ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪ್ತೈ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ (ಗದಾ ಪರ್ವ, ೨ ಸಂಧಿ, ೪೧ ಪದ್ಯ)
ತಾತ್ಪರ್ಯ:
ಕುದುರೆಗಳು, ರಾವುತರು, ಆನೆಗಳು, ಜೋದರು, ರಥಗಳು, ಕಾಲಾಳುಗಳು, ಈ ಚತುರಂಗ ಬಲದಲ್ಲಿ ಒಂದೂ ಉಳಿದಿರಲಿಲ್ಲ. ದುರ್ಯೋಧನನು ಕಾಲು ನಡೆಯಿಂದಲೇ ಜಾರಿ ತಪ್ಪಿಸಿಕೊಂಡು ಹೋದನು. ವೀರನಾರಾಯಣನ ಕರುಣೆಯಿಂದ ಪಾಂಡವರ ಅಭ್ಯುದಯ ಅತಿಶಯವಾಗಿ ಶೋಭಿಸಿತು.
ಅರ್ಥ:
ಕುದುರೆ: ಅಶ್ವ; ರಾವ್ತರು: ಕುದುರೆಸವಾರ; ಜೋದ: ಆನೆ ಸವಾರ; ಸಂತತಿ: ವಂಶ; ಮದ: ಅಮಲು, ಮತ್ತು; ಗಜ: ಆನೆ; ವ್ರಜ: ಗುಂಪು; ರಥಾವಳಿ: ರಥಗಳ ಗುಂಪು; ಪದಚರ: ಕಾಲಾಳು; ಚತುರಂಗಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಳಿ: ಮಿಕ್ಕ; ಪದ: ಪಾದ; ನೃಪತಿ: ರಾಜ; ಅಭ್ಯುದಯ: ಏಳಿಗೆ; ಕರುಣ: ದಯೆ;
ಪದವಿಂಗಡಣೆ:
ಕುದುರೆ +ರಾವ್ತರು +ಜೋದ+ಸಂತತಿ
ಮದ+ಗಜವ್ರಜವ್+ಅತಿ+ರಥಾವಳಿ
ಪದಚರರು+ ಚತುರಂಗಬಲವ್+ಒಂದುಳಿಯದ್+ಇದರೊಳಗೆ
ಪದದಲೇ +ಕೌರವ+ನೃಪತಿ+ ಜಾ
ರಿದನು +ಕುಂತೀಸುತರು +ಬಹಳ
ಅಭ್ಯುದಯರಾದರು +ವೀರನಾರಾಯಣನ +ಕರುಣದಲಿ
ಅಚ್ಚರಿ:
(೧) ಯುದ್ಧದಲ್ಲಿ ನಾಶವಾದುದು – ಕುದುರೆ, ರಾವ್ತರು, ಜೋದ, ಮದಗಜವ್ರಜ, ರಥಾವಳಿ, ಪದಚರರು, ಚತುರಂಗಬಲ