ಪದ್ಯ ೩೨: ಶಕುನಿಯ ಸೈನ್ಯವನ್ನು ಯಾರು ಕೊಂದರು?

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ (ಗದಾ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಕುನಿಯ ಸೇನೆಯು ವಡಬಾಗ್ನಿಯನ್ನು ಕವಿಯುವ ದುಂಬಿಗಳಂತೆ ಸಹದೇವನನ್ನು ಸುತ್ತುವರಿದಿತು. ಸಹದೇವನು ನಿಮಿಷಾರ್ಧದಲ್ಲಿ ಅವರೆಲ್ಲರನ್ನೂ ತಡೆದು ಶಕುನಿಯ ಸೇನೆಯನ್ನು ಕೊಂದನು.

ಅರ್ಥ:
ಕವಿ: ಆವರಿಸು; ಪರಿವಾರ: ಪರಿಜನ, ಬಂಧುಜನ; ವಡಬ: ಸಮುದ್ರದೊಳಗಿರುವ ಬೆಂಕಿ; ತಿವಿ: ಚುಚ್ಚು; ತುಂಬಿ: ದುಂಬಿ, ಭ್ರಮರ; ಬವರ: ಕಾಳಗ, ಯುದ್ಧ; ಮಂಡಳಿಸು: ಸುತ್ತುವರಿ; ರಥ: ಬಂಡಿ; ಅಗ್ರ: ಮುಂಭಾಗ; ತೆವರು: ಹಿಮ್ಮೆಟ್ಟು, ಅಟ್ಟು, ಓಡಿಸು; ಅನಿಬರ: ಅಷ್ಟುಜನ; ನಿಮಿಷ: ಕ್ಷಣ; ಸಂತವಿಸು: ಸಮಾಧಾನಗೊಳಿಸು; ಕೊಂದು: ಕೊಲ್ಲು; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಕವಿದುದಾ+ ಪರಿವಾರ +ವಡಬನ
ತಿವಿವ+ ತುಂಬಿಗಳಂತೆ +ಶಕುನಿಯ
ಬವರಿಗರು +ಮಂಡಳಿಸೆ +ಸಹದೇವನ +ರಥಾಗ್ರದಲಿ
ತೆವರಿಸಿದನ್+ಅನಿಬರ +ಚತುರ್ಬಲ
ನಿವಹವನು +ನಿಮಿಷಾರ್ಧದಲಿ +ಸಂ
ತವಿಸಿದನು +ಸಹದೇವ +ಕೊಂದನು +ಸೌಬಲನ +ಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕವಿದುದಾ ಪರಿವಾರ ವಡಬನತಿವಿವ ತುಂಬಿಗಳಂತೆ

ಪದ್ಯ ೪೪: ಅರ್ಜುನನು ದ್ರೋಣರಿಗೆ ಏನುತ್ತರವನ್ನು ನೀಡಿದನು?

ಎಂಬಡಿದಿರುತ್ತರವಲೇ ಗರ
ಳಾಂಬುಜದ ಪರಿಮಳಕೆ ಗರುಡನು
ತುಂಬಿಯಾದರೆ ಸೇರುವುದಲೇ ಸಾಕದಂತಿರಲಿ
ಅಂಬುಗಳಿಗಡೆದೆರಹ ಕುಡಿ ನೀ
ವೆಂಬ ನುಡಿಗಂಜುವೆನು ಸೈಂಧವ
ನೆಂಬವನ ತೋರಿಸಿರೆಯೆಂದನು ನಗುತ ಕಲಿಪಾರ್ಥ (ದ್ರೋಣ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಆಚಾರ್ಯರೇ, ನಾನು ಮಾತನಾಡಿದರೆ ನಿಮ್ಮ ವಿರೋಧವಾಗಿ ಆಡಿದಂತಾಗುತ್ತದೆ. ವಿಷದ ಕಮಲಕ್ಕೆ ಗರುಡನೇ ದುಂಬಿಯಾದರೆ ಏನಾಗುತ್ತದೆ. ನನ್ನ ಬಾಣಗಳಿಗೆ ದಾರಿಯನ್ನು ಕೊಡಿ, ನೀವಾಡಿದ ಮಾತಿಗೆ ಹೆದರುತ್ತೇನೆ, ಸೈಂಧವನನ್ನು ತೋರಿಸಿರಿ, ಕೊಲ್ಲುತ್ತೇನೆ, ಹೀಗೆಂದು ಅರ್ಜುನನು ನಗುತ್ತಾ ದ್ರೋಣರಿಗೆ ಉತ್ತರಿಸಿದನು.

