ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದು ಹೇರಿತು ಭೀತಿ ಭೂಪತಿಗೆ (ಗದಾ ಪರ್ವ, ೧ ಸಂಧಿ, ೬೨ ಪದ್ಯ)
ತಾತ್ಪರ್ಯ:
ಭೀಮನು ಗರುಡ, ಆನೆಗಳು ಕೃಷ್ಣ ಸರ್ಪಗಳು, ಯಾವಾಗ ಆನೆಗಳು ಮುರಿದುಬಿದ್ದವೋ, ಕೌರವನು ಪರಾಜಿತನಾದನು. ಪಾಂಡವ ವೈರ್ದ ಕುದಿತದ ದುಃಖವು ಹೆಚ್ಚಿ, ಭಯವು ಆವರಿಸಿತು.
ಅರ್ಥ:
ಹೇಳು: ತಿಳಿಸು; ಅವನಿಪ: ರಾಜ; ಮದ: ಅಮಲು; ಆನೆ: ಗಜ; ಮುರಿ: ಸೀಳು; ವೈನತೇಯ: ಗರುಡ; ಕರಿ: ಆನೆ; ಕಾಳೋರಗ: ಕೃಷ್ಣ ಸರ್ಪ; ದಳ: ಸೈನ್ಯ; ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಸಿಕೊಂಡವ (ದುರ್ಯೋಧನ); ಮುರಿ: ಸೀಳು; ವೈರ: ಶತ್ರು; ಅನುಬಂಧ: ಸಂಬಂಧ, ವಿಶೇಷ ಪ್ರೀತಿ; ಬೇಗುದಿ: ತೀವ್ರವಾದ ಬೇಗೆ, ಅತ್ಯುಷ್ಣ; ದುಮ್ಮಾನ: ದುಃಖ; ಏರು: ಹೆಚ್ಚಾಗು; ಹೇರು: ಹೊರೆ, ಭಾರ; ಭೂಪತಿ: ರಾಜ;
ಪದವಿಂಗಡಣೆ:
ಏನ +ಹೇಳುವೆನ್+ಅವನಿಪನ+ ಮದ
ದಾನೆ +ಮುರಿದವು +ಭೀಮಸೇನನೊ
ವೈನತೇಯನೊ +ಕರಿಗಳೋ +ಕಾಳೋರಗನ+ ದಳವೊ
ಮಾನನಿಧಿ+ ಮುರಿವಡೆದನೈ +ವೈರ
ಅನುಬಂಧದ +ಬೇಗುದಿಯ+ ದು
ಮ್ಮಾನ +ದಳವೇರಿದುದು +ಹೇರಿತು +ಭೀತಿ +ಭೂಪತಿಗೆ
ಅಚ್ಚರಿ:
(೧) ಹೋಲಿಸುವ ಪರಿ – ಭೀಮಸೇನನೊ ವೈನತೇಯನೊ ಕರಿಗಳೋ ಕಾಳೋರಗನ ದಳವೊ