ಪದ್ಯ ೪೨: ಚತುರಂಗ ಬಲವು ಹೇಗೆ ನಾಶವಾಯಿತು?

ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮುಮ್ಮುಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ (ಗದಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸುತ್ತಲೂ ಆಯುಧದ ಕಿಚ್ಚು, ಬಿಟ್ಟೋಡಿದರೆ ಅಶ್ವತ್ಥಾಮನ ಬಾಣಗಳು. ತಪ್ಪಿಸಿಕೊಂಡು ಹೋದರೆ ಬಾಗಿಲುಗಳಲ್ಲಿ ಕೃತವರ್ಮ, ಕೃಪರ ಬಾಣ ಪ್ರಯೋಗ. ಬಾಣಗಳ ಹೊಡೆತಕ್ಕೆ ಚತುರಂಗ ಬಲವು ನಾಶವಾಗಿ ಹೋಯಿತು.

ಅರ್ಥ:
ಕೂಡೆ: ಕೂಡಲೆ; ಕಟ್ಟು: ಬಂಧಿಸು; ಕಿಚ್ಚು: ಬೆಂಕಿ; ತೆರಪು: ಮಯ, ಸಂದರ್ಭ; ಓಡು: ಧಾವಿಸು; ಸುತ: ಮಗ; ಗುರು: ಆಚಾರ್ಯ; ಶರ: ಬಾಣ; ಬಾಗಿಲು: ಕದ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಝಾಡಿ: ಕಾಂತಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ನೃಪ: ರಾಜ; ಪರಿವಾರ: ಬಂಧುಜನ;

ಪದವಿಂಗಡಣೆ:
ಕೂಡೆ +ಕಟ್ಟಿತು +ಕಿಚ್ಚು +ತೆರಪಿನಲ್
ಓಡುವಡೆ +ಗುರುಸುತನ +ಶರ +ಮಿ
ಕ್ಕೋಡುವಡೆ +ಬಾಗಿಲುಗಳಲಿ +ಕೃತವರ್ಮ +ಕೃಪರೆಸುಗೆ
ಕೂಡೆ +ಮುಮ್ಮುಳಿಯೋದುದ್+ಈ+ ಶರ
ಝಾಡಿಯಲಿ+ ಚತುರಂಗ+ಬಲವ
ಕ್ಕಾಡಿತೇನೆಂಬೆನು +ಯುಧಿಷ್ಠಿರ+ನೃಪನ +ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೂಡೆ ಕಟ್ಟಿತು ಕಿಚ್ಚು
(೨) ಓಡು, ಮಿಕ್ಕೋಡು – ಪದಗಳ ಬಳಕೆ

ಪದ್ಯ ೧೯: ಮಂತ್ರಾಸ್ತ್ರದ ಅಧಿದೇವತೆಗಳು ಏನು ಮಾಡಿದರು?

ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ (ಗದಾ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗ ಅಶ್ವತ್ಥಾಮನು ದಿವ್ಯಾಸ್ತ್ರಗಳನ್ನು ಪ್ರಯೋಗಿಸಲು, ಆ ಅಸ್ತ್ರಗಳ ಮಂತ್ರಾಭಿಮಾನ ದೇವಿಯರು ಕೈ ಮುಗಿದು ಭೂತಕ್ಕೆ ನಮಸ್ಕರಿಸಿದರು. ಒರೆಯಿಂದ ಖಡ್ಗವನ್ನು ಹಿರಿದು ಉದ್ವೇಗದಿಂದ ಅಪ್ಪಳಿಸಿದರೆ ಕತ್ತಿಯು ಕೈಜಾರಿ ಕೆಳಕ್ಕೆ ಬಿದ್ದಿತು.

ಅರ್ಥ:
ಉಗಿ: ಹೊರಹಾಕು; ಅಸ್ತ್ರ: ಶಸ್ತ್ರ; ತಿರುಗು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ, ಸುತ್ತು; ಉಗುಳು: ಹೊರಹಾಕು; ಭೂತ: ದೆವ್ವ; ಅಂಘ್ರಿ: ಪಾದ; ಮುಗಿದ: ಜೋಡಿಸಿದ; ಕೈ: ಹಸ್ತ; ಎರಗು: ಬಾಗು, ನಮಸ್ಕರಿಸು; ಅಧಿದೇವತೆ: ಮುಖ್ಯವಾದ ದೇವತೆ; ಒರೆ: ಶೋಧಿಸಿ ನೋಡು, ಹೇಳು; ಆಯುಧ: ಶಸ್ತ್ರ; ಉಬ್ಬೆ: ರಭಸ; ಅಪ್ಪಳಿಸು: ತಾಗು; ಕಯ್ಯ್: ಹಸ್ತ; ಜಗುಳು: ಜಾರು; ಬಿದ್ದು: ಕುಸಿ; ಝಂಕೆ: ಆರ್ಭಟ; ಅದ್ದು: ತೋಯು, ಮುಳುಗು; ಭಯ: ಹೆದರಿಕೆ; ಝಾಡಿ: ಕಾಂತಿ;

