ಅವನಿಪತಿ ಕೇಳೀಚೆಯಲಿ ಕೌ
ರವನ ಹೊರಗೈತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ
ಪವನಸುತ ನುಡಿಸಿದನಲೈ ನಿ
ನ್ನವನನೇನೈ ಭೂಪ ಕೊಡುವೈ
ನವಗೆ ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ (ಗದಾ ಪರ್ವ, ೮ ಸಂಧಿ, ೭ ಪದ್ಯ)
ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಇತ್ತ ಭೀಮನು ತನ್ನೆರಡು ಕೈಗಳಿಂದ ಗದೆಯನ್ನು ಹಿಡಿದು ಮಹಾಗರ್ವದಿಂದ ಕೌರವನ ಬಳಿಗೆ ಹೋಗಿ, ರಾಜಾ ಈಗ ನೀನೇನು ಹೇಳುತ್ತೀ? ನಮಗೆ ಅರ್ಧ ರಾಜ್ಯವನ್ನು ಕೊಡುವೆಯೋ ಹೇಗೆ ಎಂದು ಹಂಗಿಸಿದನು.
ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಈಚೆ: ಈ ಭಾಗ; ಐತಂದು: ಬಂದು ಸೇರಿ; ನಿಂದು: ನಿಲ್ಲು; ಸವಡಿ: ಜೊತೆ, ಜೋಡಿ; ಕೈ: ಹಸ್ತ; ಗದೆ: ಮುದ್ಗರ; ಅಣಸು: ಹಂಗಿಸು; ಗಾಢ: ಬಹಳ; ಗರ್ವ: ಅಹಂಕಾರ; ಪವನಸುತ: ವಾಯುಪುತ್ರ (ಭೀಮ); ನುಡಿ: ಮಾತಾಡು; ಭೂಪ: ರಾಜ; ಕೊಡು: ನೀಡು; ನೆಲ: ಭೂಮಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ನಾಚಿಕೆ: ಲಜ್ಜೆ;
ಪದವಿಂಗಡಣೆ:
ಅವನಿಪತಿ +ಕೇಳ್+ಈಚೆಯಲಿ +ಕೌ
ರವನ +ಹೊರಗೈತಂದು +ನಿಂದನು
ಸವಡಿ+ಕೈ+ಗದೆ+ಅಣಸುಗಲ್ಲದ+ ಗಾಢ+ಗರ್ವದಲಿ
ಪವನಸುತ+ ನುಡಿಸಿದನಲೈ +ನಿ
ನ್ನವನನ್+ಏನೈ +ಭೂಪ +ಕೊಡುವೈ
ನವಗೆ+ ನೆಲನ್+ಅರ್ಧವನು +ನಾಚಿಕೆಯೇಕೆ +ನುಡಿಯೆಂದ
ಅಚ್ಚರಿ:
(೧) ನ ಕಾರದ ಸಾಲು ಪದಗಳು – ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ
(೨) ಭೀಮನು ನಿಂತ ಪರಿ – ನಿಂದನು ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