ಪದ್ಯ ೪೮: ವ್ಯಾಸರು ಗಾಂಧಾರಿಯನ್ನು ಹೇಗೆ ಸಮಾಧಾನ ಪಡಿಸಿದರು?

ಮುನಿಯದಿರು ಗಾಂಧಾರಿ ದಿಟ ನಿ
ನ್ನನುಜನಿಕ್ಕಿದ ಸಾರಿ ನಿನ್ನಯ
ತನುಜರನು ನಿನ್ನಖಿಳಮಿತ್ರಜ್ಞಾತಿ ಬಾಂಧವರ
ಮನುಜಪತಿಗಳನಂತವನು ರಿಪು
ಜನಪ ಶರವಹ್ನಿಯಲಿ ಬೇಳಿದು
ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ವೇದವ್ಯಾಸರು ಗಾಂಧಾರಿಯನ್ನು ಸಮಾಧಾನ ಪಡಿಸುತ್ತಾ, ನನ್ನ ಮಾತುಗಳನ್ನು ಕೇಳಿ ಕೋಪಗೊಳ್ಳಬೇಡ. ನಿನ್ನ ತಮ್ಮನು ಹಾಕಿದ ದಾಳವು ನಿನ್ನ ಮಕ್ಕಳು, ಮಿತ್ರರು, ಜ್ಞಾತಿಗಳು ಬಾಂಧವರು ಲೋಕದ ಸಮಸ್ತ ರಾಜರು ಎಲ್ಲರನ್ನೂ ಶತ್ರುಗಳ ಬಾಣಾಗ್ನಿಗೆ ಬಲಿಕೊಟ್ಟಿತು. ಇಷ್ಟೊಂದು ಶೋಕ ಉದ್ರೇಕಗಳು ನಿನಗೇಕೆ ಎಂದು ಸಂತೈಸಿದರು.

ಅರ್ಥ:
ಮುನಿ: ಕೋಪ; ದಿಟ: ನಿಜ; ಅನುಜ: ತಮ್ಮ; ಇಕ್ಕು: ಇಡು; ಸಾರಿ: ದಾಳ; ತನುಜ: ಮಕ್ಕಳು; ಅಖಿಳ: ಎಲ್ಲಾ; ಮಿತ್ರ: ಸ್ನೇಹಿತ; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಬಾಂಧವ: ಪರಿವಾರದ ಜನ; ಮನುಜ: ನರ, ಮನುಷ್ಯ; ಮನುಜಪತಿ: ರಾಜ; ರಿಪು: ವೈರಿ; ಜನಪ: ರಾಜ; ಶರ: ಬಾಣ; ವಹ್ನಿ: ಅಗ್ನಿ, ಬಂಕಿ; ಬೇಳುವೆ: ಯಜ್ಞ; ಶೋಕ: ದುಃಖ; ಉದ್ರೇಕ: ಉದ್ವೇಗ, ಆವೇಗ, ತಳಮಳ; ಮುನಿಪ: ಋಷಿ; ಅನಂತ: ಕೊನೆಯಿಲ್ಲದ;

ಪದವಿಂಗಡಣೆ:
ಮುನಿಯದಿರು +ಗಾಂಧಾರಿ +ದಿಟ +ನಿನ್ನ್
ಅನುಜನ್+ಇಕ್ಕಿದ +ಸಾರಿ +ನಿನ್ನಯ
ತನುಜರನು +ನಿನ್ನ್+ಅಖಿಳ+ಮಿತ್ರ+ಜ್ಞಾತಿ +ಬಾಂಧವರ
ಮನುಜಪತಿಗಳ್+ಅನಂತವನು +ರಿಪು
ಜನಪ +ಶರವಹ್ನಿಯಲಿ +ಬೇಳಿದುದ್
ಇನಿತು +ಶೋಕ+ಉದ್ರೇಕ +ನಿನಗೇಕ್+ಎಂದನಾ +ಮುನಿಪ

ಅಚ್ಚರಿ:
(೧) ಮುನಿ, ಮುನಿಪ – ಪದ್ಯದ ಮೊದಲ ಹಾಗು ಕೊನೆಯ ಪದ
(೨) ಅನುಜ, ತನುಜ, ಮನುಜ, ಪ್ರಾಸ ಪದ
(೩) ಮನುಜಪತಿ, ಜನಪ – ಸಮಾನಾರ್ಥಕ ಪದ

ಪದ್ಯ ೧೮: ಸುರ್ಯೋಧನನು ಯಾರನ್ನು ಯುದ್ಧದಲ್ಲಿ ಕಳೆದುಕೊಂಡನು?

ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ (ಗದಾ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಎಲೈ ಭೀಮ, ದುರ್ಯೊಧನನ ನೂರು ತಮ್ಮಂದಿರು, ಮಕ್ಕಳು, ಮಾವ, ಗ್ರು, ಮೈದುನ, ತಾತ, ಮಿತ್ರರು, ದಾಯಾದಿಗಳು, ಬಾಂಧವರು, ಮಿತ್ರರಾಜರು ಈ ರಣರಂಗದಲ್ಲಿ ಮಡಿದು ಹೋಗಿದ್ದಾರೆ. ಏಕಾಂಗಿಯಾಗಿದ್ದ ಅವನನ್ನು ಮುರಿದುದೇ ಸಾಲದೆ? ಅದರ ಮೇಲೆ ಅವನಿಗೆ ಈ ರೀತಿ ಹಿಂಸೆ ಕೊಡುವುದು ಸರಿಯೇ? ಎಂದು ಪ್ರಶ್ನಿಸಿದನು.

ಅರ್ಥ:
ಅನುಜ: ತಮ್ಮ; ರಣ: ಯುದ್ಧ; ತನುಜ: ಮಕ್ಕಳು; ಮಾವ: ಅಮ್ಮನ ಅಣ್ಣ/ತಮ್ಮ; ಗುರು: ಆಚಾರ್ಯ; ಮೈದುನ: ತಂಗಿಯ ಗಂಡ; ಪಿತಾಮಹ: ತಾತ; ಪುತ್ರ: ಮಗ; ಮಿತ್ರ: ಸ್ನೇಹಿತ; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಬಾಂಧವ: ಬಂಧು ಬಳಗ; ಅನಿಬರು: ಅಷ್ಟು ಜನ; ಅವನೀಶ್ವರ: ರಾಜ; ಸಮರ: ಯುದ್ಧ; ಅವನಿ: ಭೂಮಿ; ಅಡಗು: ಬಚ್ಚಿಡು, ಕಾಣದಂತಾಗು; ಜನಪತಿ: ರಾಜ; ಮುರಿ: ಸೀಳು; ಸಾಲದೆ: ಸಾಕಾಗು;

ಪದವಿಂಗಡಣೆ:
ಅನುಜರ್+ಅಳಿದುದು +ನೂರು +ರಣದಲಿ
ತನುಜರ್+ಅಳಿದುದು +ಮಾವ +ಗುರು +ಮೈ
ದುನ +ಪಿತಾಮಹ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರು
ಅನಿಬರ್+ಅವನೀಶ್ವರರು +ಸಮರ
ಅವನಿಯೊಳ್+ಅಡಗಿದುದ್+ಏಕ+ದೇಶದ
ಜನಪತಿಯ +ಮುರಿದ್+ಅದುವೆ +ಸಾಲದೆ +ಭೀಮ +ನಮಗೆಂದ

ಅಚ್ಚರಿ:
(೧) ಏಕ ಚಕ್ರಾಧಿಪತಿ ಎಂದು ಹೇಳುವ ಪರಿ – ಏಕದೇಶದಜನಪತಿ
(೨) ರಣರಂಗ ಎಂದು ಹೇಳುವ ಪರಿ – ಸಮರಾವನಿ
(೩) ಅನುಜ, ತನುಜ – ಪ್ರಾಸ ಪದಗಳು

ಪದ್ಯ ೩: ಬಲರಾಮನೇಕೆ ಕರಗಿದನು?

ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ (ಗದಾ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣ, ಭೀಷ್ಮ, ಶಲ್ಯ, ಕರ್ಣ, ಸೈಂಧವ, ನೂರು ಮಂದಿ ತಮ್ಮಂದಿರು ಮಕ್ಕಳು ಗೆಳೆಯರು, ಜ್ಞಾತಿಗಳು, ಬಾಂಧವರು ಎಲ್ಲರನ್ನೂ ಹರಕೆಯ ಕುರಿಗಳಂತೆ ಬಲಿಕೊಟ್ಟೆ. ಜಯದ ನಿಧಿ ಕಾಣಲಿಲ್ಲವೇ? ಶಿವ ಶಿವಾ ಎಂದು ಬಲರಾಮ ಕರುಣೆಯಿಂದ ಕರಗಿ ಹೋದನು.