ಪದವಿಂಗಡಣೆ:
ಉಗಿದು +ಮಂತ್ರಾಸ್ತ್ರವನು+ ತಿರುವಿಂದ್
ಉಗುಳಿಚಿದಡ್+ಆ+ ಭೂತದ್+ಅಂಘ್ರಿಗೆ
ಮುಗಿದ +ಕೈಗಳಲ್+ಎರಗಿದರು +ಶಸ್ತ್ರ+ಅಧಿದೇವಿಯರು
ಉಗಿದನ್+ಒರೆಯಲಡ್+ಆಯುಧವನ್
ಉಬ್ಬೆಗದಲ್+ಅಪ್ಪಳಿಸಿದಡೆ+ ಕಯ್ಯಿಂ
ಜಗುಳ್ದು+ ಬಿದ್ದುದು+ ಝಂಕೆ+ಅದ್ದುದು+ ಭಯದ +ಝಾಡಿಯಲಿ

ಅಚ್ಚರಿ:
(೧) ಉಗಿ – ೧,೨, ೪ ಸಾಲಿನ ಮೊದಲ ಪದ
(೨) ಮಂತ್ರಾಸ್ತ್ರವು ನಿಷ್ಪ್ರಯೋಜಕವಾಯಿತು ಎಂದು ಹೇಳಲು – ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
(೩) ಬ, ಝ ಕಾರದ ಪದ ರಚನೆ – ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ

ಪದ್ಯ ೮: ಅಶ್ವತ್ಥಾಮನ ಕೋಪದ ತೀವ್ರತೆ ಹೇಗಿತ್ತು?

ಕೂಡೆ ಹರಿಹಂಚಾದ ತಂದೆಯ
ಗೂಡ ನೋಡದ ಮುನ್ನ ಕಂಬನಿ
ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ
ನೋಡಲೆಳಸದ ಮುನ್ನ ಕಿಡಿಗಳ
ಝಾಡಿಯನು ಕಣ್ಣುಗುಳಿದವು ಮಿಗೆ
ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ (ದ್ರೋಣ ಪರ್ವ, ೧೯ ಸಂಧಿ, ೮ ಪದ್ಯ)

ತಾತ್ಪರ್ಯ:
ತುಂಡು ತುಂಡಾದ ತನ್ನ ತಂದೆಯ ದೇಹವನ್ನು ನೋಡುವ ಮೊದಲೇ ಕಣ್ಣಾಲಿಯಲ್ಲಿ ನೀರುತುಂಬಿ ದೇಹವು ಕಾಣಿಸಲಿಲ್ಲ. ನೋಡಲು ಇಚ್ಛೆ ಬರಲಿಲ್ಲ. ಅದಕ್ಕೆ ಮೊದಲೇ ಅಶ್ವತ್ಥಾಮನ ಕಣ್ಣೂಗಳು ಕೆಂಪಾಗಿ ಕಿಡಿಯುಗುಳಿದವು. ರೋಷದಲ್ಲಿ ಪಾಂಡವರ ಸೈನ್ಯವೇ ಕಾಣಲಿಲ್ಲ.

ಅರ್ಥ:
ಕೂಡು: ಜೊತೆ; ಹರಿ: ಸೀಳು; ಹಂಚು: ಹರಡು; ತಂದೆ: ಪಿತ; ಗೂಡು: ದೇಹ; ನೋಡು: ವೀಕ್ಷಿಸು; ಮುನ್ನ: ಮೊದಲು; ಕಂಬನಿ: ಕಣ್ಣೀರು; ಮೂಡು: ಹೊಮ್ಮು; ಮುಳುಗು: ತೋಯು, ಮಿಂದು; ಆಲಿ: ಕಣ್ಣು; ಕಾಣು: ತೋರು; ಪಿತೃ: ತಂದೆ; ಕಳೇವರ: ಪಾರ್ಥಿವ ಶರೀರ; ಎಳಸು: ಬಯಸು, ಅಪೇಕ್ಷಿಸು; ಮುನ್ನ: ಮೊದಲು; ಕಿಡಿ: ಬೆಂಕಿ; ಝಾಡಿ: ಕಾಂತಿ; ಕಣ್ಣು: ನಯನ; ಮಿಗೆ: ಅಧಿಕವಾಗಿ; ಕಾಣು: ತೋರು; ಪರಬಲ: ವೈರಿ ಸೇನೆ;

ಪದವಿಂಗಡಣೆ:
ಕೂಡೆ +ಹರಿಹಂಚಾದ +ತಂದೆಯ
ಗೂಡ +ನೋಡದ +ಮುನ್ನ +ಕಂಬನಿ
ಮೂಡಿ +ಮುಳುಗಿದವ್+ಆಲಿ +ಕಾಣವು +ಪಿತೃ+ಕಳೇವರವ
ನೋಡಲ್+ಎಳಸದ +ಮುನ್ನ +ಕಿಡಿಗಳ
ಝಾಡಿಯನು +ಕಣ್ಣುಗುಳಿದವು +ಮಿಗೆ
ನೋಡಿದ್+ಅಶ್ವತ್ಥಾಮ +ಕಾಣನು +ಮುಂದೆ +ಪರಬಲವ

ಅಚ್ಚರಿ:
(೧) ದೇಹವೆಂದು ಹೇಳಲು – ಗೂಡು ಪದದ ಬಳಕೆ
(೨) ತಂದೆ, ಪಿತೃ – ಸಮಾನಾರ್ಥಕ ಪದ

ಪದ್ಯ ೧೨: ಬೆಳಗಿನ ಜಾವ ಹೇಗೆ ಕಂಡಿತು?