ಅರ್ಥ:
ಇದಿರು: ಎದುರು; ಉತ್ತರ: ಜವಾಬು; ಗರಳ: ವಿಷ; ಅಂಜುಜ: ಕಮಲ; ಪರಿಮಳ: ಸುವಾಸನೆ; ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ದುಂಬಿ: ಭ್ರಮರ; ಸೇರು: ಜೊತೆಗೂಡು; ಸಾಕು: ನಿಲ್ಲಿಸು; ಅಂಬು: ಬಾಣ; ಕುಡಿ: ಪಾನಮಾಡು; ನುಡಿ: ಮಾತು; ಅಂಜು: ಹೆದರು; ತೋರಿಸು: ಕಾಣಿಸು; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಎಂಬಡ್+ಇದಿರ್+ಉತ್ತರವಲೇ +ಗರಳ
ಅಂಬುಜದ +ಪರಿಮಳಕೆ +ಗರುಡನು
ತುಂಬಿಯಾದರೆ +ಸೇರುವುದಲೇ +ಸಾಕ್+ಅದಂತಿರಲಿ
ಅಂಬುಗಳಿಗ್+ಅಡೆದೆರಹ+ ಕುಡಿ +ನೀ
ವೆಂಬ +ನುಡಿಗ್+ಅಂಜುವೆನು +ಸೈಂಧವ
ನೆಂಬ್+ಅವನ +ತೋರಿಸಿರ್+ಎಂದನು +ನಗುತ +ಕಲಿ+ಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರಳಾಂಬುಜದ ಪರಿಮಳಕೆ ಗರುಡನು ತುಂಬಿಯಾದರೆ ಸೇರುವುದಲೇ

ಪದ್ಯ ೪೩: ಸೂರ್ಯೋದಯವು ಹೇಗೆ ಕಂಡಿತು?

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ (ದ್ರೋಣ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾತ್ರಿಯಲ್ಲಿ ಚಂದ್ರನು ರಾಜ್ಯಭಾರ ಮಾಡುತ್ತಿದ್ದನು. ಅವನು ಹೋಗಲು ಅರಾಜಕತೆಯುಂಟಾಯಿತು. ಕುಮುದಗಳು ಬಾಗಿಲುಗಳು ಮುಚ್ಚಿದವು. ದುಂಬಿಗಳು ಮಕರಂದದ ಸಿರಿವಂತರಾದ ಕಮಲಗಳ ಅರಮನೆಗಳನ್ನು ಮುತ್ತಿದವು. ಆಕಾಶವನ್ನು ಸೂರ್ಯರಶ್ಮಿಗಳು ತುಂಬಿದವು. ಜನರ ಕಣ್ಣುಗಳನ್ನು ಮುಚ್ಚಿದ್ದ ರೆಪ್ಪೆಗಳು ತೆರೆದವು. ಚಕ್ರವಾಕ ಪಕ್ಷಿಗಳ ಸೆರೆಯನ್ನು ಬಿಡಿಸಿದರು.

ಅರ್ಥ:
ಜಗ: ಪ್ರಪಂಚ; ಅರಾಜಕ: ಅವ್ಯವಸ್ಥೆ; ಕುಮುದ: ಬಿಳಿಯ ನೈದಿಲೆ, ನೈದಿಲೆ; ಆಳಿ: ಸಮೂಹ; ಬಾಗಿಲು: ದ್ವಾರ; ಹೂಡು: ಅಣಿಗೊಳಿಸು; ಸೂರು: ಧ್ವನಿ, ಉಲಿ, ಸ್ವರ; ಕವಿ: ಆವರಿಸು; ದುಂಬಿ: ಭ್ರಮರ; ಸಿರಿ: ಸಂಪತ್ತು; ಅರಮನೆ: ರಾಜರ ಆಲಯ; ಉಗಿ: ಹೊರಹಾಕು; ಅಂಬರ: ಆಗಸ; ಮಯೂಖ: ಕಿರಣ, ರಶ್ಮಿ; ಆಳಿ: ಗುಂಪು; ಭುವನ: ಭೂಮಿ; ಜನ: ಮನುಷ್ಯ; ಕಂಗಳು: ಕಣ್ಣು; ತಗಹು: ಅಡ್ಡಿ, ತಡೆ; ತೆಗೆ: ಹೊರಹಾಕು; ಸೆರೆ: ಬಂಧನ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಜಗವ್+ಅರಾಜಕವಾಯ್ತು+ ಕುಮುದಾ
ಳಿಗಳ +ಬಾಗಿಲು +ಹೂಡಿದವು +ಸೂ
ರೆಗರು+ ಕವಿದುದು +ತುಂಬಿಗಳು +ಸಿರಿವಂತರ್+ಅರಮನೆಯ
ಉಗಿದವ್+ಅಂಬರವನು +ಮಯೂಖಾ
ಳಿಗಳು +ಭುವನದ +ಜನದ+ ಕಂಗಳ
ತಗಹು+ ತೆಗೆದುದು +ಸೆರೆಯ +ಬಿಟ್ಟರು +ಜಕ್ಕವಕ್ಕಿಗಳ

ಅಚ್ಚರಿ:
(೧) ಸೂರ್ಯೋದಯವನ್ನು ಅತ್ಯಂತ ಸೃಜನಾತ್ಮಕತೆಯಲ್ಲಿ ವರ್ಣಿಸಿರುವುದು

ಪದ್ಯ ೪: ಯುಧಿಷ್ಠಿರನು ಯಾರನ್ನು ಕಂಡನು?

ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ
ಬೆನುಗು ತುಂಬಿಯ ಜಾಳಿಗೆಯ ತನಿ
ಮಿನುಗು ಮೋರೆಯ ಕಣ್ಣಕೆಂಪಿನ
ಘನ ಭಯಂಕರ ಭೀಮನಿರವನು ಕಂಡನವನೀಶ (ಅರಣ್ಯ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಭೀಮನ ದಾರಿಯನ್ನು ಹಿಡಿದು ನಡೆಯಲು, ಕಮಲವನವೇ ಬಂದಂತೆ, ಭೀಮನು ತಾವರೆಯ ತೆಕ್ಕೆಯನ್ನು ಹೊತ್ತು ಕಮಲ ಸರೋವರವೇ ಬಂದಂತೆ ಬಂದನು, ಕಮಲಗಳಲ್ಲಿ ದುಂಬಿಗಳು ಸುತ್ತಲೂ ಹಾರಿ ಬರುತ್ತಿದ್ದವು, ಮಿನುಗು ಮೋರೆಯ ಕೆಂಗಣ್ಣಿನ ಭಯಂಕರ ಭೀಮನನ್ನು ಯುಧಿಷ್ಠಿರನು ನೋಡಿದನು.

ಅರ್ಥ:
ಅಂಬುಜ: ತಾವರೆ; ಬಂದು: ಆಗಮಿಸು; ಇದಿರು:ಎದುರು; ಕಂಪು: ಸುಗಂಧ; ತನಿ: ವನ: ಕಾಡು; ಸವಿಯಾದುದು; ರಸ: ಸಾರ; ತಾವರೆ: ಕಮಲ; ತೆಕ್ಕೆ: ಗುಂಪು, ಸಮೂಹ; ಕೊಳ: ಸರೋವರ; ತೋರು: ಕಾಣಿಸು; ಜಿನುಗು: ತೊಟ್ಟಿಕ್ಕು; ತುಂಬಿ: ದುಂಬಿ, ಭ್ರಮರ; ಜಾಳಿಗೆ: ಬಲೆ, ಜಾಲ; ಮಿನುಗು: ಹೊಳಪು; ಮೋರೆ: ಮುಖ; ಕಣ್ಣು: ನಯನ; ಕೆಂಪು: ರಕ್ತವರ್ಣ; ಘನ: ಗಟ್ಟಿ, ತೂಕ; ಭಯಂಕರ: ಘೋರವಾದ; ಇರವು: ಇರುವಿಕೆ, ಸ್ಥಿತಿ; ಅವನೀಶ: ರಾಜ; ಕಂಡು: ನೋಡು;

ಪದವಿಂಗಡಣೆ:
ಎನಲು+ ಬಂದನು +ಭೀಮನ್+ಅಂಬುಜ
ವನವ್+ಇದಿರು +ಬಂದಂತೆ +ಕಂಪಿನ
ತನಿ+ರಸದ +ತಾವರೆಯ +ತೆಕ್ಕೆಯ +ಕೊಳನ +ತೋರಿಕೆಯ
ಬೆನುಗು +ತುಂಬಿಯ +ಜಾಳಿಗೆಯ +ತನಿ
ಮಿನುಗು +ಮೋರೆಯ +ಕಣ್ಣ+ಕೆಂಪಿನ
ಘನ +ಭಯಂಕರ +ಭೀಮನ್+ಇರವನು +ಕಂಡನ್+ಅವನೀಶ

ಅಚ್ಚರಿ:
(೧) ಭೀಮನ ವರ್ಣನೆ – ಮಿನುಗು ಮೋರೆಯ ಕಣ್ಣಕೆಂಪಿನ ಘನ ಭಯಂಕರ ಭೀಮ
(೨) ಉಪಮಾನದ ಬಳಕೆ – ಬಂದನು ಭೀಮನಂಬುಜವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ

ಪದ್ಯ ೫೮: ಭೀಮನು ಕಮಲಕ್ಕೆ ಹೇಗೆ ಮುತ್ತಿಗೆ ಹಾಕಿದನು?