ಅರ್ಥ:
ಗುರು: ಆಚಾರ್ಯ; ಸುತ: ಮಗ; ಸೋದರ: ತಮ್ಮ; ಶತ: ನೂರು; ಪುತ್ರ: ಸುತ; ಮಿತ್ರ: ಸ್ನೇಹಿತ; ಜ್ಞಾತಿ: ದಾಯಾದಿ; ಬಾಂಧವ: ಬಂಧುಜನ; ಹರಸುಕುರಿ: ಹರಕೆಯ ಕುರಿ; ಗೋಚರಿಸು: ಗೊತ್ತುಪಡಿಸು; ರಣ: ಯುದ್ಧ; ವಿಜಯ: ಗೆಲುವು; ನಿಧಿ: ಸಿರಿ; ಹರ: ಶಿವ; ಕರಗು: ಕನಿಕರ ಪಡು; ಕರುಣ: ದಯೆ;

ಪದವಿಂಗಡಣೆ:
ಗುರುವೊ +ಗಂಗಾಸುತನೊ +ಮಾದ್ರೇ
ಶ್ವರನೊ +ಕರ್ಣನೊ +ಸೈಂಧವನೊ +ಸೋ
ದರರ +ಶತಕವೊ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರೊ
ಹರಸಿ +ಕುರಿಗಳನ್+ಇಕ್ಕಿದಡೆ+ ಗೋ
ಚರಿಸದೇ +ರಣ+ವಿಜಯನಿಧಿ +ಹರ
ಹರ +ಎನುತ +ಕರಗಿದನು +ಕಡು +ಕರುಣದಲಿ +ಬಲರಾಮ

ಅಚ್ಚರಿ:
(೧) ರೂಪಕದ ಪ್ರಯೋಗ – ಹರಸಿ ಕುರಿಗಳನಿಕ್ಕಿದಡೆ ಗೋಚರಿಸದೇ ರಣವಿಜಯನಿಧಿ

ಪದ್ಯ ೧೪: ಧರ್ಮಜನು ಕೌರವನನ್ನು ಹೇಗೆ ಹಂಗಿಸಿದನು?

ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ (ಗದಾ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಕೌರವ ರಾಜ, ನೀನೇನು ನೀರು ಹಾವೇ? ನೀರಿನಲ್ಲಿ ನೀನು ಹೊಕ್ಕು ಅಲ್ಲಿಯೇ ಇರುವೆನೆಂದರೆ ಅದು ಚಂದ್ರವಂಶದ ಹೆಸರನ್ನು ಕೆಡಿಸಿದಂತಾಗುವುದಿಲ್ಲವೇ? ಸಹೋದರರು, ಮಕ್ಕಳು, ಜ್ಞಾತಿಗಳು, ಬಂಧುಗಳಾದ ರಾಜರು ಇವರನ್ನೆಲ್ಲಾ ಕೊಲ್ಲಿಸಿ ನೀನು ನೀರಲ್ಲಿ ಮುಳುಗಿರುವುದು ನೀಚತನ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ರಾಯ: ರಾಜ; ಸಲಿಲ: ಜಲ; ವ್ಯಾಳ: ಸರ್ಪ; ಅಕಟ: ಅಯ್ಯೋ; ಜಲ: ನೀರು; ಆಳು: ಅಧಿಕಾರ ನಡೆಸು; ಕಾಳು: ಕೀಳಾದುದು; ಗರುವ: ಶ್ರೇಷ್ಠ; ಶಶಿ: ಚಂದ್ರ; ವಂಶ: ಕುಲ; ಕಾಳೆಗ: ಯುದ್ಧ; ಸಹೋದರ: ತಮ್ಮ; ಜಾಲ: ಸಮೂಹ; ಪುತ್ರ: ಸುತ; ಜ್ಞಾತಿ: ದಾಯಾದಿ; ಬಂಧು: ನೆಂಟ, ಸಂಬಂಧಿಕ; ನೃಪಾಲ: ರಾಜ; ನೀರು: ಜಲ; ಅಡಗು: ಮುಚ್ಚಿಟ್ಟುಕೊಳ್ಳು; ಕಷ್ಟ: ಕ್ಲಿಷ್ಟ;