ಎಲೆ ಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆ ಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರುದುವು ಹಿಮರುಚಿಯ ರಶ್ಮಿಗಳು (ದ್ರೋಣ ಪರ್ವ, ೧೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರ್ಧಯಾಮದ ಕಾಲ, ಎರಡೂ ಪಡೆಗಳು ಗೊಂಬೆಗಳಂತೆ ನಿದ್ದೆಯಲ್ಲಿ ಮುಳುಗಿದ್ದವು. ತಾನಾರೆಂಬ ಅಜ್ಞಾನದ ಪಾಳೆಯಕ್ಕೆ ಗುರೂಪದೇಶದ ದಾಳಿ ಕವಿಯುವಂತೆ ಬೆಳದಿಂಗಳು ಮೈದೋರಿತು.

ಅರ್ಥ:
ಲೆಪ್ಪ: ಬಳಿಯುವ ವಸ್ತು, ಲೇಪನ, ಎರಕ; ಬಲ: ಬಿಗಿ, ಗಟ್ಟಿ; ನಿದ್ರೆ: ಶಯನ; ಸಮುದ್ರ: ಸಾಗರ; ಮುಳುಗು: ಮಿಂದು; ಝೊಮ್ಮು:ಪುಳುಕ; ಝಾಡಿ: ಕಾಂತಿ; ಝೊಂಪಿಸು: ನಿದ್ರಿಸು; ಜಾವ: ಗಳಿಗೆ, ಸಮಯ; ತಳಿತ: ಚಿಗುರಿದ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಪಾಳೆಯ: ಬೀಡು, ಶಿಬಿರ; ಕಗ್ಗೊಲೆ: ಹತ್ಯೆ; ಕವಿ: ಆವರಿಸು; ಗುರು: ಆಚಾರ್ಯ; ಉಪದೇಶ: ಬೋಧಿಸುವುದು; ಆವಳಿ: ಸಾಲು; ಮೈದೋರು: ಕಾಣಿಸು; ಹಿಮ: ಮಂಜಿನ ಹನಿ; ರಶ್ಮಿ: ಕಿರಣ;

ಪದವಿಂಗಡಣೆ:
ಎಲೆ +ಮಿಡುಕದ್+ಎರಡ್+ಒಡ್ಡು +ಲೆಪ್ಪದ
ಬಲದವೊಲು +ನಿದ್ರಾ+ಸಮುದ್ರವ
ಮುಳುಗಿ +ಝೊಮ್ಮಿನ +ಝಾಡಿಯಲಿ +ಝೊಂಪಿಸಿದುದರೆ+ ಜಾವ
ತಳಿತ +ಮರವೆಯ +ಪಾಳೆಯದ +ಕ
ಗ್ಗೊಲೆಗೆ +ಕವಿವ +ಗುರು+ಉಪದೇಶ
ಆವಳಿಯವೊಲು +ಮೈದೋರುದುವು +ಹಿಮರುಚಿಯ +ರಶ್ಮಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಲೆ ಮಿಡುಕದೆರಡೊಡ್ಡು ಲೆಪ್ಪದ ಬಲದವೊಲು; ತಳಿತ ಮರವೆಯ ಪಾಳೆಯದ ಕಗ್ಗೊಲೆಗೆ ಕವಿವ ಗುರೂಪದೇಶಾವಳಿಯವೊಲು

ಪದ್ಯ ೫೧: ಕರ್ಣನು ಯಾವ ಬಾಣವನ್ನು ಹೊರತೆಗೆದನು?

ತಳಿತ ಕಿಡಿಗಳ ಕೈದುವಿನ ಮೈ
ಝಳದ ಝಾಡಿಯೊಳುಭಯ ಬಲದ
ಗ್ಗಳದ ಹರುಷ ವಿಷಾದ ವಾರಿಧಿ ಕಾಲುಹೊಳೆಯಾಯ್ತು
ಬಿಳಿಯ ಚೌರಿಗಳೆಸೆಯೆ ಘಂಟಾ
ವಳಿಗಳಣಸಿನ ಹೊಗರನುಗುಳುವ
ಹೊಳೆವ ಧಾರೆಯ ಭಾರಿಶಕ್ತಿಯ ತೂಗಿದನು ಕರ್ಣ (ದ್ರೋಣ ಪರ್ವ, ೧೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಇಂದ್ರನು ಕೊಟ್ಟ ಶಕ್ತಿಯಿಂದುದುರುವ ಕಿಡಿಗಳಿಗೆ ಹೊಮ್ಮುವ ಉರಿಗೆ ಎರಡು ಬಲಗಳೂ ಹರ್ಷ ವಿಷಾದಗಳಿಗೊಳಗಾದವು. ಪಾಂಡವರು ವಿಷಾದಿಸಿದರೆ, ಕೌರವರು ಹರ್ಷಿಸಿದರು. ಆ ಶಕ್ತಿಗೆ ಬಿಳೀಯ ಚೌರಿಗಳನ್ನು ಕಟ್ಟಿತ್ತು. ಅಣಸುಗಳಿಗೆ ಗಂಟೆಗಳನ್ನು ಕಟ್ಟಿತ್ತು. ಅದರ ಅಲಗು ಥಳಥೈಸುತ್ತಿತ್ತು. ಕರ್ಣನು ಮಹಾಶಕ್ತಿಯನ್ನು ಕೈಯಲ್ಲಿ ಹಿಡಿದು ತೂಗಿದನು.

