ಪದ್ಯ ೧೪: ಪಾಂಡು ಯಾವ ವಿಪತ್ತಿಗೆ ಗುರಿಯಾದ?

ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನೊಳೊಬ್ಬ ಮುನಿ ಮೃಗಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬಿನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ (ಆದಿ ಪರ್ವ್, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ನಿನ್ನ ತಮ್ದೆಗೆ ವಿಪತ್ತು ಬಂದ ರೀತಿಯೇ ಪಾಂಡು ಮಹಾರಾಜನಿಗೂ ವಿಪತ್ತು ಬಂದೊದಗಿತು. ಪಾಂಡುವು ಒಂದು ಜಾಗದಲ್ಲಿ ಒಬ್ಬ ಮುನಿಯು ತನ್ನ ಪತ್ನಿಯೊಂದಿಗೆ ಜಿಂಕೆಗಳ ರೂಪವನ್ನು ತಾಳಿ ರಮಿಸುತ್ತಿದ್ದುದನ್ನು ಕಂಡನು. ಇವು ಸಾಧಾರಣ ಜಿಂಕೆಗಳೆಂದು ತಿಳಿದು ಒಂದೇ ಬಾಣದಿಂದ ಅವೆರಡನ್ನೂ ಹೊಡೆದನು. ಬಾನವು ನಟ್ಟೊಡನೆ ಅವರಿಬ್ಬರೂ ಮನುಷ್ಯರಾಗಿ ಚೀರಿದರು.

ಅರ್ಥ:
ಬಂದು: ಆಗಮಿಸು; ಠಾವು: ಎಡೆ, ಸ್ಥಳ, ಜಾಗ; ಮುನಿ: ಋಷಿ; ಮೃಗ: ಪ್ರಾಣಿ, ಜಿಂಕೆ; ಮಿಥುನ: ಜೋಡಿ; ರೂಪು: ಆಕಾರ; ನಿಂದು: ನಿಲ್ಲು; ರಮಿಸು: ಪ್ರೇಮಿಸು; ದ್ವಯ: ಎರಡು; ಹೂಡು: ತೊಡು; ಅಂಬು: ಬಾಣ; ಶರ: ಬಾಣ; ಕೀಲಿಸು: ನಾಟು, ಚುಚ್ಚು; ನರ: ಮನುಷ್ಯ;

ಪದವಿಂಗಡಣೆ:
ಬಂದುದಾ +ಪಾಂಡುವಿಗೆ +ನಿನ್ನಯ
ತಂದೆಗಾದ +ವಿಪತ್ತಿನಂದದಲ್
ಒಂದು +ಠಾವಿನೊಳೊಬ್ಬ+ ಮುನಿ +ಮೃಗಮಿಥುನ +ರೂಪಿನಲಿ
ನಿಂದು +ರಮಿಸುತ್ತಿರೆ+ ಮೃಗ+ದ್ವಯವ್
ಎಂದು +ಹೂಡಿದನ್+ಅಂಬಿನ್+ಇಬ್ಬರಿಗ್
ಒಂದು +ಶರದಲಿ+ ಕೀಲಿಸಿದಡ್+ಒರಲಿದರು +ನರರಾಗಿ

ಅಚ್ಚರಿ:
(೧) ಬಂದು, ನಿಂದು, ಎಂದು, ಒಂದು – ಪ್ರಾಸ ಪದಗಳು
(೨) ಶರ, ಅಂಬು – ಸಮಾನಾರ್ಥಕ ಪದ

ಪದ್ಯ ೪೫: ದುಶ್ಯಾಸನು ಅಭಿಮನ್ಯುವನ್ನು ಹೇಗೆ ಆಕ್ರಮಣ ಮಾಡಿದನು?

ಕಾತರಿಸದಿರು ಬಾಲ ಭಾಷೆಗ
ಳೇತಕಿವು ನೀ ಕಲಿತ ಬಲುವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ (ದ್ರೋಣ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುಶ್ಯಾಸನನು ಉತ್ತರಿಸುತ್ತಾ, ಸಲ್ಲದ ಮಾತಾಡಬೇಡ, ನಿನ್ನ ಬಿಲ್ಲುಗಾರಿಕೆಯ ಚಾತುರ್ಯವಿದ್ದರೆ ಅದನ್ನು ತೋರಿಸು, ಹೆದರುಪುಕ್ಕರನು ಸೋಲಿಸಿ ಅಹಂಕಾರದ ಅತಿರೇಕಕ್ಕೆ ತೆರಳುವ ಜಾಗವಿದಲ್ಲ ಎಂದು ನೂರುಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಕಾತರ: ಕಳವಳ, ಉತ್ಸುಕತೆ; ಬಾಲ: ಚಿಕ್ಕವ, ಮಗು; ಭಾಷೆ: ಮಾತು; ಕಲಿತ: ಅಭ್ಯಾಸಮಾಡಿದ; ಬಲು: ಶಕ್ತಿ; ಅತಿಶಯ: ಹೆಚ್ಚು, ಅಧಿಕ; ತೋರು: ಪ್ರದರ್ಶಿಸು; ಕೈಗುಣ: ಚಾಣಾಕ್ಷತೆ; ಭೀತ: ಭಯ; ಭಟ: ಸೈನಿಕ; ಹೊಳ್ಳು: ಸಾರವಿಲ್ಲದ; ಮದ: ಅಹಂಕಾರ; ಅತಿರೇಕ: ಅತಿಶಯ, ರೂಢಿಗೆ ವಿರೋಧವಾದ ನಡೆ; ಠಾವು: ಎಡೆ, ಸ್ಥಳ, ತಾಣ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಬಾಣ: ಅಂಬು, ಶರ; ಇಂದ್ರ: ಸುರೇಶ; ಸುತ: ಮಗ;

