ಆಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣ ಪಂಜರವ (ವಿರಾಟ ಪರ್ವ, ೯ ಸಂಧಿ, ೨೨ ಪದ್ಯ)
ತಾತ್ಪರ್ಯ:
ಅರ್ಜುನ ನಾನು ಕರ್ಣನ ಬಾಣಗಳನ್ನು ನೋಡಾಲಾರೆ, ಬಾಣವನ್ನು ಬಿಟ್ಟು ಎರಡನೆಯದೇ ಇಲ್ಲ ಎಂದು ಉತ್ತರ ಕುಮಾರನು ಹೇಳಿ ತನ್ನ ಮುಖವನ್ನು ಮುಚ್ಚಿಕೊಳ್ಳಲು, ಎಲವೋ ಉತ್ತರಕುಮಾರ, ಇದೇನು ಸೋಜಿಗವಲ್ಲ ನನಗಿದು ಕಷ್ಟಕರವೂ ಅಲ್ಲ ನೋಡು ಎಂದು ಅರ್ಜುನನು ಕರ್ಣನ ಬಾಣಗಳ ಪಂಜರವನ್ನು ಕಡಿದನು.
ಅರ್ಥ:
ನೋಡು: ವೀಕ್ಷಿಸು; ಬಹಳ: ತುಂಬ; ಬಾಣ: ಅಂಬು; ಅದ್ವೈತ: ಎಣೆಯಿಲ್ಲದ, ಅಸಮಾನವಾದ; ಮಹಿ: ಭೂಮಿ; ಸಾರಥಿ: ಸೂತ; ಮುಚ್ಚು: ಮರೆಮಾಡು; ಗಹನ: ಸುಲಭವಲ್ಲದುದು; ನರ: ಅರ್ಜುನ; ಸಹಸ: ಪರಾಕ್ರಮಿ; ಕೆದರು: ಕೆರಳು; ಪಂಜರ: ಗೂಡು; ರಹ: ಸೋಜಿಗ, ಆಶ್ಚರ್ಯ;
ಪದವಿಂಗಡಣೆ:
ಆಹಹ +ಫಲುಗುಣ +ನೋಡಲಮ್ಮೆನು
ಬಹಳ +ಬಾಣ+ಅದ್ವೈತವಾದುದು
ಮಹಿ +ಮಹಾದೇವೆನುತ +ಸಾರಥಿ+ ಮುಚ್ಚಿದನು +ಮುಖವ
ರಹವ +ಮಾಡದಿರ್+ಎಲವೊ+ ತನಗಿದು
ಗಹನವೇ +ನೋಡೆನುತ +ನರನ್+ಅತಿ
ಸಹಸದಲಿ +ಕೆದರಿದನು +ಕರ್ಣನ +ಬಾಣ +ಪಂಜರವ
ಅಚ್ಚರಿ:
(೧) ಅರ್ಜುನನ ಪರಾಕ್ರಮ – ನರನತಿ ಸಹಸದಲಿ ಕೆದರಿದನು ಕರ್ಣನ ಬಾಣ ಪಂಜರವ