ಅರ್ಥ:
ತಳಿತ: ಚಿಗುರಿದ; ಕಿಡಿ: ಬೆಂಕಿ; ಕೈದು: ಆಯುಧ; ಮೈ: ತನು; ಝಳ: ಪ್ರಕಾಶ, ಕಾಂತಿ; ಝಾಡಿ: ಕಾಂತಿ; ಉಭಯ: ಎರಡು; ಬಲ: ಸೈನ್ಯ; ಅಗ್ಗಳ: ಶ್ರೇಷ್ಠ; ಹರುಷ: ಸಂತೋಷ; ವಿಷಾದ: ನಿರುತ್ಸಾಹ, ದುಃಖ; ವಾರಿಧಿ: ಸಾಗರ; ಕಾಲುಹೊಳೆ: ಕಾಲುನಡಿಗೆ, ದಾಟಬಹುದಾದ ಹೊಳೆ; ಬಿಳಿ: ಶ್ವೇತ; ಚೌರಿ: ಚೌರಿಯ ಕೂದಲು; ಎಸೆ: ತೋರು; ಆವಳಿ: ಗುಂಪು; ಅಣಸು: ಆಕ್ರಮಿಸು; ಹೊಗರು: ಪ್ರಕಾಶ; ಉಗುಳು: ಹೊರತರು; ಹೊಳೆ: ಪ್ರಕಾಶ; ಧಾರೆ: ಮಳೆ, ವರ್ಷ; ಭಾರಿ: ದೊಡ್ಡ; ಶಕ್ತಿ: ಬಲ; ತೂಗು: ಅಲ್ಲಾಡು;

ಪದವಿಂಗಡಣೆ:
ತಳಿತ +ಕಿಡಿಗಳ+ ಕೈದುವಿನ +ಮೈ
ಝಳದ +ಝಾಡಿಯೊಳ್+ಉಭಯ +ಬಲಗ್
ಅಗ್ಗಳದ +ಹರುಷ +ವಿಷಾದ +ವಾರಿಧಿ +ಕಾಲು+ಹೊಳೆಯಾಯ್ತು
ಬಿಳಿಯ +ಚೌರಿಗಳ್+ಎಸೆಯೆ +ಘಂಟಾ
ವಳಿಗಳ್+ಅಣಸಿನ +ಹೊಗರನ್+ಉಗುಳುವ
ಹೊಳೆವ +ಧಾರೆಯ +ಭಾರಿಶಕ್ತಿಯ +ತೂಗಿದನು +ಕರ್ಣ

ಅಚ್ಚರಿ:
(೧) ವಿರುದ್ಧ ಪದ – ಹರುಷ, ವಿಷಾದ
(೨) ಹೊಗರು, ಝಳ, ಝಾಡಿ, ಹೊಳೆ – ಸಾಮ್ಯಾರ್ಥ ಪದಗಳು

ಪದ್ಯ ೧೩: ಬಿಲ್ಲುಗಾರರು ಹೇಗೆ ಸಿದ್ಧರಾದರು?

ಬೊಬ್ಬಿರಿದು ಮೊಳಕಾಲನೂರಿದ
ರುಬ್ಬಟೆಯಲಿದಿರಾಂತು ಕಾಲನ
ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲೊದರಿ
ಹಬ್ಬುಗೆಯ ಜೇವೊಡೆಯ ಝಾಡಿಯ
ತೆಬ್ಬುಗಳ ತೆಗೆವೆರಳುಗೋಲಿನ
ಕೊಬ್ಬಿ ನಾಳೆಚ್ಚಾಡಿತಿಕ್ಕಿದ ಮಂಡಿ ಚಂಡಿಸದೆ (ಭೀಷ್ಮ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮೊಣಕಾಲನ್ನೂರಿ ಯುದ್ಧಕ್ಕೆ ಸಿದ್ಧರಾಗಿ, ಯಮನ ಹುಲುಸಾದ ಕೊಯ್ಲು ಸಿದ್ಧವಾಗಿದೆ, ಶತ್ರುವನ್ನು ಬರಹೇಳು, ಎಂಬಂತೆ ಒದರಿ ಬಿಲ್ಲನ್ನು ದನಿಮಾಡಿ, ಬಲಿಷ್ಠರಾದ ಬಿಲ್ಲುಗಾರರು ಬಾಣಗಳಿಂದ ಶತ್ರುಗಳನ್ನು ಹೊಡೆದರು, ತಾವು ಊರಿದ ಮಂಡಿಯನ್ನು ಕದಲಿಸಲಿಲ್ಲ.