ಪದವಿಂಗಡಣೆ:
ಕಾತರಿಸದಿರು +ಬಾಲ +ಭಾಷೆಗಳ್
ಏತಕಿವು +ನೀ +ಕಲಿತ +ಬಲುವ್
ಇದ್ +ಅತಿಶಯವುಂಟಾದಡ್+ಎಮ್ಮೊಳು +ತೋರು +ಕೈಗುಣವ
ಭೀತ +ಭಟರನು +ಹೊಳ್ಳು+ಕಳೆದ +ಮದ
ಅತಿರೇಕದ +ಠಾವಿದಲ್ಲೆಂದ್
ಈತನ್+ಎಚ್ಚನು +ನೂರು +ಬಾಣದಲ್+ಇಂದ್ರಸುತ+ ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಸುತಸುತನ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಹಂಗಿಸುವ ಪರಿ – ಭೀತ ಭಟರನು ಹೊಳ್ಳುಗಳೆದ ಮದಾತಿರೇಕದ ಠಾವಿ

ಪದ್ಯ ೩೭: ದುರ್ಯೋಧನನು ಲಜ್ಜೆಯಿಂದ ತಲೆಬಾಗಲು ಕಾರಣವೇನು?

ಮುಂದೆ ವಿಮಲಸ್ಫಟಿಕ ಭೂಮಿಯ
ನೊಂದು ಠಾವಿನೊಳೀಕ್ಷಿಸುತೆ ಕೊಳ
ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆರಗ
ಅಂದು ದ್ರೌಪದಿ ಸಹಿತ ನಾರೀ
ವೃಂದ ಕೈಗಳ ಹೊಯ್ದು ಮಿಗೆ ಗೊ
ಳ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ (ಸಭಾ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಇನ್ನು ಸ್ವಲ್ಪ ಮುಂದೆ ಹೋಗಲು ನಿರ್ಮಲ ಸ್ಫಟಿಕವಾದ ಜಾಗವನ್ನು ನೋಡಿದೆ, ಅದನ್ನು ಕೊಳವೆಂದು ಭಾವಿಸಿ ನಿಂತು ನನ್ನ ಬಟ್ಟೆಯ ಸೆರಗನ್ನು ಸರಿಮಾಡಿಕೊಂಡೆ. ಆಗ ದ್ರೌಪದೀ ಸಮೇತ ಸಮಸ್ತ ಸ್ತ್ರೀಯರು ನನ್ನನ್ನು ನೋಡಿ ಕೈತಟ್ಟಿ ಗೊಳ್ಳೆಂದು ನಕ್ಕರು, ನಾನು ನೊಂದುಕೊಂಡು ನಾಚಿಕೆಯಿಂದ ತಲೆತಗ್ಗಿಸಿದೆ.

ಅರ್ಥ:
ಮುಂದೆ: ಎದುರು; ವಿಮಲ: ನಿರ್ಮಲ; ಸ್ಫಟಿಕ: ನಿರ್ಮಲವೂ, ಪಾರದರ್ಶಕವೂ ಆದ ಒಂದು ಬಗೆಯ ಬಿಳಿಯ ಹೊಳಪಿನ ಕಲ್ಲು; ಭೂಮಿ: ನೆಲ; ಠಾವು: ಎಡೆ, ಸ್ಥಳ, ತಾಣ; ಈಕ್ಷಿಸು: ನೋಡು; ಕೊಳ: ನೀರಿನ ಗುಂಡಿ; ಬಗೆ: ತಿಳಿ; ನಿಂದು: ನಿಲ್ಲು; ಸಂವರಿಸು: ಸಜ್ಜು ಮಾಡು; ಮುಂಜೆರಗ: ಸೆರಗಿನ ಮುಂಭಾಗ; ಸಹಿತ: ಜೊತೆ; ನಾರಿ: ಹೆಣ್ಣು; ವೃಂದ: ಗುಂಪು; ಕೈ: ಹಸ್ತ; ಹೊಯ್ದು: ಹೊಡೆ, ತಟ್ಟು; ಮಿಗೆ: ಅಧಿಕವಾಗಿ; ಗೊಳ್ಳ್: ನಗುವ ಶಬ್ದವನ್ನು ವಿವರಿಸುವ ಪದ; ನಕ್ಕು: ಹರ್ಷಿಸು; ನೊಂದು: ಬೇಸರ; ತಲೆ: ಶಿವ; ವಾಗು: ಬಾಗು; ಲಜ್ಜೆ: ನಾಚಿಕೆ, ಸಂಕೋಚ;

ಪದವಿಂಗಡಣೆ:
ಮುಂದೆ +ವಿಮಲ+ಸ್ಫಟಿಕ+ ಭೂಮಿಯನ್
ಒಂದು +ಠಾವಿನೊಳ್+ಈಕ್ಷಿಸುತೆ+ ಕೊಳ
ನೆಂದು +ಬಗೆದೆನು+ ನಿಂದು +ಸಂವರಿಸಿದೆನು+ ಮುಂಜೆರಗ
ಅಂದು +ದ್ರೌಪದಿ +ಸಹಿತ +ನಾರೀ
ವೃಂದ +ಕೈಗಳ+ ಹೊಯ್ದು +ಮಿಗೆ +ಗೊ
ಳ್ಳೆಂದು +ನಕ್ಕುದು +ನೊಂದು +ತಲೆವಾಗಿದೆನು +ಲಜ್ಜೆಯಲಿ

ಅಚ್ಚರಿ:
(೧) ನಗುವನ್ನು ವಿವರಿಸುವ ಪರಿ – ಕೈಗಳ ಹೊಯ್ದು ಮಿಗೆ ಗೊಳ್ಳೆಂದು ನಕ್ಕುದು