ಪದ್ಯ ೩೫: ಕಂಕನು ಯಾವ ಉಪಾಯವನ್ನು ಹೇಳಿದನು?

ಬವರವನು ಮನ್ನಿಸಲು ಬೇಕೆಂ
ದವನಿಪತಿ ನೆರೆನುಡಿಯೆ ಮಲ್ಲರ
ನಿವಹವೈತಹುದೆಂದು ನೇಮವನಿತ್ತುದೊಳಿತಾಯ್ತು
ಅವರು ಬಂದರೆ ನಾಳೆ ಮಾಡುವ
ಹವಣದಾವುದು ಬಿಟ್ಟುಕಳೆ ಹೇ
ಳುವೆನು ನಿನಗಿನ್ನೊಮ್ಮೆ ಗೆಲುಗೈಯಹ ಮನೋರಥವ (ವಿರಾಟ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಯುದ್ಧವನ್ನು ಒಪ್ಪಿಕೊಳ್ಳಲೇಬೇಕಲ್ಲಾ ಎಂದು ವಿರಾಟ ರಾಜನು ಹೇಳಲು, ಕಂಕನು ನಾಳೆ ನೀವು ಮಲ್ಲರನ್ನು ಮತ್ತೆ ಬರಲು ಹೇಳಿದುದು ಒಳಿತಾಯಿತು. ನಾಳೆ ಅವರು ಬಂದರೆ ಏನು ಮಾಡಬೇಕೆಂಬ ಚಿಂತೆ ಬೇಡ, ಗೆಲ್ಲಲು ನಾನೊಂದು ಮಾರ್ಗವನ್ನು ನಿನಗೆ ಹೇಳುತ್ತೇನೆಂದು ನುಡಿದನು.

ಅರ್ಥ:
ಬವರ: ಕಾಳಗ, ಯುದ್ಧ; ಮನ್ನಿಸು: ಅಂಗೀಕರಿಸು; ಅವನಿಪತಿ: ರಾಜ; ಅವನಿ: ಭೂಮಿ; ನೆರೆ: ಸಮೀಪ, ಗುಂಪು; ನುಡಿ: ಮಾತು; ಮಲ್ಲ: ಜಟ್ಟಿ; ನಿವಹ: ಗುಂಪು; ನೇಮ: ನಿಯಮ; ಬಂದರೆ: ಆಗಮಿಸು; ನಾಳೆ: ಮರುದಿನ; ಹವಣ: ಸಿದ್ಧತೆ, ಪ್ರಯತ್ನ; ಬಿಡು: ತೊರೆ; ಕಳೆ: ಕಾಂತಿ; ಹೇಳು: ತಿಳಿಸು; ಗೆಲುವು: ಜಯ; ಮನೋರಥ: ಆಸೆ, ಬಯಕೆ;

ಪದವಿಂಗಡಣೆ:
ಬವರವನು +ಮನ್ನಿಸಲು +ಬೇಕೆಂದ್
ಅವನಿಪತಿ +ನೆರೆ+ನುಡಿಯೆ +ಮಲ್ಲರ
ನಿವಹವ್+ಐತಹುದೆಂದು +ನೇಮವನಿತ್ತುದ್+ಒಳಿತಾಯ್ತು
ಅವರು+ ಬಂದರೆ +ನಾಳೆ +ಮಾಡುವ
ಹವಣದ್+ಆವುದು +ಬಿಟ್ಟು+ಕಳೆ+ ಹೇ
ಳುವೆನು +ನಿನಗಿನ್ನೊಮ್ಮೆ +ಗೆಲುಗೈಯಹ +ಮನೋರಥವ

ಅಚ್ಚರಿ:
(೧) ಕಂಕನ ಉಪಾಯ – ಕಳೆ ಹೇಳುವೆನು ನಿನಗಿನ್ನೊಮ್ಮೆ ಗೆಲುಗೈಯಹ ಮನೋರಥವ