ಅರ್ಥ:
ಬೊಬ್ಬಿರಿ: ಜೋರಾಗಿ ಅರಚು; ಮೊಳಕಾಲು: ಜಾನು, ಕಾಲು ಮತ್ತು ತೊಡೆ ಸೇರುವ ಭಾಗ; ಊರು: ತೊಡೆ, ನೆಲಸು; ಉಬ್ಬಟೆ: ಅತಿಶಯ; ಇದಿರು: ಎದುರು; ಕಾಲ: ಯಮ; ಹೆಬ್ಬೆಳಸು: ಸಮೃದ್ಧ ಫಸಲು; ಹುಲುಸು: ಹೆಚ್ಚಳ; ಬರಹೇಳು: ಕರೆ; ಒದರು: ಕೂಗು; ಹಬ್ಬುಗೆ: ಹರವು, ವಿಸ್ತಾರ; ಜೇವೊಡೆ: ಧನುಷ್ಟಾಂಕಾರ ಮಾಡು; ಝಾಡಿಸು: ಅಲುಗಾಡಿಸು; ತೆಬ್ಬು: ಬಿಲ್ಲಿನ ತಿರುವು; ತೆಗೆ: ಹೊರಹಾಕು; ವೆರಳು: ಬೆರಳು, ಅಂಗುಲಿ; ಕೋಲು: ಬಾನ; ಕೊಬ್ಬು: ಅಹಂಕಾರ; ಎಚ್ಚಾಡು: ಬಾಣಬಿಡು; ತಿಕ್ಕು: ಉಜ್ಜು, ಒರಸು; ಮಂಡಿ: ಮೊಳಕಾಲು, ಜಾನು; ಚಂಡಿ: ತೀಕ್ಷ್ಣವಾದುದು, ಛಲ;

ಪದವಿಂಗಡಣೆ:
ಬೊಬ್ಬಿರಿದು +ಮೊಳಕಾಲನ್+ಊರಿದರ್
ಉಬ್ಬಟೆಯಲ್+ಇದಿರಾಂತು+ ಕಾಲನ
ಹೆಬ್ಬೆಳಸು+ ಹುಲಿಸಾಯ್ತು+ ಬರಹೇಳ್+ಎಂಬವೋಲ್+ಒದರಿ
ಹಬ್ಬುಗೆಯ+ ಜೇವೊಡೆಯ +ಝಾಡಿಯ
ತೆಬ್ಬುಗಳ +ತೆಗೆ+ಬೆರಳು+ಕೋಲಿನ
ಕೊಬ್ಬಿನಾಳ್+ಎಚ್ಚಾಡಿ+ತಿಕ್ಕಿದ +ಮಂಡಿ +ಚಂಡಿಸದೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲನ ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲ್

ಪದ್ಯ ೩೨: ಭೀಮನು ಜಯದ್ರಥನನ್ನು ಹೇಗೆ ಬಂಧಿಸಿದನು?

ಅಂಜದಿರು ಕಮಲಾಕ್ಷಿ ಧೌಮ್ಯನಿ
ರಂಜನನ ಸುತಿವಾಕ್ಯವೇ ಪವಿ
ಪಂಜರವಲೇಯೆನುತ ಹಾಯ್ದನು ಪವನಸುತ ರಥಕೆ
ಕುಂಜರವು ಕೈಯಿಕ್ಕೆ ನಿಲುಕದೆ
ಕಂಜವನವನಿಲಜನ ಝಾಡಿಯ
ಜಂಜಡಕೆ ದಿಟ್ಟನೆ ಜಯದ್ರಥನರಸ ಕೇಳೆಂದ (ಅರಣ್ಯ ಪರ್ವ, ೨೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಭೀಮನು ದ್ರೌಪದಿಗೆ ಅಭಯವನ್ನು ಹೇಳುತ್ತಾ, ಪರಮಾತ್ಮ ಸ್ವರೂಪರಾದ ಧೌಮ್ಯ ಮಹರ್ಷಿಗಳ ಮಂತ್ರಗಳು ನಿನ್ನನ್ನು ವಜ್ರಪಂಜರದಂತೆ ಸಲಹುತ್ತಿವೆ. ನಂತರ ಭೀಮನು ಜಯದ್ರಥನ ರಥಕ್ಕೆ ಹಾರಿ ಅವನ ಮೇಲೆ ಆಕ್ರಮಣ ಮಾಡಿದನು. ಕಮಲವನವು ಆನೆಯ ಧಾಳಿಗೆ ಸಿಕ್ಕಂತೆ ಭೀಮನ ಧಾಳಿಗೆ ಸೈಂದವನು ಸಿಕ್ಕನು.