ಚಾಚಿದನು ಬರಿಕೈಯನಬುಜಕೆ
ಚಾಚುವಿಭಪತಿಯಂತೆ ತುಂಬಿಗ
ಳಾ ಚಡಾಳ ಧ್ವನಿಯ ದಟ್ಟಣೆ ಮಿಗಲು ಚೀರಿದವು
ವೀಚಿ ಮಸಗುವ ಕೊಳನು ಜಿನ ಋಷಿ
ಯಾಚರಣೆಯೊಳು ಕಮಲವನವನು
ಲೋಚಿನಲಿ ಲಾವಣಿಗೆಗೊಂಡನು ಭೀಮನಿಮಿಷದಲಿ (ಅರಣ್ಯ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಕಮಲ ಪುಷ್ಪಕ್ಕೆ ಸೊಂಡಿಲನ್ನು ಚಾಚುವ ಆನೆಯಂತೆ ಭೀಮನು ಹೂಗಳಿಗೆ ಕೈಚಾಚಿದನು. ಕಮಲದ ಮೇಲಿದ್ದ ದುಂಬಿಗಳು ಜೋರಾಗಿ ಉಚ್ಚಸ್ವರದಲ್ಲಿ ಚಿರಿದವು. ಕೊಳವು ಜಿನಮುನಿಯಂತೆ ಸುಮ್ಮನಿತ್ತು, ಭೀಮನು ತನ್ನ ಕಣ್ಣಿನಲ್ಲೇ ಕ್ಷಣಾರ್ಧದಲ್ಲಿ ಕಮಲಗಳಿಗೆ ಮುತ್ತಿಗೆ ಹಾಕಿದನು.

ಅರ್ಥ:
ಚಾಚು: ಹರಡು; ಬರಿ: ಕೇವಲ; ಕೈ: ಕರ, ಹಸ್ತ; ಅಬುಜ: ಕಮಲ; ಇಭ: ಆನೆ; ಪತಿ: ಒಡೆಯ; ತುಂಬಿ: ದುಂಬಿ, ಭ್ರಮರ; ಚಡಾಳ: ಹೆಚ್ಚಳ, ಆಧಿಕ್ಯ; ಧ್ವನಿ: ಶಬ್ದ; ದಟ್ಟಣೆ: ನಿಬಿಡತೆ, ಸಾಂದ್ರತೆ; ಮಿಗಲು: ಹೆಚ್ಚು; ಚೀರು: ಕೂಗು; ವೀಚಿ: ಅಲೆ; ಮಸಗು: ಹರಡು; ಕೊಳ: ಸರೋವರ; ಜಿನ: ಇಂದ್ರಿಯಗಳನ್ನು ಗೆದ್ದವನು, ಜಿತೇಂದ್ರಿಯ; ಋಷಿ: ಮುನಿ; ಆಚರಣೆ: ಅನುಸರಿಸುವುದು; ಕಮಲ: ತಾವರೆ; ಲೋಚನ: ಕಣ್ಣು; ಲಾವಣಿಗೆ: ಮುತ್ತಿಗೆ, ಆಕರ್ಷಣೆ; ನಿಮಿಷ: ಕೊಂಚ ಸಮಯ;

ಪದವಿಂಗಡಣೆ:
ಚಾಚಿದನು +ಬರಿಕೈಯನ್+ಅಬುಜಕೆ
ಚಾಚುವ್+ಇಭಪತಿಯಂತೆ +ತುಂಬಿಗಳ್
ಆ+ ಚಡಾಳ +ಧ್ವನಿಯ +ದಟ್ಟಣೆ +ಮಿಗಲು +ಚೀರಿದವು
ವೀಚಿ +ಮಸಗುವ +ಕೊಳನು +ಜಿನ ಋಷಿ
ಆಚರಣೆಯೊಳು +ಕಮಲವನ್+ಅವನು
ಲೋಚಿನಲಿ +ಲಾವಣಿಗೆ+ಕೊಂಡನು +ಭೀಮ+ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಚಾಚಿದನು ಬರಿಕೈಯನಬುಜಕೆಚಾಚುವಿಭಪತಿಯಂತೆ; ವೀಚಿ ಮಸಗುವ ಕೊಳನು ಜಿನ ಋಷಿಯಾಚರಣೆಯೊಳು
(೨) ಭೀಮನು ಕಮಲವನ್ನು ಬಾಚುವ ಪರಿ – ಕಮಲವನವನು ಲೋಚಿನಲಿ ಲಾವಣಿಗೆಗೊಂಡನು ಭೀಮನಿಮಿಷದಲಿ

ಪದ್ಯ ೧೧: ಊರ್ವಶಿಯ ಸ್ನೇಹಿತೆಯರ ಬಳಿ ಯಾರು ಬಂದರು?

