ತಿಯಗತೆಗಳ್+ಅಂಕುಶದ +ಬೆರಳ್
ಒತ್ತು+ಕಿವಿಗಳ +ಕರದ +ಪರಿಘದ
ಮತ್ತ+ಗಜಘಟೆಗಳನು +ನೂಕಿದರ್+ಎಂಟು +ಸಾವಿರವ
ಸುತ್ತು +ಝಲ್ಲಿಯ +ಝಲ್ಲರಿಯ+ ಬಲು
ಹತ್ತುಗೆಯ +ಬಿರುಬುಗಳ +ತೇರಿನ
ಹತ್ತು+ಸಾವಿರ +ಹೊದರು+ತೆಗೆದವು +ಶಲ್ಯನ್+ಎಡಬಲಕೆ

ಅಚ್ಚರಿ:
(೧) ಝಲ್ಲಿಯ ಝಲ್ಲರಿಯ – ಝ ಕಾರದ ಜೋಡಿ ಪದ
(೨) ಒತ್ತು, ಸುತ್ತು, ಹತ್ತು – ಪದಗಳ ಬಳಕೆ

ಪದ್ಯ ೪೨: ಕರ್ಣನು ಗದೆಯನ್ನು ಹೇಗೆ ನಾಶ ಮಾಡಿದನು?

ತಿರುಗುತೈತಹ ಪರಿಘ ಕಾಂತರೆ
ಗಿರಿಗಳಡಿ ಮೇಲಹವು ನಾವಿ
ನ್ನರಸ ಹೇಳುವುದೇನು ಕರ್ಣನ ಬಾಹುವಿಕ್ರಮವ
ಪರಿಘವದು ಪರಮಾಣುಮಯವಾ
ಯ್ತೆರಡುಶರದಲಿ ಸಾರಥಿಯನಿ
ಟ್ಟೊರಸಿದನು ಹದಿನೈದು ಶರದಲಿ ರಥದ ಕುದುರೆಗಳ (ದ್ರೋಣ ಪರ್ವ, ೧೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ತಿರುಗುತ್ತಾ ಬಂದ ಗದೆಯನ್ನು ತಡೆದರೆ ಬೆಟ್ಟಗಳೇ ತಳಮೇಲಾಗಬೇಕು, ಆದರೆ ಧೃತರಾಷ್ಟ್ರ, ಕ್ಕರ್ಣನ ಭುಜಬಲವನ್ನು ಹೇಗೆ ವರ್ಣಿಸಲಿ. ಎರಡು ಬಾಣಗಳಿಗೆ ಆ ಗದೆಯು ಪುಡಿ ಪುಡಿಯಾಯಿತು. ಎರಡು ಬಾಣಗಳಿಂದ ಘಟೋತ್ಕಚನ ಸಾರಥಿಯನ್ನೂ ಹದಿನೈದು ಬಾಣಗಳಿಂದ ರಥದ ಕುದುರೆಗಳನ್ನೂ ಹೊಡೆದುರುಳಿಸಿದನು.

ಅರ್ಥ:
ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಐತರು: ಬಂದು ಸೇರು; ಪರಿಘ: ಗದೆ; ಗಿರಿ: ಬೆಟ್ಟ; ಅಡಿ: ಕೆಳಗೆ; ಮೇಲೆ: ಎತ್ತರದಲ್ಲಿ; ಅರಸ: ರಾಜ; ಹೇಳು: ತಿಳಿಸು; ಬಾಹು: ತೋಳು ; ವಿಕ್ರಮ: ಪರಾಕ್ರಮ; ಪರಿಘ: ಗದೆ; ಪರಮಾಣು: ಅತ್ಯಂತ ಸಣ್ಣದಾದ ವಸ್ತು; ಶರ: ಬಾಣ; ಸಾರಥಿ: ಸೂತ; ಒರಸು: ನಾಶ; ರಥ: ಬಂಡಿ; ಕುದುರೆ: ಅಶ್ವ;

ಪದವಿಂಗಡಣೆ:
ತಿರುಗುತ್+ಐತಹ +ಪರಿಘ +ಕಾಂತರೆ
ಗಿರಿಗಳಡಿ +ಮೇಲಹವು +ನಾವಿನ್
ಅರಸ +ಹೇಳುವುದೇನು +ಕರ್ಣನ +ಬಾಹು+ವಿಕ್ರಮವ
ಪರಿಘವದು+ ಪರಮಾಣುಮಯವಾಯ್ತ್
ಎರಡು+ಶರದಲಿ +ಸಾರಥಿಯನಿಟ್ಟ್
ಒರಸಿದನು +ಹದಿನೈದು +ಶರದಲಿ +ರಥದ +ಕುದುರೆಗಳ