ಅರ್ಥ:
ಅಂಜು: ಹೆದರು; ಕಮಲಾಕ್ಷಿ: ಕಮಲದಂತ ಕಣ್ಣುಳ್ಳವಳು; ನಿರಂಜನ: ದೋಷರಹಿತವಾದ; ಸುತಿ:ಸ್ತೋತ್ರ, ಸ್ತುತಿಪದ್ಯ; ಪವಿ: ವಜ್ರ; ವಜ್ರಾಯುಧ; ಪಂಜರ: ಗೂಡು; ಹಾಯ್ದು: ಹೊಡೆ; ಪವನಸುತ: ವಾಯು ಪುತ್ರ (ಭೀಮ); ರಥ: ಬಂಡಿ; ಕುಂಜರ: ಆನೆ, ಗಜ; ಕೈ: ಹಸ್ತ; ನಿಲುಕು: ನೀಡುವಿಕೆ; ಕಂಜ: ಕಮಲ; ವನ: ಕಾಡು; ಅನಿಲಜ: ವಾಯುಪುತ್ರ (ಭೀಮ); ಝಾಡಿ: ಕಾಂತಿ; ಜಂಜಡ: ನೋವು, ತೊಂದರೆ; ದಿಟ್ಟ: ಧೈರ್ಯಶಾಲಿ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅಂಜದಿರು +ಕಮಲಾಕ್ಷಿ +ಧೌಮ್ಯ+ನಿ
ರಂಜನನ +ಸುತಿವಾಕ್ಯವೇ +ಪವಿ
ಪಂಜರವಲೇ+ಎನುತ +ಹಾಯ್ದನು +ಪವನಸುತ +ರಥಕೆ
ಕುಂಜರವು+ ಕೈಯಿಕ್ಕೆ +ನಿಲುಕದೆ
ಕಂಜವನವ್+ಅನಿಲಜನ +ಝಾಡಿಯ
ಜಂಜಡಕೆ +ದಿಟ್ಟನೆ +ಜಯದ್ರಥನ್+ಅರಸ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುಂಜರವು ಕೈಯಿಕ್ಕೆ ನಿಲುಕದೆ ಕಂಜವನವ
(೨) ಅಭಯವನ್ನು ನೀಡುವ ಪರಿ – ಧೌಮ್ಯ ನಿರಂಜನನ ಸುತಿವಾಕ್ಯವೇ ಪವಿಪಂಜರವಲೇ
(೩) ಭೀಮನನ್ನು ಕರೆದ ಪರಿ – ಪವನಸುತ, ಅನಿಲಜ

ಪದ್ಯ ೭: ಅರ್ಜುನನು ಹೇಗೆ ಕೋಪಗೊಂಡನು?

ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
ಉಸುರುಗಳ ಕರ್ಬೊಗೆಗಳಾಲಿಯ
ಬಿಸುಗುದಿಯ ಬಲುಕೆಂಡವಂಬಿನ
ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ ಖತಿಗೊಂಡ (ಅರಣ್ಯ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ನಿಮ್ಮವನಾದ ಅರ್ಜುನನು ಆಗ ತಿವಿದೆಬ್ಬಿಸಿದ ಹುಲಿಯೋ, ಗಾಯಗೊಂಡ ಹಂದಿಯೋ, ಹಸಿದ ನಾಗರಹಾವೋ, ಕಾಯಿಸಿದ ಉಕ್ಕಿನ ಕೂರ್ಪೋ ಎಂಬಂತೆ ರೋಷಗೊಂಡನು. ಅವನ ಉಸಿರು ಕರಿಹೊಗೆಯಂತಿತ್ತು. ಕಣ್ಣಿನ ಕೆಂಪು ಕೆಂಡದಂತಿತ್ತು. ಅವನು ತೆಗೆದ ಬಾಣವು ಉರಿಯಂತಿತ್ತು.

ಅರ್ಥ:
ಮಸಗು: ಹರಡು; ಕೆರಳು; ಎಬ್ಬಿಸು: ಎಚ್ಚರಗೊಳಿಸು; ಹುಲಿ: ವ್ಯಾಘ್ರ; ನೊಂದ: ಪೆಟ್ಟಾದ; ಹಂದಿ: ಸೂಕರ; ಹಸಿ: ಆಹಾರವನ್ನು ಬಯಸು, ಹಸಿವಾಗು; ಭುಜಗ: ಹಾವು; ಕಾದ: ಬಿಸಿಯಾದ; ಉಕ್ಕು: ಹದಮಾಡಿದ ಕಬ್ಬಿಣ, ಆಯುಧ; ಛಡಾಳ: ಹೆಚ್ಚಳ, ಆಧಿಕ್ಯ; ಉಸುರು: ಪ್ರಾಣ, ಗಾಳಿ; ಕರ್ಬೊಗೆ: ಕರಿಹೊಗೆ; ಆಲಿ: ಕಣ್ಣು; ಬಿಸು: ಸೇರಿಸು; ಕುದಿ: ಶಾಖದಿಂದ ಉಕ್ಕು, ಕೋಪಗೊಳ್ಳು; ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಅಂಬು: ಬಾಣ; ಹೊಸ: ನವೀನ; ಮಸೆ: ಹರಿತವಾದುದು, ಚೂಪಾದುದು; ಉರಿ: ಜ್ವಾಲೆ; ಝಾಡಿ: ಕಾಂತಿ; ಝಳ: ತಾಪ; ಖತಿ: ಕೋಪ;