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರ ಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ (ಅರಣ್ಯ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಊರ್ವಶಿಯ ಕೆಳದಿಯರ ಮೆಲುನುಡಿಗಳನ್ನು ಕೇಳಿ, ಗಿಣಿಗಳು ಅವರ ಬಳಿಗೆ ಬಂದವು, ಅವರ ಸಂಗೀತವನ್ನು ಕೇಳಿ ಕೋಗಿಲೆಗಳು ಹತ್ತಿರಕ್ಕೆ ಬಂದವು, ಅವರ ಅಂಗದ ಪರಿಮಳವನ್ನು ಮೂಸಿ ದುಂಬಿಗಳ ಹಿಂಡುಗಳು ಅವರ ಹತ್ತಿರಕ್ಕೆ ಬಂದವು, ಅವರ ಹೊಳೆಯುವ ಮುಖಗಳನ್ನು ನೋಡಿ ಚಂದ್ರ ಬಂದನೆಂದು ಚಕೋರ ಪಕ್ಷಿಗಳು ಹಾರಿ ಬಂದವು, ಅವರ ಕಾಲಂದುಗೆಯ ಸದ್ದಿಗೆ ಹಂಸಗಳು ಊರ್ವಶಿಯ ಸ್ನೇಹಿತೆಯರ ಬಳಿ ಬಂದವು.

ಅರ್ಥ:
ಮೆಲುನುಡಿ: ಮೃದು ವಚನ; ಗಿಣಿ: ಶುಕ; ಹೊದ್ದು: ಹೊಂದು, ಸೇರು; ಸರ: ಸ್ವರ, ದನಿ; ಉಲಿ: ಧ್ವನಿಮಾಡು, ಕೂಗು; ಔಕು: ಗುಂಪು, ಒತ್ತು; ಪರಿಮಳ: ಸುಗಂಧ; ಪಸರು: ಹರಡು; ತೂಳು: ಬೆನ್ನಟ್ಟು, ಹಿಂಬಾಲಿಸು; ತುಂಬಿ: ದುಂಬಿ, ಜೀನು; ಡೊಂಬಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಮುಖ: ಆನನ; ಚಕೋರ: ಚಾತಕ ಪಕ್ಷಿ; ಚಯ: ಕಾಂತಿ; ಇಟ್ಟಳಿಸು: ದಟ್ಟವಾಗು, ಒತ್ತಾಗು; ನೇವುರ: ಅಂದುಗೆ, ನೂಪುರ; ಬೊಬ್ಬೆ: ಜೋರಾದ ಶಬ್ದ; ಸಿಲುಕು: ಬಂಧನಕ್ಕೊಳಗಾಗು; ಹಂಸ: ಮರಾಲ; ಕಮಲಾನನೆ: ಕಮಲದಂತ ಮುಖ; ಕೆಳದಿ: ಗೆಳತಿ, ಸ್ನೇಹಿತೆ;

ಪದವಿಂಗಡಣೆ:
ಮೆಲು+ನುಡಿಗೆ+ ಗಿಣಿ +ಹೊದ್ದಿದವು +ಸರದ್
ಉಲಿಗೆ+ ಕೋಗಿಲೆ+ಔಕಿದವು+ ಪರಿ
ಮಳದ +ಪಸರಕೆ+ ತೂಳಿದವು +ತುಂಬಿಗಳು+ ಡೊಂಬಿಯಲಿ
ಹೊಳೆವ +ಮುಖಕೆ +ಚಕೋರ +ಚಯವಿ
ಟ್ಟಳಿಸಿದವು ನೇವುರದ +ಬೊಬ್ಬೆಗೆ
ಸಿಲುಕಿದವು +ಹಂಸೆಗಳು+ ಕಮಲಾನನೆಯ+ ಕೆಳದಿಯರ

ಅಚ್ಚರಿ:
(೧) ಹೊದ್ದಿದವು, ಔಕಿದವು, ತೂಳಿದವು, ವಿಟ್ಟಳಿಸಿದವು, ಸಿಲುಕಿದವು – ಪದಗಳ ಬಳಕೆ
(೨) ಗಿಣಿ, ಕೋಗಿಲೆ, ತುಂಬಿ, ಚಕೋರ , ಹಂಸೆ – ಉಪಮಾನಕ್ಕೆ ಬಳಸಿದುದು

ಪದ್ಯ ೬: ಊರ್ವಶಿಯನ್ನು ಯಾರು ಸುತ್ತುವರೆದರು?

ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ (ಅರಣ್ಯ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ತಮ್ಮ ಅಂಗದ ಪರಿಮಳಕ್ಕೆ ದುಂಬಿಗಳು ಹೂವೆಂದು ಭ್ರಮಿಸಿ ಮುತ್ತುತ್ತಿರಲು, ಕಣ್ಣ ಬೆಳಕು ಕತ್ತಲೆಯನ್ನು ಓಡಿಸುತ್ತಿರಲು, ವಿಧವಿಧವಾದ ಬಂಗಾರದ ಆಭರಣಗಳು, ವಿವಿಧ ವಸ್ತ್ರಗಳ ವಿನ್ಯಾಸ, ವಿವಿಧ ರೀತಿಯ ಮುಡಿಗಳನ್ನು ಧರಿಸಿದ ಅಪ್ಸರೆಯರು ಊರ್ವಶಿಯನ್ನು ಸುತ್ತುವರೆದರು.