ಅಚ್ಚರಿ:
(೧) ಗದೆಯು ಪುಡಿಯಾಯಿತು ಎಂದು ಹೇಳುವ ಪರಿ – ಪರಿಘವದು ಪರಮಾಣುಮಯವಾಯ್ತೆರಡುಶರದಲಿ
(೨) ಗದೆಯ ಶಕ್ತಿಯನ್ನು ವರ್ಣಿಸುವ ಪರಿ – ತಿರುಗುತೈತಹ ಪರಿಘ ಕಾಂತರೆ ಗಿರಿಗಳಡಿ ಮೇಲಹವು

ಪದ್ಯ ೪೧: ಘಟೋತ್ಕಚನು ಕರ್ಣನ ಮೇಲೆ ಯಾವ ಆಯುಧವನ್ನು ಬಿಟ್ಟನು?

ದರಿಗಳೊಳು ದರ್ವೀಕರಾವಳಿ
ಯುರವಣಿಸಿದರೆ ಬಲ್ಲುದೇ ಕುಲ
ಗಿರಿ ಮಹಾದೇವಾವ ಸತ್ವವೊ ದಾನವೇಶ್ವರಗೆ
ಅರಿಯ ಶರಹತಿಗೊಡಲು ನೆರೆ ಜ
ಜ್ಝರಿತವಾಗಲು ನೊಂದುದಿಲ್ಲ
ಬ್ಬರಿಸಿ ಪರಿಘದಲಿಟ್ಟನಂಬುಜಬಂಧುನಂದನನ (ದ್ರೋಣ ಪರ್ವ, ೧೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕೊಳ್ಳಗಳ್ಳಲ್ಲಿ ಹಾವುಗಳು ಬಂದರೆ ಕುಲಗಿರಿಗೆ ಅದು ತಿಳಿದೀತೇ? ಕರ್ಣನ ಬಾಣಗಳಿಂದ ದೇಹವು ಜಜ್ಝರಿತವಾದರೂ ದೈತ್ಯನಿಗೆ ನೋವಾಗಲಿಲ್ಲ. ಅವನು ಗರ್ಜಿಸಿ ಗದೆಯನ್ನು ಕರ್ಣನ ಮೇಲೆ ಬಿಟ್ಟನು.

ಅರ್ಥ:
ದರಿ: ಆಳ, ರಸಾತಳ, ಹಳ್ಳ; ದರ್ವೀಕರ: ಹಾವು; ಆವಳಿ: ಸಾಲು, ಗುಂಪು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಬಲ್ಲ: ತಿಳಿ; ಕುಲಗಿರಿ: ದೊಡ್ಡ ಬೆಟ್ಟ; ಸತ್ವ: ಸಾರ; ದಾನವ: ರಾಕ್ಷಸ; ಅರಿ: ತಿಳಿ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಕೊಡು: ನೀಡು; ನೆರೆ: ಗುಂಪು; ಜಜ್ಝರಿತ: ಪರಾಕ್ರಮಿ, ಶೂರ; ನೊಂದು: ಪೆಟ್ಟು; ಅಬ್ಬರಿಸು: ಆರ್ಭಟಿಸು; ಪರಿಘ: ಗದೆ; ಅಂಬುಜ: ತಾವರೆ; ಬಂಧು: ಸಂಬಂಧಿಕ; ನಂದನ: ಮಗ;

ಪದವಿಂಗಡಣೆ:
ದರಿಗಳೊಳು +ದರ್ವೀಕರಾವಳಿ
ಯುರವಣಿಸಿದರೆ +ಬಲ್ಲುದೇ +ಕುಲ
ಗಿರಿ +ಮಹಾದೇವ+ಆವ+ ಸತ್ವವೊ +ದಾನವೇಶ್ವರಗೆ
ಅರಿಯ +ಶರಹತಿಗ್+ಒಡಲು +ನೆರೆ +ಜ
ಜ್ಝರಿತವಾಗಲು +ನೊಂದುದಿಲ್ಲ್
ಅಬ್ಬರಿಸಿ +ಪರಿಘದಲಿಟ್ಟನ್+ಅಂಬುಜಬಂಧುನಂದನನ