ಪದವಿಂಗಡಣೆ:
ಮಸಗಿದನು +ನಿಮ್ಮಾತನ್+ಉಗಿದ್
ಎಬ್ಬಿಸಿದ +ಹುಲಿಯೋ +ನೊಂದ +ಹಂದಿಯೊ
ಹಸಿದ +ಭುಜಗನೊ+ ಕಾದಕಟ್+ಉಕ್ಕಿನ +ಛಡಾಳಿಕೆಯೊ
ಉಸುರುಗಳ+ ಕರ್ಬೊಗೆಗಳ್+ಆಲಿಯ
ಬಿಸು+ಕುದಿಯ +ಬಲು+ಕೆಂಡವ್+ಅಂಬಿನ
ಹೊಸಮಸೆಗಳ್+ಉರಿ +ಝಾಡಿ +ಝಳುಪಿಸೆ+ ಪಾರ್ಥ +ಖತಿಗೊಂಡ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಎಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
(೨) ಕೋಪವನ್ನು ವಿವರಿಸುವ ಪರಿ – ಉಸುರುಗಳ ಕರ್ಬೊಗೆಗಳಾಲಿಯ ಬಿಸುಗುದಿಯ ಬಲುಕೆಂಡವಂಬಿನ ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ

ಪದ್ಯ ೧೫: ಭೀಮನ ಕೋಪವು ಹೇಗೆ ಉಕ್ಕಿತು?

ನೋಡಿದನು ಪರಿಘವನು ಕಡೆಗ
ಣ್ಣಾಡಿತಿವದಿರ ಮೇಲೆ ಮೈಯಲಿ
ಝಾಡಿಗೆದರಿತು ರೋಮ ಝಳುಪಿಸಿತರುಣಮಯ ನಯನ
ಮೂಡಿತುರಿ ಸುಯ್ಲಿನಲಿ ರೋಷದ
ಬೀಡು ಭೀಮನ ಕಂಡು ಧರ್ಮಜ
ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ (ಸಭಾ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತೊಡೆಯನ್ನು ತೋರಿ ಭೀಮನನ್ನು ಕೆರಳಿಸಲು, ಭೀಮನು ಒಂದೆಡೆ ಗದೆಯನ್ನು ನೋಡಿದನು, ಓರೆಕಣ್ಣಿನಿಂದ ಕೌರವನನ್ನು ನೋಡಿದನು, ತನ್ನ ಮೈಯಲ್ಲಿದ್ದ ಕೂದಲುಗಳು ನೆಟ್ಟಗಾದವು, ಕಣ್ಣು ಕೆಂಪಾಗಿ ಕೋಪವನ್ನುಗುಳುತ್ತಿತ್ತು, ಉಸಿರಿನಲ್ಲಿ ಉರಿ ಹೊರಚೆಲ್ಲುತ್ತಿತ್ತು. ರೋಷದ ನೆಲೆ ಎನ್ನುವಂತಿದ್ದ ಭೀಮನನ್ನು ನೋಡಿ ಧರ್ಮರಾಯನು ತನ್ನ ಕೊರಳಿಗೆ ಬೆರಳಿಟ್ಟು ಭೀಮನನ್ನು ಬೇಡಿಕೊಂಡನು.

ಅರ್ಥ:
ನೋಡು: ವೀಕ್ಷಿಸು; ಪರಿಘ:ಗದೆ; ಕಡೆಗಣ್ಣು: ಓರೆ ಕಣ್ಣು, ಕಣ್ಣಂಚು; ಇವದಿರು: ಇವರೆಲ್ಲರು; ಮೈ: ತನು; ಝಾಡಿ: ಕಾಂತಿ; ಕೆದರು: ಹರಡು; ರೋಮ: ಕೂದಲು; ಝುಳಪ: ಹೊಳಪು, ಕಾಂತಿ; ಅರುಣ: ಕೆಂಪು; ನಯನ: ಕಣ್ಣು; ಮೂಡು: ತೋರು; ಉರಿ: ಬಿಸಿ; ಸುಯ್ಲು: ಉಸಿರು; ರೋಷ: ಕೋಪ; ಬೀಡು: ನೆಲೆ; ಕಂಡು: ನೋಡಿ; ಬೇಡು: ಕೋರು; ಕೊರಳು: ಕಂಠ; ಬೆರಳು: ಅಂಗುಲಿ; ಸನ್ನೆ; ಗುರುತು;

ಪದವಿಂಗಡಣೆ:
ನೋಡಿದನು +ಪರಿಘವನು+ ಕಡೆಗಣ್
ಆಡಿತ್+ಇವದಿರ+ ಮೇಲೆ +ಮೈಯಲಿ
ಝಾಡಿ+ಕೆದರಿತು +ರೋಮ +ಝಳುಪಿಸಿತ್+ಅರುಣಮಯ +ನಯನ
ಮೂಡಿತ್+ಉರಿ +ಸುಯ್ಲಿನಲಿ +ರೋಷದ
ಬೀಡು +ಭೀಮನ +ಕಂಡು +ಧರ್ಮಜ
ಬೇಡಿಕೊಂಡನು +ತನ್ನ +ಕೊರಳಿನ+ ಬೆರಳ+ ಸನ್ನೆಯಲಿ

