ಕಡಿಕುಗಳನಾಯ್ದರಸಿ ರಥದೊಳು
ಗುಡಿಸಿ ಸಿಂಧವನೆತ್ತಿ ಸಾರಥಿ
ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ
ತಡೆಯದಶ್ವತ್ಥಾಮನಲ್ಲಿಗೆ
ನಡೆದು ಬರುತಿರೆ ಕಂಡು ಮನದಲಿ
ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ (ದ್ರೋಣ ಪರ್ವ, ೧೯ ಸಂಧಿ, ೫ ಪದ್ಯ)
ತಾತ್ಪರ್ಯ:
ದ್ರೋಣನ ದೇಹದ ತುಂಡುಗಳನ್ನಾಯ್ದು, ರಥವನ್ನು ಗುಡಿಸಿ, ಧ್ವಜವನ್ನೆತ್ತಿ ಕಟ್ಟಿ, ಸಾರಥಿಯು ರಥದ ಕುದುರೆಗಳನ್ನು ಹಿಂದಕ್ಕೆ ತಿರುಗಿಸಿ ತಕ್ಷಣವೇ ಅಶ್ವತ್ಥಾಮನ ಬಳಿಗೆ ಹೋದನು. ಅವನ ಆಗಮನವನ್ನು ನೋಡಿ ಅಶ್ವತ್ಥಾಮನು ಅತಿಶಯ ವ್ಯಥೆಯಿಂದ ಹೀಗೆಂದು ಚಿಂತಿಸಿದನು.
ಅರ್ಥ:
ಕಡಿಕು: ತುಂಡು; ಆಯ್ದು: ಆರಿಸು; ರಥ: ಬಂದಿ; ಗುಡಿಸು: ಕಸವನ್ನು ಬಳಿ; ಸಿಂಧ: ಪತಾಕೆ, ಬಾವುಟ; ಸಾರಥಿ: ಸೂತ; ತುಡುಕು: ಹೋರಾಡು, ಸೆಣಸು; ವಾಘೆ: ಲಗಾಮು; ಮುರುಹು: ತಿರುಗಿಸು; ಮರಳಿ: ಮತ್ತೆ; ಕುದುರೆ: ಅಶ್ವ; ತಡೆ: ನಿಲ್ಲಿಸು; ನಡೆ: ಚಲಿಸು; ಬರುತಿರೆ: ಆಗಮಿಸು; ಕಂಡು: ನೋಡು; ಮನ: ಮನಸ್ಸು; ಕಡು: ತುಂಬ; ನಿರೋಧ: ಪ್ರತಿಬಂಧ, ನಿರಾಶ; ಹಿಡಿ: ಗ್ರಹಿಸು; ಚಿಂತಿಸು: ಯೋಚಿಸು; ದ್ರೌಣಿ: ಅಶ್ವತ್ಥಾಮ;
ಪದವಿಂಗಡಣೆ:
ಕಡಿಕುಗಳನ್+ಆಯ್ದ್+ಅರಸಿ +ರಥದೊಳು
ಗುಡಿಸಿ +ಸಿಂಧವನೆತ್ತಿ +ಸಾರಥಿ
ತುಡುಕಿ +ವಾಘೆಯ +ಮುರುಹಿ +ಮರಳಿಚಿ +ರಥದ +ಕುದುರೆಗಳ
ತಡೆಯದ್+ಅಶ್ವತ್ಥಾಮನಲ್ಲಿಗೆ
ನಡೆದು +ಬರುತಿರೆ +ಕಂಡು +ಮನದಲಿ
ಕಡು +ನಿರೋಧವ +ಹಿಡಿದು +ಚಿಂತಿಸುತಿರ್ದನಾ +ದ್ರೌಣಿ
ಅಚ್ಚರಿ:
(೧) ಅಶ್ವತ್ಥಾಮನನ್ನು ದ್ರೌಣಿ ಎಂದು ಕರೆದಿರುವುದು