ಅಚ್ಚರಿ:
(೧) ಕರ್ಣನನ್ನು ಅಂಬುಜಬಂಧುನಂದನ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ದರಿಗಳೊಳು ದರ್ವೀಕರಾವಳಿಯುರವಣಿಸಿದರೆ ಬಲ್ಲುದೇ ಕುಲಗಿರಿ

ಪದ್ಯ ೫೪: ಚಿತ್ರಸೇನನು ಯಾರನ್ನು ಬಂಧಿಸಿದನು?

ಮುರಿದ ಬಲಗರಿಗಟ್ಟಿ ನೋಡಿತು
ಧರಣಿಪನ ಮುಂಗುಡಿಯಲೇರಿತು
ತುರಗ ಗಜ ರಥ ಹರಿಗೆ ಸಬಳ ಮುಸುಂಡಿ ಪರಿಘದಲಿ
ಉರುಬಿದನು ಖಚರೇಂದ್ರ ಕೌರವ
ರರಸನನು ಶಕುನಿ ಸೈಂಧವ
ರಿರದೆ ಹಿಂಗಿತು ಕೌರವೇಶ್ವರ ಸಿಲುಕಿದನು ಹಗೆಗೆ (ಅರಣ್ಯ ಪರ್ವ, ೨೦ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭಂಗಗೊಂಡ ಕುರುಚತುರ್ಬಲವು ಮತ್ತೆ ಕೂಡಿ ನಾನಾ ವಿಧವಾದ ಆಯುಧಗಳಿಂದ ಚಿತ್ರಸೇನನನ್ನು ಎದುರಿಸಿತು. ಗಂಧರ್ವಪತಿಯು ಕೌರವನ ಕಡೆಗೆ ಮುಂದಕ್ಕೆ ಬಂದನು. ಶಕುನಿ ಜಯದ್ರಥರು ಹಿಂದಕ್ಕೆ ಸರಿದರು. ದುರ್ಯೋಧನನು ಚಿತ್ರಸೇನನಿಗೆ ಸೆರೆ ಸಿಕ್ಕನು.

ಅರ್ಥ:
ಮುರಿ: ಸೀಳು; ಅರಿ: ವೈರಿ, ಶತ್ರು; ಬಲ: ಸೈನ್ಯ; ಕಟ್ಟು: ಬಂಧಿಸು; ನೋಡು: ವೀಕ್ಷಿಸು; ಧರಣಿಪ: ರಾಜ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ತುರಗ: ಕುದುರೆ, ಗಜ: ಆನೆ; ರಥ: ಬಂಡಿ; ಹರಿ: ಚಲಿಸು; ಸಬಳ: ಈಟಿ, ಭರ್ಜಿ; ಮುಸುಂಡಿ: ಒಂದು ಆಯುಧ; ಪರಿಘ: ಗದೆ; ಉರುಬು: ಅತಿಶಯವಾದ ವೇಗ; ಖಚರೇಂದ್ರ: ಗಂಧರ್ವರ ಒಡೆಯ (ಚಿತ್ರಸೇನ); ಅರಸ: ರಾಜ; ಹಿಂಗು: ಬತ್ತುಹೋಗು; ಸಿಲುಕು: ಸೆರೆಯಾದ ವಸ್ತು; ಹಗೆ: ವೈರಿ, ಶತ್ರು;

ಪದವಿಂಗಡಣೆ:
ಮುರಿದ +ಬಲಗ್+ಅರಿ+ಕಟ್ಟಿ +ನೋಡಿತು
ಧರಣಿಪನ +ಮುಂಗುಡಿಯಲ್+ಏರಿತು
ತುರಗ+ ಗಜ+ ರಥ+ ಹರಿಗೆ +ಸಬಳ +ಮುಸುಂಡಿ +ಪರಿಘದಲಿ
ಉರುಬಿದನು +ಖಚರೇಂದ್ರ +ಕೌರವರ್
ಅರಸನನು+ ಶಕುನಿ+ ಸೈಂಧವರ್
ಇರದೆ+ ಹಿಂಗಿತು +ಕೌರವೇಶ್ವರ +ಸಿಲುಕಿದನು+ ಹಗೆಗೆ

ಅಚ್ಚರಿ:
(೧) ಆಯುಧಗಳ ಹೆಸರು – ಸಬಳ, ಮುಸುಂಡಿ, ಪರಿಘ;
(೨) ಧರಣಿಪ, ಕೌರವರರಸ, ಕೌರವೇಶವರ – ದುರ್ಯೋಧನನನ್ನು ಕರೆದ ಪರಿ

ಪದ್ಯ ೧೫: ಭೀಮನ ಕೋಪವು ಹೇಗೆ ಉಕ್ಕಿತು?

