ಪದ್ಯ ೯: ರಾಜರನ್ನು ಧರ್ಮರಾಯ ಹೇಗೆ ಬೀಳ್ಕೊಟ್ಟನು?

ರಾಜವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜರಥ
ವಾಜಿ ವಿವಿಧಾಭರಣ ವಸನ ವಧೂಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ (ಸಭಾ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗಕ್ಕೆ ಬಂದಿದ್ದ ರಾಜರನ್ನೆಲ್ಲಾ ಅವರವರ ಪರಾಕ್ರಮ, ಐಶ್ವರ್ಯಕ್ಕೆ ಅನುಗುಣವಗಿ ಸರಿಯಾದ ರೀತಿಯಲ್ಲಿ ಆನೆ, ಕುದುರೆ, ರಥ, ಆಭರಣ, ವಸ್ತ್ರ, ಸ್ತ್ರೀಯರು, ಪರಿಮಳದ ವಸ್ತುಗಳನ್ನು ನೀಡಿ ಗೌರವಿಸಿ ಧರ್ಮರಾಜನು ತನ್ನ ತಮ್ಮಂದಿರೊಡನೆ ಅವರೆಲ್ಲರನ್ನು ಬೀಳ್ಕೊಟ್ಟನು. ಕೃಷ್ಣನು ಇಂದ್ರಪ್ರಸ್ಥದಲ್ಲೇ ಉಳಿದನು.

ಅರ್ಥ:
ರಾಜ: ಅರಸ; ವರ್ಗ: ಗುಂಪು; ನಿಜ: ಸತ್ಯ; ತೇಜ: ಕಾಂತಿ, ಶ್ರೇಷ್ಠತೆ; ಮಾನ: ಮರ್ಯಾದೆ, ಗೌರವ; ಉಚಿತ: ಸರಿಯಾದ; ಗಜ: ಆನೆ; ರಥ; ಬಂಡಿ; ವಾಜಿ: ಕುದುರೆ; ವಿವಿಧ: ಹಲವಾರು; ಆಭರಣ: ಒಡವೆ; ವಸನ: ಬಟ್ಟೆ; ವಧು: ಸ್ತ್ರೀ, ಹೆಣ್ಣು; ಕದಂಬ: ಪರಿಮಳ ವಸ್ತು; ಜಗತ್ಪತಿ: ಜಗತ್ತಿನ ಒಡೆಯ (ಕೃಷ್ಣ); ಉಳಿ: ತಂಗು; ಪಾರ್ಥಿವ: ರಾಜ; ಮನ್ನಿಸು: ಗೌರವಿಸು; ಅನುಜ: ತಮ್ಮ; ಕೂಡಿ: ಜೊತೆ; ಕಳುಹಿಸು: ಬೀಳ್ಕೊಡು; ಮಹೀಶ್ವರ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ರಾಜವರ್ಗವನ್+ಅವರವರ +ನಿಜ
ತೇಜ +ಮಾನ್ಯ+ಉಚಿತದ +ಗಜ+ರಥ
ವಾಜಿ +ವಿವಿಧ+ಆಭರಣ+ ವಸನ +ವಧೂ+ಕದಂಬದಲಿ
ಆ +ಜಗತ್ಪತಿ+ಉಳಿಯೆ +ಪಾರ್ಥಿವ
ರಾಜಿಯನು +ಮನ್ನಿಸಿ +ಯುಧಿಷ್ಠಿರ
ರಾಜನ್+ಅನುಜರು +ಕೂಡಿ +ಕಳುಹಿಸಿದನು +ಮಹೀಶ್ವರರ

ಅಚ್ಚರಿ:
(೧) ರಾಜ, ಪಾರ್ಥಿವ – ಸಮನಾರ್ಥಕ ಪದ
(೨) ರಾಜ – ೧, ೬ ಸಾಲಿನ ಮೊದಲ ಪದ
(೩) ವಾಜಿ, ರಾಜಿ – ಪ್ರಾಸ ಪದಗಳು

ಪದ್ಯ ೭: ಶ್ರೀಕೃಷ್ಣನಿಗೆ ಅರ್ಘ್ಯವನ್ನು ಹೇಗೆ ಸಮರ್ಪಿಸಿದರು?