ಪದವಿಂಗಡಣೆ:
ಏಳು +ಕೌರವರಾಯ +ಸಲಿಲ
ವ್ಯಾಳನೇ +ನೀನ್+ಅಕಟ +ಜಲದೊಳಗ್
ಆಳುವರೆ+ ಕಾಳಾಯ್ತು +ನಿನ್ನಲಿ +ಗರುವ +ಶಶಿವಂಶ
ಕಾಳೆಗದೊಳ್+ಅದ್ದಿದೆ +ಸಹೋದರ
ಜಾಲ+ ಪುತ್ರ+ಜ್ಞಾತಿ +ಬಂಧು +ನೃ
ಪಾಲರನು +ನೀ +ನೀರೊಳ್+ಅಡಗಿದೆ+ ಕಷ್ಟವಾಯ್ತೆಂದ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಸಲಿಲವ್ಯಾಳನೇ ನೀನಕಟ ಜಲದೊಳಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ

ಪದ್ಯ ೨೭: ಊರ್ವಶಿಯು ತನ್ನ ಹಿರಿಮೆಯನ್ನು ಹೇಗೆ ಹೇಳಿದಳು?

ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವ ಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ಕೇಳು, ನಿಮ್ಮ ತಂದೆ, ಅವನ ತಂದೆ, ನಿಮ್ಮ ಮುತ್ತಜ್ಜ, ಅವನ ಭಾವಮೈದುನ, ಅವನ ತಂದೆ, ಅಣ್ಣ, ತಮ್ಮ ಎಂಬ ನಿಮ್ಮ ತಂದೆಯ ಕಡೆಯ ಬಾಂಧವರಿಗೆ, ಯುದ್ಧರಂಗದಲ್ಲಿ ಶತ್ರುಗಳ ಜೊತೆಗೆ ಯುದ್ಧ ಮಾಡಿ ತಲೆಗಳನ್ನು ಚೆಂಡಾಡಿದವರಿಗೆ, ಅಷ್ಟೆ ಅಲ್ಲ, ಯಜ್ಞಗಳನ್ನು ಮಾಡಿದ ಸಂಭಾವಿತರಿಗೆ ಇರುವವಳು ನಾನೊಬ್ಬಳೇ, ಎಂದು ಊರ್ವಶಿಯು ನಗುತ ಅರ್ಜುನನಿಗೆ ತನ್ನ ಹಿರಿಮೆಯನ್ನು ಹೇಳಿಕೊಂಡಳು.

ಅರ್ಥ:
ಅಯ್ಯ: ತಂದೆ; ಮುತ್ತಯ್ಯ: ಮುತ್ತಾತ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಅಗ್ರಜ: ಹಿರ; ಅನುಜ: ಸಹೋದರ; ಜ್ಞಾತಿ: ತಂದೆಯ ಕಡೆಯ ಬಂಧು; ಬಾಂಧವ: ಸಂಬಂಧಿಕರು; ಅರಿ: ಶತ್ರು; ಹೊಯ್ದು: ತೊರೆ; ಶಿರ: ತಲೆ; ಅರಿ: ಕತ್ತರಿಸು; ಮೇಣ್: ಮತ್ತು; ಮಖ: ಯಾಗ; ನಗುತ: ಸಂತಸ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಅಯ್ಯನ್+ಅಯ್ಯನು +ನಿಮ್ಮವರ+ ಮು
ತ್ತಯ್ಯನ್+ಆತನ +ಭಾವ ಮೈದುನನ್
ಅಯ್ಯನ್+ಅಗ್ರಜರ್+ಅನುಜರ್+ಎಂಬೀ +ಜ್ಞಾತಿ +ಬಾಂಧವರ
ಕೈಯಲ್+ಅರಿಗಳ+ಹೊಯ್ದು +ಶಿರನ್+ಅರಿ
ದುಯ್ಯಲ್+ಆಡಿದವರ್ಗೆ+ ಮೇಣ್+ ಮಖದ್
ಅಯ್ಯಗಳಿಗ್+ಆನೊಬ್ಬಳ್+ಎಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ಅಯ್ಯ, ಮುತ್ತಯ್ಯ – ಪ್ರಾಸ ಪದಗಳು
(೨) ಅಯ್ಯ, ಮುತ್ತಯ್ಯ, ಭಾವಮೈದುನ, ಅಗ್ರಜ, ಅನುಜ, ಜ್ಞಾತಿ – ಸಂಬಂಧಗಳನ್ನು ವಿವರಿಸುವ ಪದ

ಪದ್ಯ ೧೯: ಹೇಗೆ ಬಾಳಬೇಕೆಂದು ಕೃಷ್ಣನು ಉಪದೇಶಿಸಿದನು?

