ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ (ಆದಿ ಪರ್ವ, ೨ ಸಂಧಿ, ೩೫ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಅಮ್ಬೆಯನ್ನುವವಳು ದುಷ್ಟೆ. ಭೀಷ್ಮನೊಡನೆ ಕೂಟವಿಲ್ಲದಿದ್ದರೆ ಮರಣದೊಡನೆ ಕೂಟವೆಂದು ಪಂಥವನ್ನು ಮಾಡಿದಳು. ಭೀಷ್ಮನ ಗುರುವಾದ ಪರಶುರಾಮರ ಬಳಿಗೆ ಹೋಗಿ ಅವರಿಗೆ ತನ್ನ ವಿಷಯವನ್ನು ತಿಳಿಸಿ, ಅವರನ್ನು ಹಸ್ತಿನಾವತಿಗೆ ಕರೆತಂದಳು. ಅಂಬೆಯನ್ನು ಮದುವೆಯಾಗೆಂದು ಪರಶುರಾಮರಿಂದ ಭೀಷ್ಮನಿಗೆ ಹೇಳಿಸಿದಳು.
ಅರ್ಥ:
ಅರಸ: ರಾಜ; ಚಿತ್ತೈಸು: ಆಲಿಸು; ದುರುಳೆ: ಪಾಪಿ; ಕೂಟ: ಜೊತೆ; ಮರಣ: ಸಾವು; ಎಡೆ: ಹತ್ತಿರ; ಬೆರಸು; ಸೇರು; ಪಂಥ: ಪ್ರತಿಜ್ಞೆ, ಶಪಥ; ಭಜಿಸು: ಸ್ಮರಿಸು; ತಂದಳು: ಬಂದಳು; ಸುರನದೀನಂದನ: ಭೀಷ್ಮ; ಸುರನದಿ: ಗಂಗೆ; ಪರಿ: ರೀತಿ;
ಪದವಿಂಗಡಣೆ:
ಅರಸ +ಚಿತ್ತೈಸ್+ಅಂಬೆ+ಎಂಬಳು
ದುರುಳೆ +ಭೀಷ್ಮನ+ ಕೂಟವಲ್ಲದೆ
ಮರಣದೆಡೆಯಲಿ +ಬೆರಸಿದಲ್ಲದೆ +ಪಂಥವಿಲ್ಲೆಂದು
ಪರಶುರಾಮನ +ಭಜಿಸಿ +ಹಸ್ತಿನ
ಪುರಕೆ +ತಂದಳು +ಹೇಳಿಸಿದಳೀ
ಸುರನದೀನಂದನನು +ಮಾಡಿದ +ಪರಿಯ +ಕೇಳೆಂದ
ಅಚ್ಚರಿ:
(೧) ಸುರನದೀನಂದನ, ಭೀಷ್ಮ – ಭೀಷ್ಮರನ್ನು ಕರೆದ ಪರಿ