ಹೊಲಬುದಪ್ಪಿದ ತಳಪಟದ ಹೆ
ಬ್ಬುಲಿಯವೊಲು ನಿನ್ನಾತ ಸಿಲುಕಿದ
ನಿಲುಕಿ ನೋಡಿದನೆಲ್ಲಿ ತೋರರ್ಜುನನನೆನಗೆನುತ
ಉಲಿಯೆ ಸೈಂಧವನಿತ್ತ ಪಾರ್ಥನ
ಮುಳಿದು ಜರೆದನು ಕೃಷ್ಣನಹಿತನ
ತಲೆಗೆ ಹರಹಿಡಿವಂಬ ತೊಡು ತೊಡು ಬೇಗ ಮಾಡೆಂದ (ದ್ರೋಣ ಪರ್ವ, ೧೪ ಸಂಧಿ, ೩೭ ಪದ್ಯ)
ತಾತ್ಪರ್ಯ:
ದಾರಿತಪ್ಪಿ ಕಾಡಿನಿಂದ ಮೈದಾನಕ್ಕೆ ಬಂದ ಹೆಬ್ಬುಲಿಯಂತೆ ಸೈಂಧವನು ಕಾಲನ್ನೂರಿ ನಿಲುಕಿ ನೋಡಿ, ಎಲ್ಲಿದ್ದಾನೆ ಅರ್ಜುನನನ್ನು ನನಗೆ ತೋರಿಸಿ ಎಂದು ಅಣುಕಿಸಲು, ಕೃಷ್ಣನು ಅರ್ಜುನನನ್ನು ಜರೆದು ಸೈಂಧವನ ತಲೆಗೆ ಶಿವನು ಕೊಟ್ಟ ಪಾಶುಪತಾಸ್ತ್ರವನ್ನು ಪ್ರಯೋಗಿಸು, ಬೇಗ ಮಾಡು ಎಂದು ಹೇಳಿದನು.
ಅರ್ಥ:
ಹೊಲಬು: ದಾರಿ, ಪಥ, ಮಾರ್ಗ; ತಪ್ಪು: ಸರಿಯಿಲ್ಲದ್ದು; ತಳಪಟ: ಸೈನ್ಯ, ಯುದ್ಧ ಬಯಲು; ಹೆಬ್ಬುಲಿ: ದೊಡ್ಡಹುಲಿ; ಸಿಲುಕು: ಬಂಧನಕ್ಕೊಳಗಾದುದು; ನಿಲುಕು: ಕೈಚಾಚಿ ಹಿಡಿ, ಎಟುಕಿಸಿಕೊಳ್ಳು; ನೋಡು: ವೀಕ್ಷಿಸು; ತೋರು: ಗೋಚರಿಸು; ಉಲಿ: ಶಬ್ದ; ಮುಳಿ: ಸಿಟ್ಟು, ಕೋಪ; ಜರೆ: ಬಯ್ಯು; ಅಹಿತ: ವೈರಿ; ತಲೆ: ಶಿರ; ಹರಹು: ವಿಸ್ತಾರ, ವೈಶಾಲ್ಯ; ತೊಡು: ಧರಿಸು; ಬೇಗ: ತ್ವರಿತ;
ಪದವಿಂಗಡಣೆ:
ಹೊಲಬು+ತಪ್ಪಿದ +ತಳಪಟದ +ಹೆ
ಬ್ಬುಲಿಯವೊಲು +ನಿನ್ನಾತ+ ಸಿಲುಕಿದ
ನಿಲುಕಿ+ ನೋಡಿದನ್+ಎಲ್ಲಿ +ತೋರ್+ಅರ್ಜುನನನ್+ಎನಗೆನುತ
ಉಲಿಯೆ +ಸೈಂಧವನ್+ಇತ್ತ +ಪಾರ್ಥನ
ಮುಳಿದು +ಜರೆದನು +ಕೃಷ್ಣನ್+ಅಹಿತನ
ತಲೆಗೆ +ಹರಹಿಡಿವ್+ಅಂಬ +ತೊಡು +ತೊಡು +ಬೇಗ +ಮಾಡೆಂದ
ಅಚ್ಚರಿ:
(೧) ಉಪಮಾನದ ಪ್ರಯೋಗ – ಹೊಲಬುದಪ್ಪಿದ ತಳಪಟದ ಹೆಬ್ಬುಲಿಯವೊಲು
(೨) ಪಾಶುಪತಾಸ್ತ್ರ ಎಂದು ಹೇಳಲು – ಹರಹಿಡಿವಂಬ ಪದದ ಬಳಕೆ