ಅರ್ಥ:
ನೆರೆ: ಪಕ್ಕ, ಸಮೀಪ; ಅಬಲೆ: ಹೆಂಗಸು; ಅಂಗ: ದೇಹ, ಶರೀರ; ಅಟ್ಟು: ಅಂಟಿಕೊಳ್ಳು; ಪರಿಮಳ: ಸುಗಂಧ; ಮುತ್ತಿಗೆ: ಆವರಿಸು; ತುಂಬಿ: ದುಂಬಿ, ಜೇನು; ತೆರಳು: ಹೋಗು, ಹೋಗಲಾಡಿಸು; ಕತ್ತಲೆ: ಅಂಧಕಾರ; ಕೆದರು: ಚದುರಿಸು; ಕಣ್ಣು: ನಯನ; ಬೆಳಕು: ಪ್ರಕಾಶ; ಪರಿಪರಿ: ಹಲವಾರು ರೀತಿ; ಹೊಂದು: ಸರಿಯಾಗು; ಒಡಿಗೆ; ಒಡವೆ; ಉಡಿಗೆ: ವಸ್ತ್ರ, ಬಟ್ಟೆ; ದೇಶಿ: ಅಲಂಕಾರ; ಮಿಗೆ: ಅಧಿಕ; ಮುಡಿ: ಶಿರ; ಮುಗುದೆ: ಸುಂದರ ಯುವತಿ; ಬಳಸು: ಆವರಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ನೆರೆದರ್+ಅಬಲೆಯರ್+ಅಂಗವಟ್ಟದ
ಪರಿಮಳದ+ ಮುತ್ತಿಗೆಯ+ ತುಂಬಿಯ
ತೆರಳಿಕೆಯ+ ಕತ್ತಲೆಯ+ ಕೆದರುವ +ಕಣ್ಣಬೆಳಗುಗಳ
ಪರಿಪರಿಯ+ ಹೊಂದ್+ಒಡಿಗೆಗಳ +ಪರಿ
ಪರಿಗಳ್+ಉಡಿಗೆಯ +ದೇಶಿ+ಮಿಗೆ +ಪರಿ
ಪರಿಯ +ಮುಡಿಗಳ +ಮುಗುದೆಯರು +ಬಳಸಿದರು +ಬಾಲಕಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆರೆದರಬಲೆಯರಂಗವಟ್ಟದ ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೨) ಕ ಕಾರದ ತ್ರಿವಳಿ ಪದ – ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೩) ೪-೬ ಸಾಲಿನ ಮೊದಲ ಪದ ಪರಿಪರಿ

ಪದ್ಯ ೩೯: ಅರ್ಜುನನ ಎದುರು ಗೆಲ್ಲಲು ಸಾಧ್ಯವೇ?

ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ (ಕರ್ಣ ಪರ್ವ, ೨೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೇ ಧೃತರಾಷ್ಟ್ರ ರಾಜನೇ, ಹಬ್ಬಿದ ಬೆಂಕಿಯ ಉರಿಯ ಎತ್ತರಕ್ಕೂ ಹಾರಿ ಒಳಗೆ ಹೊಕ್ಕ ಪಕ್ಷಿಯು ಹೊರಬರಲು ಸಾಧ್ಯವೇ? ಅರ್ಜುನನನ್ನು ವಿರೋಧಿಸಿ ನಿಂತ ವೀರನ ಹೆಂಡತಿಯು ಮುತ್ತೈದೆಯಾಗಿ ಉಳಿಯಲು ಸಾಧ್ಯವೇ? ಹೊಸದಾಗಿ ಅರಳಿದ ಸಂಪಿಗೆಯ ಮಕರಂದವನ್ನು ದುಂಬಿಗಳು ತಮ್ಮ ಮರಿಗಳಿಗೆ ತಂದುಕೊಟ್ಟಾವೇ? ಆ ಯುದ್ಧಕ್ಕೆ ಹೋದ ವೃಷಸೇನನ ಮನ್ನಣೆಯ ಸೈನಿಕರು ನನಗೆ ಕಾಣಲಾಗದು ಎಂದು ಸಂಜಯನು ಹೇಳಿದನು.