ತಂದು ಮಣಿಮಯ ಪಡಿಗದಲಿ ಗೋ
ವಿಂದನಂಘ್ರಿಯ ತೊಳೆದು ಗಂಗೆಯ
ತಂದೆವೀಗಳೆ ತಾವೆನುತ ತಮ್ಮುತ್ತಮಾಂಗದಲಿ
ವಂದಿಸುತ ವೈದಿಕದ ಪರಿವಿಡಿ
ಯಿಂದ ಮಧುಪರ್ಕಾದಿ ಪೂಜೆಗ
ಳಿಂದ ಸತ್ಕರಿಸಿದರು ಸಚರಾಚರ ಜಗತ್ಪತಿಯ (ಸಭಾ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಮಣಿಖಚಿತವಾದ ಕಲಶದಾಲಿ ನೀರನ್ನು ತಂದು ಶ್ರೀಕೃಷ್ಣನ ಪಾದಗಳನ್ನು ತೊಳೆದು ತೀರ್ಥವನ್ನು ತಲೆಯ ಮೇಲೆ ಪ್ರೋಕ್ಷಿಸಿ, ಈ ನೀರು ದೇವನದಿಯಾದ ಗಂಗೆಯ ನೀರಿಗೆ ಸಮವೆಂದು ಹಿಗ್ಗಿದರು. ವೇದಾನುಸಾರ ಶ್ರೀಕೃಷ್ಣನಿಗೆ ವಂದಿಸಿ, ಮಧುಪರ್ಕಾದಿಗಳಿಂದ ಪೂಜಿಸಿ ಜಗದೊಡೆಯನಾದ ಕೃಷ್ಣನನ್ನು ಸತ್ಕರಿಸಿದರು.

ಅರ್ಥ:
ತಂದು: ಕೊಂಡು; ಮಣಿಮಯ: ರತ್ನಗಳಿಂದ ಕೂಡಿದ; ಪಡಿಗ: ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ಅಂಘ್ರಿ: ಪಾದ; ತೊಳೆದು: ಸ್ವಚ್ಛಗೊಳಿಸು; ಉತ್ತಮಾಂಗ: ಶಿರ; ವಂದಿಸು: ನಮಸ್ಕರಿಸು; ಪರಿವಿಡಿ:ಅನುಕ್ರಮ, ರೀತಿ; ಮಧುಪರ್ಕ: ಮೊಸರು, ತುಪ್ಪ, ಹಾಲು, ಜೇನು ತುಪ್ಪ, ಸಕ್ಕರೆ – ಈ ಐದರ ಮಿಶ್ರಣ; ಆದಿ: ಮೊದಲಾದ; ಪೂಜೆ: ಆರಾಧನೆ; ಸತ್ಕರಿಸು: ಗೌರವಿಸು; ಚರಾಚರ: ಚಲಿಸುವ, ಚಲಿಸದ; ಜಗತ್ತು: ವಿಶ್ವ; ಜಗತ್ಪತಿ: ಜಗತ್ತಿನ ಒಡೆಯ;

ಪದವಿಂಗಡಣೆ:
ತಂದು +ಮಣಿಮಯ +ಪಡಿಗದಲಿ +ಗೋ
ವಿಂದನ್+ಅಂಘ್ರಿಯ +ತೊಳೆದು +ಗಂಗೆಯ
ತಂದೆವ್+ಈಗಳೆ+ ತಾವ್+ಎನುತ +ತಮ್ಮ+ಉತ್ತಮಾಂಗದಲಿ
ವಂದಿಸುತ +ವೈದಿಕದ+ ಪರಿವಿಡಿ
ಯಿಂದ +ಮಧುಪರ್ಕಾದಿ +ಪೂಜೆಗ
ಳಿಂದ +ಸತ್ಕರಿಸಿದರು+ ಸಚರಾಚರ+ ಜಗತ್ಪತಿಯ

ಅಚ್ಚರಿ:
(೧) ಇಂದ – ೫, ೬ ಸಾಲಿನ ಮೊದಲ ಪದ
(೨) ತಂದು, ತಂದೆವು – ೧, ೩ ಸಾಲಿನ ಮೊದಲ ಪದ – ಪದಗಳ ಬಳಕೆ