ಪದ್ಯ ೫: ಅರ್ಜುನನು ಏನೆಂದು ಘೋಷಿಸಿದನು?

ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಶಿವಶಿವಾ ಸೈನ್ಯವು ಹೋರಾಡಿ ಬಳಲಿದೆ, ನಿದ್ದೆಯ ಕಾಟ ಹೆಚ್ಚಿದೆ, ಕತ್ತಲು ಹೋಗುವವರೆಗೂ ಯುದ್ಧಬೇಡ, ಎಂದು ಚಿಂತಿಸಿ ಸೈನ್ಯಕ್ಕೆ ಲಗ್ಗೆಯನ್ನು ನಿಲ್ಲಿಸಿ ಎಂದು ಅರ್ಜುನನು ಗಂಭೀರ ಘೋಷ ಮಾಡಿದನು.

ಅರ್ಥ:
ಬಳಲು: ಆಯಾಸಗೊಳ್ಳು; ಅವಗಡಿಸು: ಕಡೆಗಣಿಸು; ನಿದ್ದೆ: ಶಯನ; ನೂಕು: ತಳ್ಳು; ಬವರ: ಕಾಳಗ, ಯುದ್ಧ; ಉಬ್ಬು: ಹೆಚ್ಚಾಗು; ತಿಮಿರ: ಕತ್ತಲೆ; ಸಾಕು: ನಿಲ್ಲು ರಣ: ಯುಚ್ಛ; ದಿವಿಜಪತಿ: ದೇವತೆಗಳ ಒಡೆಯ (ಇಂದ್ರ); ಸುತ: ಪುತ್ರ; ಎದ್ದು: ಮೇಲೇಳು; ನಿವಹ: ಗುಂಪು; ಸಾರು: ಹತ್ತಿರಕ್ಕೆ ಬರು; ಲಗ್ಗೆ: ಆಕ್ರಮಣ; ರವ: ಶಬ್ದ; ನಿಲಿಸು: ನಿಲ್ಲು; ಘನ: ಗಟ್ಟಿ; ಗಂಭೀರ: ಆಳವಾದ, ಗಹನವಾದ; ನಾದ: ಶಬ್ದ;

ಪದವಿಂಗಡಣೆ:
ಶಿವಶಿವಾ +ಬಳಲಿದುದು +ಬಲವಗಿದ್
ಅವಗಡಿಸಿದುದು +ನಿದ್ದೆ +ನೂಕದು
ಬವರವ್+ಉಬ್ಬಿದ +ತಿಮಿರವಳಿಯಲಿ +ಸಾಕು +ರಣವೆನುತ
ದಿವಿಜಪತಿಸುತನ್+ಎದ್ದು +ಸೇನಾ
ನಿವಹದಲಿ +ಸಾರಿದನು +ಲಗ್ಗೆಯ
ರವವ+ ನಿಲಿಸಿದನ್+ಅಖಿಳ +ಘನಗಂಭೀರ+ನಾದದಲಿ +ಪಾರ್ಥ

ಅಚ್ಚರಿ:
(೧) ಅರ್ಜುನನನ್ನು ದಿವಿಜಪತಿಸುತ ಎಂದು ಕರೆದಿರುವುದು
(೨) ಬವರ, ರಣ – ಸಮಾನಾರ್ಥಕ ಪದಗಳು

ಪದ್ಯ ೨೨: ರಣವಾದ್ಯಗಳ ಶಬ್ದವು ಹೇಗಿತ್ತು?

ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಪೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜ ಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ (ದ್ರೋಣ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಯುದ್ಧಕ್ಕೆ ಅತಿ ಉತ್ಸಾಹದಿಂದ ಹೊರಟಿತು. ತಮ್ಮಟೆ, ಡಮರುಗ, ಮೃದಮ್ಗ, ಭೇರಿ, ಕಹಳೆಗಳು ಮೊಳಗುತ್ತಿದ್ದವು. ರಣವಾದ್ಯಗಳ ಶಬ್ದವು ಎಲ್ಲೆಡೆ ವ್ಯಾಪಿಸಲು, ಬ್ರಹ್ಮಾಂಡವು ಬಿರಿಯಿತು. ದ್ರೋಣನ ಸಮರಸನ್ನಾಹ ಪ್ರಬಲವಾಗಿತ್ತು.

ಅರ್ಥ:
ಲಟಕಟ: ಉದ್ರೇಕಗೊಳ್ಳು; ಆಹವ: ಯುದ್ಧ; ರಾಯ: ರಾಜ; ಕಟಕ: ಸೈನ್ಯ; ಸುಮ್ಮಾನ: ಸಂತೋಷ, ಹಿಗ್ಗು; ಪಟಹ: ನಗಾರಿ; ಡಮರು: ಒಂದು ಬಗೆಯ ಚರ್ಮವಾದ್ಯ; ಮೃದಂಗ: ಒಂದು ಬಗೆಯ ಚರ್ಮವಾದ್ಯ/ತಾಳವಾದ್ಯ; ಘನ: ಶ್ರೇಷ್ಠ; ಗಂಭೀರ: ಆಳವಾದುದು, ಗಾಂಭೀರ್ಯ; ಭೇರಿ: ಚರ್ಮವಾದ್ಯ; ಚಟುಳ: ಲವಲವಿಕೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಗಜರು: ಆರ್ಭಟಿಸು; ಮಿಗಲು: ಹೆಚ್ಚು; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಅಂಬುಜ: ತಾವರೆ; ಭವನ: ಮನೆ; ನಿರ್ಮಿತ: ಕಟ್ಟಿದ; ಘಟ: ಕೊಡ, ಗಡಿಗೆ; ಬಿರಿ: ತುಂಬು; ಬಿಗುಹು: ಗಟ್ಟಿ; ಸಮರ: ಯುದ್ಧ; ಸನ್ನಾಹ: ಗುಂಪು;