ಅರ್ಥ:
ಉರಿ: ಬೆಂಕಿ, ಜ್ವಾಲೆ; ಏರು: ಮೇಲೇಳು; ಪತಂಗ: ಹಕ್ಕಿ, ಪಕ್ಷಿ; ಮರಳು: ಹಿಂದಿರುಗು; ರಣ: ಯುದ್ಧ; ನರ: ಅರ್ಜುನ; ಕಳ: ರಣರಂಗ; ಸತಿ: ಹೆಂಡತಿ ಸುವಾಸಿನಿ: ಮುತ್ತೈದೆ; ಅರಳ: ವಿಕಸಿಸಿದ; ಹೊಸ: ನವೀನ; ಸಂಪದೆ: ಸಂಪಿಗೆ; ಮಧು:ಜೇನು; ಮರಿ: ಚಿಕ್ಕ; ತಹ: ಒಪ್ಪಂದ, ತಂದುಕೊಡು; ತುಂಬಿ: ದುಂಬಿ, ಜೇನು; ಕೇಳು: ಆಲಿಸು; ಅರಸ: ರಾಜ; ಹರಿಬ: ಕಾಳಗ, ಯುದ್ಧ; ಹೊಕ್ಕು: ಸೇರು; ಸುಭಟ: ಪರಾಕ್ರಮಿ; ಕಾಣೆ: ನೋಡಲಾಗದು;

ಪದವಿಂಗಡಣೆ:
ಉರಿಯ +ಸರಿಗೇರಿದ+ ಪತಂಗಕೆ
ಮರಳುದಲೆಯೇ +ಮತ್ತೆ +ರಣದಲಿ
ನರನೊಡನೆ +ಕಳನೇರಿದಾತನ+ ಸತಿ+ ಸುವಾಸಿನಿಯೆ
ಅರಳ+ ಹೊಸ +ಸಂಪದೆಯ +ಮಧುವನು
ಮರಿಗೆ+ ತಹವೇ+ ತುಂಬಿಗಳು +ಕೇಳ್
ಅರಸ +ಹರಿಬಕೆ+ ಹೊಕ್ಕ +ಸುಭಟರ+ ಕಾಣೆ +ನಾನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಸರಿಗೇರಿದ ಪತಂಗಕೆ ಮರಳುದಲೆಯೇ; ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ; ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು

ಪದ್ಯ ೩೬: ಶಲ್ಯನು ಸಾರಥಿಯಾಗಲು ಒಪ್ಪಿದನೆ?

ಶಿವಶಿವಾ ನಿರ್ಬಂಧವಿದು ಕೌ
ರವನಲಾಯಿತೆ ಮದ್ಯಮಯ ಗಂ
ಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
ಅವನಿಪತಿಗಳ ಸೇವೆಯಿದು ಕ
ಷ್ಟವಲೆ ಮೊದಲಲಿ ಬಳಿಕ ನಾವಿ
ನ್ನವಗಡಿಸಲೇನಹದು ಸಾರಥಿಯಾದೆವೇಳೆಂದ (ಕರ್ಣ ಪರ್ವ, ೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಪಾದಗಳಿಗೆರಗಿದನ್ನು ಕಂಡು, ಶಿವಶಿವಾ ಕೌರವನು ಎಂತಹ ನಿರ್ಬಂಧವನ್ನು ತಂದೊಡ್ಡಿದ್ದಾನೆ, ದುಂಬಿಗಳನ್ನೆಳೆತಂದು ಹೆಂಡದ ವಾಸನೆಯನ್ನು ಕುಡಿಸುವ ಹಾಗಾಯಿತು. ರಾಜ ಸೇವೆಯೆಂಬುದೇ ಕಷ್ಟಕರವಲ್ಲವೇ? ಹೀಗಿರುವಾಗ ನಾವು ಬೇಡವೆಂದರಾದೀತೆ? ಸಾರಥಿಯಾಗಲೊಪ್ಪಿದ್ದೇನೆ ಮೇಲೇಳು ಎಂದು ಶಲ್ಯನು ದುರ್ಯೋಧನನಿಗೆ ನುಡಿದನು.

ಅರ್ಥ:
ಶಿವಶಿವಾ: ಭಗವಂತ, ಆಡು ಭಾಷೆಯಲ್ಲಿ ದೇವರ ಹೆಸರನ್ನು ಹೇಳುವ ಪರಿ; ನಿರ್ಬಂಧ: ಬಲವಂತ, ಒತ್ತಾಯ; ಮದ್ಯ: ಹೆಂಡ, ಮಾದಕ ದ್ರವ್ಯ; ಗಂಧ: ವಾಸನೆ; ಕುಡಿ: ಸೇವಿಸು; ಪರಿ: ರೀತಿ; ತುಂಬಿ: ದುಂಬಿ; ಸೆರೆ: ಬಂಧಿಸು; ಅವನಿಪತಿ: ರಾಜ; ಸೇವೆ: ಊಳಿಗ, ಚಾಕರಿ; ಕಷ್ಟ: ಕಠಿಣ; ಬಳಿಕ: ನಂತರ; ಅವಗಡಿಸು:ಕಡೆಗಣಿಸು; ಸಾರಥಿ: ಸೂತ, ರಥವನ್ನು ಓಡಿಸುವವ; ಏಳು: ಮೇಲೆ ಬಾ, ನಿಲ್ಲು;