ನೋಡಿದನು ಪರಿಘವನು ಕಡೆಗ
ಣ್ಣಾಡಿತಿವದಿರ ಮೇಲೆ ಮೈಯಲಿ
ಝಾಡಿಗೆದರಿತು ರೋಮ ಝಳುಪಿಸಿತರುಣಮಯ ನಯನ
ಮೂಡಿತುರಿ ಸುಯ್ಲಿನಲಿ ರೋಷದ
ಬೀಡು ಭೀಮನ ಕಂಡು ಧರ್ಮಜ
ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ (ಸಭಾ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತೊಡೆಯನ್ನು ತೋರಿ ಭೀಮನನ್ನು ಕೆರಳಿಸಲು, ಭೀಮನು ಒಂದೆಡೆ ಗದೆಯನ್ನು ನೋಡಿದನು, ಓರೆಕಣ್ಣಿನಿಂದ ಕೌರವನನ್ನು ನೋಡಿದನು, ತನ್ನ ಮೈಯಲ್ಲಿದ್ದ ಕೂದಲುಗಳು ನೆಟ್ಟಗಾದವು, ಕಣ್ಣು ಕೆಂಪಾಗಿ ಕೋಪವನ್ನುಗುಳುತ್ತಿತ್ತು, ಉಸಿರಿನಲ್ಲಿ ಉರಿ ಹೊರಚೆಲ್ಲುತ್ತಿತ್ತು. ರೋಷದ ನೆಲೆ ಎನ್ನುವಂತಿದ್ದ ಭೀಮನನ್ನು ನೋಡಿ ಧರ್ಮರಾಯನು ತನ್ನ ಕೊರಳಿಗೆ ಬೆರಳಿಟ್ಟು ಭೀಮನನ್ನು ಬೇಡಿಕೊಂಡನು.

ಅರ್ಥ:
ನೋಡು: ವೀಕ್ಷಿಸು; ಪರಿಘ:ಗದೆ; ಕಡೆಗಣ್ಣು: ಓರೆ ಕಣ್ಣು, ಕಣ್ಣಂಚು; ಇವದಿರು: ಇವರೆಲ್ಲರು; ಮೈ: ತನು; ಝಾಡಿ: ಕಾಂತಿ; ಕೆದರು: ಹರಡು; ರೋಮ: ಕೂದಲು; ಝುಳಪ: ಹೊಳಪು, ಕಾಂತಿ; ಅರುಣ: ಕೆಂಪು; ನಯನ: ಕಣ್ಣು; ಮೂಡು: ತೋರು; ಉರಿ: ಬಿಸಿ; ಸುಯ್ಲು: ಉಸಿರು; ರೋಷ: ಕೋಪ; ಬೀಡು: ನೆಲೆ; ಕಂಡು: ನೋಡಿ; ಬೇಡು: ಕೋರು; ಕೊರಳು: ಕಂಠ; ಬೆರಳು: ಅಂಗುಲಿ; ಸನ್ನೆ; ಗುರುತು;

ಪದವಿಂಗಡಣೆ:
ನೋಡಿದನು +ಪರಿಘವನು+ ಕಡೆಗಣ್
ಆಡಿತ್+ಇವದಿರ+ ಮೇಲೆ +ಮೈಯಲಿ
ಝಾಡಿ+ಕೆದರಿತು +ರೋಮ +ಝಳುಪಿಸಿತ್+ಅರುಣಮಯ +ನಯನ
ಮೂಡಿತ್+ಉರಿ +ಸುಯ್ಲಿನಲಿ +ರೋಷದ
ಬೀಡು +ಭೀಮನ +ಕಂಡು +ಧರ್ಮಜ
ಬೇಡಿಕೊಂಡನು +ತನ್ನ +ಕೊರಳಿನ+ ಬೆರಳ+ ಸನ್ನೆಯಲಿ

