ಪದ್ಯ ೬೨: ಪಾಂಡವರ ಮೇಲೆ ದೇವರ ಕರುಣೆ ಹೇಗಿತ್ತು?

ಕೌರವೇಂದ್ರನ ಮನೆಯ ಮಲ್ಲರ
ತೋರಹತ್ತರ ಮುರಿದನದಟ ಸ
ಮೀರ ಸುತನೆಂದರಕೆಯಾಗದೆ ಗೆಲಿದು ಬದುಕಿದರು
ವೀರನಾರಾಯಣನ ಕರುಣಾ
ವಾರಿಧಿಯ ಕಾಲುವೆಯ ಭಾಗ್ಯದ
ಚಾರು ಶಾಲೀವನದ ವೀರರು ತೊಳಗಿ ಬೆಳಗಿದರು (ವಿರಾಟ ಪರ್ವ, ೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ಕೌರವನ ಅರಮನೆಯ ಮಹಾಭುಜಬಲಶಾಲಿಗಳಾದ ಮಲ್ಲರನ್ನು ಭೀಮನು ಕೊಂದನೆಂದು ಯಾರಿಗೂ ತಿಳಿಯಲಿಲ್ಲ. ಪಾಂಡವರು ಗೆದ್ದು ಬದುಕಿದರು. ವೀರನಾರಾಯಣನ ಕರುಣೆಯೆಂಬ ಕೆರೆಯ ಕಾಲುವೆಯಿಂದ ಬಂದ ನೀರಿನಿಂದ ಪೋಷಿತವಾದ ಮಹಾ ಭಾಗ್ಯವೆಂಬ ಬತ್ತದ ಗದ್ದೆಯಮ್ತಿದ್ದ ವೀರರಾದ ಪಾಂಡವರು ಹೊಳೆದು ಪ್ರಕಾಶಿಸಿದರು.

ಅರ್ಥ:
ಮನೆ: ಆಲಯ; ಮಲ್ಲ: ಜಟ್ಟಿ; ತೋರಹತ್ತ: ಬಲಶಾಲಿ; ಮುರಿ: ಸೀಳು; ಅದಟ: ಶೂರ, ಪರಾಕ್ರಮಿ; ಸಮೀರ: ವಾಯು; ಸುತ: ಮಗ; ಅರಕೆ: ಕೊರತೆ, ನ್ಯೂನತೆ; ಗೆಲುವು: ಜಯ; ಬದುಕು: ಜೀವಿಸು; ಕರುಣ: ದಯೆ; ವಾರಿಧಿ: ಸಮುದ್ರ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಭಾಗ್ಯ: ಅದೃಷ್ಟ, ಸುದೈವ; ಚಾರು: ಸುಂದರ; ಶಾಲೀವನ: ಬತ್ತದ ಗದ್ದೆ; ವೀರ: ಪರಾಕ್ರಮಿ; ತೊಳಗು: ಕಾಂತಿ, ಪ್ರಕಾಶ; ಬೆಳಗು: ಹೊಳಪು, ಕಾಂತಿ;

ಪದವಿಂಗಡಣೆ:
ಕೌರವೇಂದ್ರನ +ಮನೆಯ +ಮಲ್ಲರ
ತೋರಹತ್ತರ+ ಮುರಿದನ್+ಅದಟ +ಸ
ಮೀರ +ಸುತನೆಂದ್+ಅರಕೆ+ಆಗದೆ +ಗೆಲಿದು +ಬದುಕಿದರು
ವೀರನಾರಾಯಣನ +ಕರುಣಾ
ವಾರಿಧಿಯ +ಕಾಲುವೆಯ +ಭಾಗ್ಯದ
ಚಾರು +ಶಾಲೀವನದ +ವೀರರು +ತೊಳಗಿ +ಬೆಳಗಿದರು

ಅಚ್ಚರಿ:
(೧) ಉಪಮಾನದ ಪ್ರಯೋಗ – ವೀರನಾರಾಯಣನ ಕರುಣಾವಾರಿಧಿಯ ಕಾಲುವೆಯ ಭಾಗ್ಯದ
ಚಾರು ಶಾಲೀವನದ ವೀರರು ತೊಳಗಿ ಬೆಳಗಿದರು