ಅಚ್ಚರಿ:
(೧) ಭೀಮನಿಗಾದ ಕೋಪದ ಚಿತ್ರಣ – ಮೈಯಲಿ ಝಾಡಿಗೆದರಿತು ರೋಮ ಝಳುಪಿಸಿತರುಣಮಯ ನಯನ ಮೂಡಿತುರಿ ಸುಯ್ಲಿನಲಿ ರೋಷದ ಬೀಡು ಭೀಮನ
(೨) ಧರ್ಮರಾಯನ ಸನ್ನೆಯ ಅರ್ಥ – ಧರ್ಮಜ ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ – ನೀನು ಮುಂದಾದರೆ ನನ್ನನ್ನು ಕೊಂದಂತೆ ಎಂದು ಸೂಚಿಸುವ ಸನ್ನೆ

ಪದ್ಯ ೧: ದೈವದ ಲೀಲೆ ಹೇಗಿರುತ್ತದೆ?

ನಿಯತ ಮತಿ ಚಿತ್ತವಿಸು ಜನಮೇ
ಜಯ ಮಹೀಪತಿ ದೇವತಾ ಭ
ಕ್ತಿಯಲದೇನಾಶ್ಚರ್ಯವೋ ಶಿವ ಶಿವ ಮಹಾದೇವ
ಜಯ ಜಯೆಂದುದು ನಿಖಿಳಜನಝಾ
ಡಿಯಲಿ ಝೋಂಪಿಸಿ ಸೆಳ್ವ ಸೀರೆಗೆ
ಲಯವ ಕಾಣೆನು ಕರುಣವೆಂತುಟೊ ದೇವಕೀಸುತನ (ಸಭಾ ಪರ್ವ, ೧೬ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ಗಮನವಿಟ್ಟು ಕೇಳು, ಭಗವಂತನ ಭಕ್ತಿಯಿಂದ ಏನೇನು ಆಶ್ಚರ್ಯಗಳಾಗುವವೋ ಶಿವ ಶಿವಾ ಮಹಾದೇವ ಯಾರು ಬಲ್ಲರು? ದುಶ್ಯಾಸನನು ಸೀರೆಯನ್ನು ಸೆಳೆದರೆ ಅದು ಮುಗಿಯದೆ ಮತ್ತೊಂದು ಸೀರೆ ಅದರಿಂದ ಬರುತ್ತಿತ್ತು, ಅದು ಮುಗಿದರೆ ಮತ್ತೊಂದು ಹೀಗಾಗುವುದು ನಿಲ್ಲಲೇ ಇಲ್ಲ, ಇದನ್ನು ನೋಡಿದ ಎಲ್ಲಾ ಸಭಿಕರು ಜಯ ಜಯ ಎಂದು ಘೋಷಿಸಿದರು.

ಅರ್ಥ:
ನಿಯತ: ನಿಶ್ಚಿತವಾದುದು; ಮತಿ: ಬುದ್ಧಿ; ಚಿತ್ತವಿಸು: ಗಮನವಿಟ್ಟು ಕೇಳು; ಮಹೀಪತಿ: ರಾಜ; ದೇವ: ಭಗವಂತ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಆಶ್ಚರ್ಯ: ಅದ್ಭುತ, ವಿಸ್ಮಯ; ಜಯ: ಉಘೇ; ನಿಖಿಳ: ಎಲ್ಲಾ; ಜನ: ನರರು, ಸಮೂಹ; ಝಾಡಿ: ಕಾಂತಿ; ಝೋಂಪಿಸು: ಬೆಚ್ಚಿಬೀಳು; ಸೆಳೆ: ಎಳೆತ; ಸೀರೆ: ಬಟ್ಟೆ, ವಸ್ತ್ರ; ಲಯ: ಅಂತ್ಯ; ಕಾಣು: ತೋರು; ಕರುಣ: ದಯೆ; ಸುತ: ಪುತ್ರ;

ಪದವಿಂಗಡಣೆ:
ನಿಯತ +ಮತಿ +ಚಿತ್ತವಿಸು +ಜನಮೇ
ಜಯ +ಮಹೀಪತಿ+ ದೇವತಾ +ಭ
ಕ್ತಿಯಲ್+ಅದೇನ್+ಆಶ್ಚರ್ಯವೋ+ ಶಿವ+ ಶಿವ+ ಮಹಾದೇವ
ಜಯ +ಜಯೆಂದುದು +ನಿಖಿಳ+ಜನ+ಝಾ
ಡಿಯಲಿ +ಝೋಂಪಿಸಿ +ಸೆಳೆವ+ ಸೀರೆಗೆ
ಲಯವ +ಕಾಣೆನು +ಕರುಣವ್+ಎಂತುಟೊ+ ದೇವಕೀಸುತನ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಬಗೆ – ಶಿವ ಶಿವ ಮಹಾದೇವ
(೨) ಝಾಡಿ, ಝೋಂಪಿಸು – ಪದಗಳ ಬಳಕೆ