ಅಚ್ಚರಿ:
(೧) ಭೀಮನಿಗಾದ ಕೋಪದ ಚಿತ್ರಣ – ಮೈಯಲಿ ಝಾಡಿಗೆದರಿತು ರೋಮ ಝಳುಪಿಸಿತರುಣಮಯ ನಯನ ಮೂಡಿತುರಿ ಸುಯ್ಲಿನಲಿ ರೋಷದ ಬೀಡು ಭೀಮನ
(೨) ಧರ್ಮರಾಯನ ಸನ್ನೆಯ ಅರ್ಥ – ಧರ್ಮಜ ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ – ನೀನು ಮುಂದಾದರೆ ನನ್ನನ್ನು ಕೊಂದಂತೆ ಎಂದು ಸೂಚಿಸುವ ಸನ್ನೆ

ಪದ್ಯ ೨೩: ಯಾವ ಆಯುಧಗಳು ರಥಗಳಲ್ಲಿದ್ದವು?

ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಾಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ (ಕರ್ಣ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಡುಕೊಡಲಿ, ಒನಕೆ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರ, ಖಡ್ಗ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಭಿಂಡಿವಾಳ, ಸುರಗಿ, ಇವನ್ನೆಲ್ಲಾ ಒಂದೇ ಬಂಡಿಯಲ್ಲಿ ಸೇರಿಸಿಟ್ಟಿದ್ದೇನೆ. ಇವನ್ನು ಶತ್ರುರಾಜರ ದೇಹಗಳಲ್ಲಿ ವ್ಯಯಮಾಡು ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಪರಶು: ಕೊಡಲಿ, ಕುಠಾರ; ಮುಸಲ: ಗದೆ; ಮುಸುಂಡಿ: ಆಯುಧದ ಹೆಸರು; ಸೆಲ್ಲೆಹ: ಈಟಿ, ಭರ್ಜಿ; ಪರಿಘ: ಕಬ್ಬಿಣದ ಆಯುಧ, ಗದೆ; ತೋಮರ: ತಿದಿಯಲ್ಲಿ ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ, ಈಟಿಯಂತಿರುವ ಆಯುಧ; ಚಕ್ರ: ಗುಂಡಾಗಿ ತಿರುಗುವ ಆಯುಧ; ಮುದ್ಗರ: ಗದೆ; ತ್ರಿಶೂಲ: ಮೂರುಮೊನೆಯ ಆಯುಧ; ಕಠಾರಿ: ಚೂರಿ, ಕತ್ತಿ; ಖೇಟಕ: ಗುರಾಣಿ; ಪಿಂಡಿವಾಳ: ಒಂದು ಬಗೆಯ ಆಯುಧ, ಈಟಿ; ಚಯ: ಗುಂಪು, ರಾಶಿ; ಸುರಗಿ: ಸಣ್ಣ ಕತ್ತಿ, ಚೂರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಬಂಡಿ: ರಥ; ಸಂವರಿಸು: ಸಂಗ್ರಹಿಸು; ರಿಪು: ವೈರಿ; ರಾಯ: ರಾಜ; ಒಡಲು: ದೇಹ; ಬೀಯ: ವ್ಯಯ, ಖರ್ಚು;

ಪದವಿಂಗಡಣೆ:
ಪರಶು +ಮುಸಲ +ಮುಸುಂಡಿ +ಸೆಲ್ಲೆಹ
ಪರಿಘ+ ತೋಮರ +ಚಕ್ರವಸಿ+ಮು
ದ್ಗರ +ತ್ರಿಶೂಲ +ಕಠಾರಿ +ಖೇಟಕ +ಪಿಂಡಿವಾಳಾಯ
ಸುರಗಿ+ ಮೊದಲಾದ್+ಅಖಿಳ +ಶಸ್ತ್ರೋ
ತ್ಕರವನ್+ಒಂದೇ +ಬಂಡಿಯಲಿ +ಸಂ
ವರಿಸಿದೆನು +ರಿಪುರಾಯರ್+ಒಡಲಲಿ +ಬೀಯಮಾಡೆಂದ

ಅಚ್ಚರಿ:
(೧) ಆಯುಧಗಳ ಹೆಸರು: ಪರಶು, ಮುಸಲ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರವಸಿ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಪಿಂಡಿವಾಳ, ಸುರಗಿ

ಪದ್ಯ ೯: ಕರ್ಣನ ಮೇಲೆ ಆಕ್ರಮಣವು ಹೇಗಿತ್ತು?

