ಬಾಲನೆನ್ನದಿರೆನುತ ರಿಪುಭಟ
ಭಾಳಲೋಚನನೆನಿಸುವರ್ಜುನ
ಬಾಳುಗೆನುತುದ್ದಂಡ ಕೋದಂಡವನು ಜೇವೊಡೆಯೆ
ಮೇಲು ಜಗವಲ್ಲಾಡಿದವು ಕೊರ
ಳೋಳಿ ಕೆದರಿತು ಕುಸಿದನಹಿ ಪಾ
ತಾಳ ಗೂಳೆಯ ತೆಗೆಯಲಳ್ಳಿರಿಯಿತ್ತು ಬಿಲು ರಭಸ (ದ್ರೋಣ ಪರ್ವ, ೪ ಸಂಧಿ, ೫೭ ಪದ್ಯ)
ತಾತ್ಪರ್ಯ:
ನನ್ನನ್ನು ಇವನು ಬಾಲಕ ಎಂದು ತಾತ್ಸಾರ ಮಾಡಬೇಡ ಎನ್ನುತ್ತಾ ವೈರಿಗಳಗೆ ಶಿವನರೂಪನಾದ ಅಭಿಮನ್ಯುವು ಅರ್ಜುನಂ ಬಾಳ್ಗೆ ಎನ್ನುತ್ತಾ ಧನುಸ್ಸನ್ನು ಹಿಡಿದು ಧನುಷ್ಟಾಂಕಾರ ಮಾಡಿದನು. ಆ ಸದ್ದಿಗೆ ಊರ್ಧ್ವಲೋಕಗಳು ಅಲ್ಲಾಡಿದವು. ಹೆಡೆಗಳು ಕೆದರಿ ಆದಿಶೇಷನು ಕುಸಿದನು. ಪಾತಾಳದವರು ಅಪಾಯ ಬಂದಿತೆಂದು ಗುಳೆ ಹೊರಟರು.
ಅರ್ಥ:
ಬಾಲ: ಚಿಕ್ಕವ, ಕುಮಾರ; ರಿಪು: ವೈರಿ; ಭಟ: ಸೈನಿಕ; ಭಾಳ: ಹಣೆ; ಲೋಚನ: ಕಣ್ಣು; ಭಾಳಲೋಚನ: ಶಿವ; ಬಾಳು: ಬದುಕು, ಜೀವನ; ಉದ್ದಂಡ: ದರ್ಪ, ಗರ್ವ; ಕೋದಂಡ: ಬಿಲ್ಲು, ಧನಸ್ಸು; ಜೇವೊಡೆ: ಧನುಷ್ಟಂಕಾರ ಮಾಡು; ಜಗ: ಪ್ರಪಂಚ; ಅಲ್ಲಾಡು: ಕದಡು; ಕೊರಳು: ಗಂಟಲು; ಕೆದರು: ಹರಡು; ಕುಸಿ: ಜರಿಯುವಿಕೆ, ಕುಸಿತ; ಅಹಿ: ಹಾವು; ಪಾತಾಳ: ಅಧೋಲೋಕ; ಗೂಳೆ: ಆವರಣ; ತೆಗೆ: ಹೊರತರು; ಅಳ್ಳಿರಿ: ನಡುಗಿಸು; ಬಿಲು: ಬಿಲ್ಲು; ರಭಸ: ವೇಗ;
ಪದವಿಂಗಡಣೆ:
ಬಾಲನ್+ಎನ್ನದಿರ್+ಎನುತ +ರಿಪುಭಟ
ಭಾಳಲೋಚನನ್+ಎನಿಸುವ್+ಅರ್ಜುನ
ಬಾಳುಗ್+ಎನುತ್+ಉದ್ದಂಡ +ಕೋದಂಡವನು +ಜೇವೊಡೆಯೆ
ಮೇಲು +ಜಗವಲ್ಲಾಡಿದವು +ಕೊರ
ಳೋಳಿ +ಕೆದರಿತು +ಕುಸಿದನ್+ಅಹಿ +ಪಾ
ತಾಳ +ಗೂಳೆಯ +ತೆಗೆಯಲ್+ಅಳ್ಳಿರಿಯಿತ್ತು +ಬಿಲು +ರಭಸ
ಅಚ್ಚರಿ:
(೧) ಅಭಿಮನ್ಯುವನ್ನು ಕರೆದ ಪರಿ – ರಿಪುಭಟಭಾಳಲೋಚನನೆನಿಸುವ