ಸೋತು ನಡೆವುದು ಹಿರಿಯರಲಿ ಸಂ
ಪ್ರೀತಿಯನು ಸುಜನರಲಿ ನಿರ್ಮಳ
ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ
ಖ್ಯಾತಿಯನು ಧರ್ಮದಲಿ ವೈರಿ
ವ್ರಾತದಲಿ ಪೌರುಷವನಖಿಳ
ಜ್ಞಾತಿಗಳಲೆಚ್ಚರಿಕೆಯೊಳಗಿಹುದೆಂದನಸುರಾರಿ (ಸಭಾ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಹಿರಿಯರಲ್ಲಿ ವಿನಯ, ಸಜ್ಜನರಲ್ಲಿ ಪ್ರೀತಿ, ಪರಿವಾರ, ಊರಿನವರು, ರಾಜ್ಯದ ಎಲ್ಲಾ ಪ್ರದೇಶದವರಲ್ಲೂ ನಿರ್ಮಲವಾದ ನೀತಿಯನ್ನು ಅನುಸರಿಸಬೇಕು. ಧರ್ಮದ ಆಚರಣೆ ಮಾಡುವವನೆಂಬ ಕೀರ್ತಿಯನ್ನು ಪಡೆಯಬೇಕು. ವೈರಿಗಳೊಡನೆ ಪೌರುಷವನ್ನು ತೋರಿಸಬೇಕು. ದಾಯಾದಿಗಳೊಡನೆ ಎಚ್ಚರದಿಂದಿರಬೇಕು ಎಂದು ಶ್ರೀಕೃಷ್ಣನು ಉಪದೇಶಿಸಿದನು.

ಅರ್ಥ:
ಸೋತು: ಪರಾಭವ; ನಡೆ: ಮುಂದೆ ಹೋಗು; ಹಿರಿಯರು: ದೊಡ್ಡವರು; ಸಂಪ್ರೀತಿ: ಒಲವು, ಪ್ರೀತಿ; ಸುಜನ: ಒಳ್ಳೆಯ ಜನ; ನಿರ್ಮಳ: ಶುಭ್ರ, ಸ್ವಚ್ಛತೆ; ನೀತಿ: ಮಾರ್ಗ ದರ್ಶನ, ಮುನ್ನಡೆಸುವಿಕೆ; ಪರಿವಾರ: ಬಂಧುಜನ; ಪುರಜನ: ಊರಿನ ಜನರು; ನಾಡು: ಊರು, ರಾಷ್ಟ್ರ; ಬೀಡು: ಗುಂಪು; ಖ್ಯಾತಿ: ಪ್ರಸಿದ್ಧ; ಧರ್ಮ: ಧಾರಣೆ ಮಾಡಿದುದು, ಆಚಾರ; ವೈರಿ: ಹಗೆ, ಶತ್ರು; ವ್ರಾತ: ಗುಂಪು; ಪೌರುಷ: ಶೌರ್ಯ, ಪರಾಕ್ರಮ; ಅಖಿಳ: ಎಲ್ಲಾ; ಜ್ಞಾತಿ: ದಾಯಾದಿ; ಎಚ್ಚರ: ಜೋಪಾನ, ಹುಷಾರು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಸೋತು +ನಡೆವುದು +ಹಿರಿಯರಲಿ +ಸಂ
ಪ್ರೀತಿಯನು +ಸುಜನರಲಿ +ನಿರ್ಮಳ
ನೀತಿಯನು +ಪರಿವಾರ +ಪುರಜನ+ ನಾಡು +ಬೀಡಿನಲಿ
ಖ್ಯಾತಿಯನು+ ಧರ್ಮದಲಿ +ವೈರಿ
ವ್ರಾತದಲಿ+ ಪೌರುಷವನ್+ಅಖಿಳ
ಜ್ಞಾತಿಗಳಲ್+ಎಚ್ಚರಿಕೆಯೊಳಗ್+ಇಹುದೆಂದನ್+ಅಸುರಾರಿ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಸಂಪ್ರೀತಿಯನು ಸುಜನರಲಿ; ನಿರ್ಮಳ ನೀತಿಯನು; ಪರಿವಾರ ಪುರಜನ
(೨) ಪ್ರೀತಿ, ಜ್ಞಾತಿ, ನೀತಿ, ಖ್ಯಾತಿ – ಪ್ರಾಸ ಪದಗಳು