ಬೀಳುವಂಬಿನ ಹೊಯ್ವ ಖಡ್ಗದ
ತೂಳುವಾನೆಯ ನೂಕಿ ತಾಗುವ
ಶೂಲಿಗೆಯ ತುಂಡಿಸುವ ವಂಕಿಯ ನೆಡುವ ಬಲ್ಲೆಹದ
ಸೀಳುವಿಟ್ಟಿಯ ಮುರಿವ ಪರಿಘದ
ಪಾಳಿಸುವ ಪರಶುವಿನ ಧಾಳಾ
ಧೂಳಿ ಮಸಗಿತು ಮತ್ತೆ ಕರ್ಣನ ರಥದ ಬಳಸಿನಲಿ (ಕರ್ಣ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಎಲ್ಲಾ ಕಡೆಯಿಂದ ಶೂರರು ಕರ್ಣನನ್ನು ಮುತ್ತಲು, ಕರ್ಣನ ರಥದ ಮೇಲೆ ಬಾಣಗಳ ಸುರಿಮಳೆಗೆರೆಯುತಿತ್ತು, ಖಡ್ಗಗಳು ಬೀಸುತ್ತಿದ್ದವು, ಆನೆಗಳು ನುಗ್ಗಿದವು, ಶೂಲಗಳು ಇರಿದವು, ಭಲ್ಲೆಹಗಳು ನುಗ್ಗಿದವು, ಈಟಿಗಳು ಸೀಳಲು ಮುಂದಾದವು, ಪರಿಘಗಳು ಮುರಿಯಲು ಸಿದ್ಧವಾದವು, ಗಂಡು ಗೊಡಲಿಗಳು ಕಡಿಯಲು ಬಂದವು, ಸೈನ್ಯದ ಧಾಳಿಯಧೂಳಿ ಕರ್ಣನ ರಥವನ್ನು ಮುತ್ತಿತು.

ಅರ್ಥ:
ಬೀಳು: ಜಾರು, ಕುಸಿ, ಮಣಿ; ಅಂಬು: ಬಾಣ; ಹೊಯ್ವ: ಹೊಡೆ; ಖಡ್ಗ: ಕತ್ತಿ, ಕರವಾಳ; ತೂಳು: ಆವೇಶ, ಉನ್ಮಾದ; ಆನೆ: ಕರಿ, ಗಜ; ನೂಕು: ತಳ್ಳು; ತಾಗು: ಮುಟ್ಟು; ಶೂಲ: ಈಟಿ, ಶಿವನ ತ್ರಿಶೂಲ; ತುಂಡಿಸು: ಕತ್ತರಿಸು; ವಂಕಿ: ಕೊಕ್ಕೆ, ಕೊಂಡಿ, ತೋಳು ಬಂಧಿ; ನೆಡು: ಹೂಳು, ನಿಲ್ಲಿಸು; ಬಲ್ಲೆ:ಈಟಿ; ಸೀಳು: ಕತ್ತರಿಸು; ಮುರಿ: ಸೀಳು; ಪರಿಘ: ಗದೆ; ಪಾಳಿ: ಸಾಲು; ಪರಶು: ಕುಠಾರ; ಧಾಳಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಮಸಗು: ಹರಡು; ಕೆರಳು; ರಥ: ಬಂಡಿ; ಬಳಸು: ಆವರಿಸು;

ಪದವಿಂಗಡಣೆ:
ಬೀಳುವ್+ಅಂಬಿನ +ಹೊಯ್ವ +ಖಡ್ಗದ
ತೂಳುವ್+ಆನೆಯ +ನೂಕಿ +ತಾಗುವ
ಶೂಲಿಗೆಯ +ತುಂಡಿಸುವ +ವಂಕಿಯ +ನೆಡುವ +ಬಲ್ಲೆಹದ
ಸೀಳುವ್+ಇಟ್ಟಿಯ +ಮುರಿವ +ಪರಿಘದ
ಪಾಳಿಸುವ +ಪರಶುವಿನ +ಧಾಳಾ
ಧೂಳಿ +ಮಸಗಿತು+ ಮತ್ತೆ +ಕರ್ಣನ +ರಥದ +ಬಳಸಿನಲಿ

ಅಚ್ಚರಿ:
(೧) ಅಂಬು, ಖಡ್ಗ, ಶೂಲ, ವಂಕಿ, ಈಟಿ, ಪರಿಘ, ಪರಶು – ಆಯುಧಗಳ ಪರಿಚಯ

ಪದ್ಯ ೫೭: ಸುಶರ್ಮ ಮತ್ತು ವಿರಾಟನ ಯುದ್ಧ ಹೇಗಿತ್ತು?

ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ (ವಿರಾಟ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಬಾಣಗಳ ಯುದ್ಧವಾದಮೇಲೆ, ಚಿಕ್ಕ ಕತ್ತಿಯನ್ನು ತಿರುಗಿಸುತ್ತಾ ಯುದ್ಧ ಮಾಡಿದರು, ಇದಾದನಂತರ ಗದೆಯಿಂದ ಕಾದಾಡಿದರು, ಗದೆಯ ನಂತರ ಕತ್ತಿ, ಗುರಾಣಿಗಳಿಂದ ಇಬ್ಬರು ವೀರಾವೇಶದಿಂದ ಕಾದಿದರು. ವಿರಾಟನ ಶಸ್ತ್ರ ಕೌಶಲ್ಯವನ್ನು ಹೊಗಳುತ್ತಾ ಸುಶರ್ಮನು ವಿರಾಟ್ನ ಪೆಟ್ಟನು ಸಹಿಸಿಕೊಂಡು ಅವನನ್ನು ಬಂಧಿಸಿದನು.

ಅರ್ಥ:
ಸರಳು:ಬಾಣ, ಅಂಬು; ತೀರಲು: ಮುಗಿಯಲು; ಕಿತ್ತು: ತೆಗೆದು; ಸುರಗಿ: ಸಣ್ಣ ಕತ್ತಿ, ಚೂರಿ; ತಿರುಹಿ: ತಿರುಹಿಸು; ಹೊಯ್ದಾಡು: ಮೇಲೆ ಬಿದ್ದು ಹೊಡೆದಾಡು; ಮುರಿ: ಬಾಗು, ಸೀಳು; ಪರಿಘ:ಗದೆ; ಕಾದಿದರು: ಹೋರಾಡಿದರು; ಹೊಕ್ಕು: ಸೇರು; ಹಲಗೆ:ಒಂದು ಬಗೆಯ ಗುರಾಣಿ; ಖಡ್ಗ: ಕತ್ತು; ಬೆರಸು: ಮಿಶ್ರಮಾಡು; ತಿವಿದು: ಚೂಪಾದ ಆಯುಧದಿಂದ ಚುಚ್ಚು; ಭರವ:ವೇಗ, ಉದ್ರೇಕ; ಹೊಗಳು: ಪ್ರಶಂಸೆ; ಕಲಿ: ವೀರ; ಉರವಣಿಸು: ಆತುರಿಸು; ಗಾಯ: ಪೆಟ್ಟು; ಹಿಡಿ: ಬಂಧಿಸು;

ಪದವಿಂಗಡಣೆ:
ಸರಳು +ತೀರಲು +ಕಿತ್ತು +ಸುರಗಿಯ
ತಿರುಹಿ +ಹೊಯ್ದಾಡಿದರು +ಮುರಿದೊಡೆ
ಪರಿಘದಲಿ +ಕಾದಿದರು +ಹೊಕ್ಕರು +ಹಲಗೆ +ಖಡ್ಗದಲಿ
ಬೆರಸಿ +ತಿವಿದಾಡಿದರು +ಮತ್ಸ್ಯನ
ಭರವ +ಹೊಗಳುತ +ಕಲಿ +ಸುಶರ್ಮಕನ್
ಉರವಣಿಸಿದನು +ಗಾಯವಡೆದು +ವಿರಾಟನನು +ಹಿಡಿದ

ಅಚ್ಚರಿ:
(೧) ಸರಳು, ಸುರಗಿ, ಪರಿಘ, ಖಡ್ಗ – ಆಯುಧಗಳ ವಿವರಣೆ
(೨) ಹೊಯ್ದಾಡಿದರು, ಕಾದಿದರು, ತಿವಿದಾಡಿದರು – ಯುದ್ಧವನ್ನು ವಿವರಿಸುವ ಪದಗಳು