ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ (ಆದಿ ಪರ್ವ, ೨ ಸಂಧಿ, ೩೧ ಪದ್ಯ)
ತಾತ್ಪರ್ಯ:
ಶಂತನುವು ಕಾಲಗತಿಯಿಂದ ಸ್ವರ್ಗಸ್ಥನಾದನು. ಅವನ ನಂತರ ಚಿತ್ರಾಂಗದನು ರಾಜನಾದನು. ಜನಮೇಜಯ ರಾಜ ಕೇಳು, ಕೆಲವು ಕಾಲ ಕಳೆದ ಮೇಲೆ ಚಿತ್ರಾಂಗದನು ಗಂಧರ್ವರೊಡನೆ ಕಾದಿ ಮೃತನಾದನು. ನಂತರ ವಿಚಿತ್ರವೀರ್ಯನು ರಾಜನಾದನು.
ಅರ್ಥ:
ಮಹೀಪತಿ: ರಾಜ; ಸುರ: ದೇವತೆ; ಸೇರು: ಜೊತೆಗೂಡು; ಬಳಿಕ: ನಂತರ; ಧರಣಿಯೊಡೆಯ: ರಾಜ; ಕುಮಾರ: ಮಗ; ಅರಸ: ರಾಜ; ಕೇಳು: ಆಲಿಸು; ಕಾಲಾಂತರ: ಸಮಯದ ನಂತರ; ಕಾದು: ಯುದ್ಧಮಾಡು; ಮಡಿ: ಸಾವು; ಪಟ್ಟ: ಅಧಿಕಾರ;
ಪದವಿಂಗಡಣೆ:
ಇರಲಿರಲು+ ಶಂತನು +ಮಹೀಪತಿ
ಸುರರೊಳಗೆ +ಸೇರಿದನು +ಬಳಿಕೀ
ಧರಣಿ+ಒಡೆತನವಾಯ್ತು +ಚಿತ್ರಾಂಗದ +ಕುಮಾರಂಗೆ
ಅರಸ +ಕೇಳೈ +ಕೆಲವು +ಕಾಲಾಂ
ತರದಲ್+ಆತನು +ಕಾದಿ +ಗಂಧ
ರ್ವರಲಿ +ಮಡಿದನು +ಪಟ್ಟವಾಯ್ತು +ವಿಚಿತ್ರವೀರ್ಯಂಗೆ
ಅಚ್ಚರಿ:
(೧) ಮಹೀಪತಿ, ಅರಸ, ಧರಣಿಯೊಡೆಯ – ಸಮಾನಾರ್ಥಕ ಪದ
(೨) ಸತ್ತನು ಎಂದು ಹೇಳುವ ಪರಿ – ಮಹೀಪತಿ ಸುರರೊಳಗೆ ಸೇರಿದನು, ಮಡಿದನು