ಪದವಿಂಗಡಣೆ:
ಶಿವಶಿವಾ +ನಿರ್ಬಂಧವಿದು +ಕೌ
ರವನಲಾಯಿತೆ +ಮದ್ಯಮಯ +ಗಂ
ಧವನು +ಕುಡಿಸುವ +ಪರಿಯಲಾ +ತುಂಬಿಗಳ +ಸೆರೆವಿಡಿದು
ಅವನಿಪತಿಗಳ +ಸೇವೆಯಿದು +ಕ
ಷ್ಟವಲೆ+ ಮೊದಲಲಿ+ ಬಳಿಕ+ ನಾವಿನ್ನ್
ಅವಗಡಿಸಲೇನಹದು +ಸಾರಥಿಯಾದೆವ್+ಏಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮದ್ಯಮಯ ಗಂಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
(೨) ರಾಜರ ಸೇವೆ ಎಂತಹದು? -ಅವನಿಪತಿಗಳ ಸೇವೆಯಿದು ಕಷ್ಟವಲೆ ಮೊದಲಲಿ

ಪದ್ಯ ೯:ದುಂಬಿಗಳು ಮತ್ತು ಇತರೆ ಪಕ್ಷಿಗಳು ವಸಂತ ಮಾಸದಲ್ಲಿ ಹೇಗೆ ನಲಿದಾಡಿದವು?

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು (ಆದಿ ಪರ್ವ, ೫ ಸಂಧಿ, ೯ ಪದ್ಯ)

ತಾತ್ಪರ್ಯ:
ವಸಂತ ಮಾಸವು ಮುಂದುವರೆಯಿತು. ನೀರಿನ ಮೇಲೆ ದೋಣಿ ತೇಲುವ ಹಾಗೆ ತಾವರೆ ಹೂವಿನ (ತಾವರೆಯನ್ನೇ ದೋಣಿಯಾಗಿ ವಿಶ್ಲೆಸಿಸಲಾಗಿದೆ) ಮೇಲೆ ದುಂಬಿಗಳು ಮಕರಂದವನ್ನು ಹೀರಲು ಸೇರಿದವು. ಜಿನುಗುತಿರುವ ಹೂಗಳ ಮಕರಂದದ ತುಂತುರಿನಲ್ಲಿ ಕ್ರೌಂಚಪಕ್ಷಿ, ಚಕ್ರವಾಕ, ರಾಜಹಂಸಗಳು ತೋಯ್ದು ಹೋದವು.

ಅರ್ಥ:
ಪಸರಿಸು: ಹರಡು; ಮಧು: ಜೇನು, ಮಕರಂದ; ಮಾಸ: ತಿಂಗಳು
ಮಧುಮಾಸ: ವಸಂತ ಮಾಸ; ತಾವರೆ: ಕಮಲ, ಸರಸಿಜ,
ಯೆಸಳ: ಹೂವಿನ ದಳ; ದೋಣಿಯ: ನಾವೆ; ಹಾಯ್ದು: ಹರಡು,ಹೊಮ್ಮು
ಕುಸುಮ: ಹೂವು; ರಸ: ತಿರುಳು; ಉಬ್ಬರ: ಹೆಚ್ಚು, ಅತಿಶಯ, ಆಡಂಬರ
ತೊರೆ: ಹರಿ, ಪ್ರವಹಿಸು, ಹರಡು; ಒಸರ್: ಜಿನುಗು, ಸೋರು
ತುಷಾರ: ಹಿಮ, ಮಂಜು; ದಂಪತಿವಕ್ಕಿ: ಚಕ್ರವಾಕ ಪಕ್ಷಿ
ಸಾರಸ: ಕೊಳ, ಸರೋವರ

ಪದವಿಂಗಡಣೆ:
ಪಸರಿಸಿತು +ಮಧುಮಾಸ +ತಾವರೆ
ಯೆಸಳ+ ದೋಣಿಯ +ಮೇಲೆ +ಹಾಯ್ದವು
ಕುಸುಮ +ರಸದ್+ಉಬ್ಬರದ +ತೊರೆಯನು +ಕೂಡೆ +ತುಂಬಿಗಳು
ಒಸರ್ವ +ಮಕರಂದದ+ ತುಷಾರದ
ಕೆಸರೊಳ್+ಅದ್ದವು+ ಕೊಂಚೆಗಳು+ ಹಗಲ್
ಎಸೆವ +ದಂಪತಿವಕ್ಕಿ+ ಸಾರಸ+ ರಾಜಹಂಸಗಳು

ಅಚ್ಚರಿ:
ವಸಂತದಲ್ಲಿ ಹೂವಿನ ಕಂಪು, ಎಷ್ಟು ಸವಿಯಾಗಿರುತ್ತದೆ ಎಂದು ಅತ್ಯಂತ ಸುಂದರವಾಗಿ ವರ್ಣಿಸಿರುವುದು.