ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆಂದು
ಕಂತುಪಿತ ಸನ್ನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ (ಆದಿ ಪರ್ವ, ೪ ಸಂಧಿ, ೪೬ ಪದ್ಯ)
ತಾತ್ಪರ್ಯ:
ಅಯ್ಯೋ ಮರುಳೇ, ಗಾಂಧಾರಿ, ನೀನು ಚಿಂತೆ ಮಾಡದೇ ನೂರು ದಿನಗಳ ಕಾಲ ಈ ಕೊಪ್ಪರಿಗಳನ್ನು ರಕ್ಷಿಸು ಆಮೇಲೆ ನಿನ್ನ ಮಕ್ಕಳ ಸಾಮರ್ಥ್ಯವನ್ನು ನೋಡು ಎಂದು ಹೇಳಿ ವಿಷ್ಣು ಸದೃಶನಾದ ವೇದವ್ಯಾಸರು ಗಾಂಧಾರಿಯನ್ನು ಸಂತೈಸಿ ಹಿಂದಿರುಗಿ ಹೋದನು. ಇತ್ತ ರಾಜ ಜನಮೇಜಯ ಕಾಡಿನಲ್ಲಿ ಭೀಮನ ಆಗಮನವನ್ನು ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.
ಅರ್ಥ:
ಚಿಂತೆ: ಯೋಚನೆ; ನೂರು: ಶತ; ದಿನ: ವಾರ; ಪರಿಯಂತ: ಅಲ್ಲಿಯವರೆಗೆ; ರಕ್ಷಿಸು: ಕಾಪಾಡು; ಬಳಿಕ: ನಂತರ; ಸಂತತಿ: ವಂಶ; ಸಾಮರ್ಥ್ಯ: ಶಕ್ತಿ; ನೋಡು: ವೀಕ್ಷಿಸು; ಕಂತುಪಿತ: ವಿಷ್ಣು; ಸನ್ನಿಭ: ಸದೃಶ; ಸತಿ: ಹೆಣ್ಣು; ಸಂತವಿಸು: ಸಮಾಧಾನ ಪಡಿಸು; ಮರಳು: ಹಿಂದಿರುಗು; ಧರಣೀಕಾಂತ: ರಾಜ; ಕೇಳು: ಆಲಿಸು; ಬನ: ಕಾಡು; ಉದ್ಭವ: ಹುಟ್ಟು;
ಪದವಿಂಗಡಣೆ:
ಚಿಂತೆಯಿಲ್ಲದೆ+ ನೂರುದಿನ+ ಪರಿ
ಯಂತ +ರಕ್ಷಿಸು +ಬಳಿಕ +ನಿನ್ನಯ
ಸಂತತಿಯ +ಸಾಮರ್ಥ್ಯವನು +ಗಾಂಧಾರಿ +ನೋಡೆಂದು
ಕಂತುಪಿತ +ಸನ್ನಿಭನು +ಸತಿಯನು
ಸಂತವಿಸಿ +ಮರಳಿದನು +ಧರಣೀ
ಕಾಂತ +ಕೇಳೈ +ಬನದೊಳ್+ಇತ್ತಲು +ಭೀಮನ್+ಉದ್ಭವವ
ಅಚ್ಚರಿ:
(೧) ವ್ಯಾಸರನ್ನು ಕಂತುಪಿತ ಸನ್ನಿಭ ಎಂದು ಕರೆದಿರುವುದು
(೨) ಜನಮೇಜಯನನ್ನು ಧರಣೀಕಾಂತ ಎಂದು ಕರೆದಿರುವುದು