ಚಿತ್ರವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ (ಗದಾ ಪರ್ವ, ೮ ಸಂಧಿ, ೨೯ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಮುಂದೆ ಬಂದು, ಅಣ್ಣಾ ನನ್ನ ಮಾತನ್ನು ಕೇಳು. ಕೋಪಕ್ಕೆ ಮನಸ್ಸನ್ನು ಕೊಟ್ಟರೆ ಏನು ಪ್ರಯೋಜನ. ಉತ್ತಮರು ಮಾಡಿದಮ್ತೆ ಶಾಸ್ತ್ರನಿರ್ಣಯವನ್ನು ಮಾಡಿ ಅದರಂತೆ ನಡೆಯಬೇಕು. ಕೌರವನ ಕುಹಕ ಹೀನ ವರ್ತನೆ ನಿಮಗೆ ಗೊತ್ತಿಲ್ಲವೇ? ನಿಮಗೆ ಏರಿರುವ ಕೋಪ ಇಳಿದ ಮೇಲೆ ತಿಳಿ ಹೇಳುತ್ತೇನೆ ಎಂದನು.
ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಬರಿ: ಕೇವಲ; ರೋಷ: ಕೋಪ; ಅಂತರಂಗ: ಮನಸ್ಸು, ಹೃದಯ; ಉತ್ತಮ: ಶ್ರೇಷ್ಠ; ಪದ್ಧತಿ: ದಾರಿ, ಮಾರ್ಗ; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ನಿಶ್ಚಯ: ನಿರ್ಧಾರ; ಬಿತ್ತರಿಸು: ವಿಸ್ತರಿಸು, ತಿಳಿಸು; ಕಿತ್ತಡವ: ಕುಹುಕ; ಅರಿ: ತಿಳಿ; ಎತ್ತಿದ: ಹೆಚ್ಚಾದ; ಆಗ್ರಹ: ಆಸಕ್ತಿ; ನಿಲಲಿ: ತಡೆ; ತಿಳುಹು: ತಿಳಿಸು; ಅಸುರಾರಿ: ಕೃಷ್ಣ;
ಪದವಿಂಗಡಣೆ:
ಚಿತ್ರವಿಸಿರೇ +ಬರಿಯ +ರೋಷಕೆ
ತೆತ್ತಡ್+ಏನಹುದ್+ಅಂತರಂಗವನ್
ಉತ್ತಮರ +ಪದ್ಧತಿಗಳಲಿ +ಶಾಸ್ತ್ರಾರ್ಥ+ನಿಶ್ಚಯವ
ಬಿತ್ತರಿಸುವುದು +ಕೌರವೇಂದ್ರನ
ಕಿತ್ತಡವ +ನೀವ್+ಅರಿಯಿರೇ +ನಿಮಗ್
ಎತ್ತಿದ+ಆಗ್ರಹ+ ನಿಲಲಿ +ತಿಳುಹುವೆನೆಂದನ್+ಅಸುರಾರಿ
ಅಚ್ಚರಿ:
(೧) ಉತ್ತಮರ ಲಕ್ಷಣ – ಅಂತರಂಗವನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ ಬಿತ್ತರಿಸುವುದು