ಪದವಿಂಗಡಣೆ:
ಲಟಕಟಿಸಿತ್+ಆಹವಕೆ +ರಾಯನ
ಕಟಕ +ಸುಮ್ಮಾನದಲಿ +ಪೊಳಗುವ
ಪಟಹ +ಡಮರು +ಮೃದಂಗ +ಘನಗಂಭೀರ +ಭೇರಿಗಳ
ಚಟುಳ +ಕಹಳೆಯ +ಗಜರು +ಮಿಗಲ್
ಉತ್ಕಟಿಸಿತ್+ಅಂಬುಜ +ಭವನ +ನಿರ್ಮಿತ
ಘಟ +ಬಿರಿಯೆ +ಬಿಗುಹಾಯ್ತು +ದ್ರೋಣನ +ಸಮರ+ಸನ್ನಾಹ

ಅಚ್ಚರಿ:
(೧) ರಣವಾದ್ಯಗಳ ಪರಿಚಯ – ಪಟಹ, ಡಮರು, ಮೃದಂಗ, ಭೇರಿ, ಕಹಳೆ
(೨) ಬ್ರಹ್ಮಾಂಡ ಎಂದು ಹೇಳುವ ಪರಿ – ಮಿಗಲುತ್ಕಟಿಸಿತಂಬುಜ ಭವನ ನಿರ್ಮಿತ ಘಟ ಬಿರಿಯೆ ಬಿಗುಹಾಯ್ತು

ಪದ್ಯ ೨೨: ಕರ್ಣನು ಭೀಮನೊಡನೆ ಹೇಗೆ ಯುದ್ಧ ಮಾಡಿದನು?

ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಆರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ (ದ್ರೋಣ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೋ ಭೀಮ, ನುಗ್ಗುನುಸಿಗಳನ್ನು ಬಡಿದು ಬಂಡು ವೃಥ ಅಹಂಕಾರದಿಂದ ಸಾಹಸ ಮಾಡಲು ಬಂದರೆ ಇಲ್ಲಿ ನಡೆಯುವುದಿಲ್ಲ. ನಾನು ಕರ್ಣ, ಎನ್ನುತ್ತಾ ಗರ್ಜಿಸಿ ಭೀಮನನ್ನು ಐದು ಬಾಣಗಳಿಂದ ಹೊಡೆಯಲು ಭೀಮನು ಗಂಭೀರ ಶಬ್ದಗಳಿಂದ ಕರ್ಣನಿಗೆ ಹೀಗೆ ಹೇಳಿದನು.

ಅರ್ಥ:
ಸಾರು: ಪ್ರಕಟಿಸು, ಘೋಷಿಸು; ವೃಥ: ಸುಮ್ಮನೆ; ಅಹಂಕಾರ: ಗರ್ವ; ನುಗ್ಗು: ಳ್ಳಿಕೊಂಡು ಮುಂದೆ ಸರಿ; ಸದೆ: ಹೊಡಿ, ಬಡಿ; ಕಠೋರ: ಬಿರುಸಾದ; ಸಾಹಸ: ಪರಾಕ್ರಮ; ಕೊಳ್ಳು: ಪಡೆ; ಅಂಬು: ಬಾಣ; ಪವನಕುಮರ: ವಾಯುಪುತ್ರ (ಭೀಮ); ಮೇಘ: ಮೋಡ; ಘನ: ಶ್ರೇಷ್ಠ; ಗಂಭೀರ: ಆಳವಾದ; ರವ: ಶಬ್ದ; ನುಡಿ: ಮಾತಾಡಿಸು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಸಾರ್+ಎಲವೊ +ಸಾಯದೆ +ವೃಥ+ಅಹಂ
ಕಾರವ್+ಏತಕೆ +ನುಗ್ಗ +ಸದೆದ +ಕ
ಠೋರ+ ಸಾಹಸವ್+ಇಲ್ಲಿ +ಕೊಳ್ಳದು +ಕರ್ಣ +ತಾನೆನುತ
ಆರಿದ್+ಐದಂಬಿನಲಿ +ಪವನಕು
ಮಾರಕನನ್+ಎಸೆ +ಮೇಘ +ಘನ+ಗಂ
ಭೀರ + ರವದಲಿ +ಭೀಮ +ನುಡಿದನು +ಭಾನುನಂದನನ

ಅಚ್ಚರಿ:
(೧) ಪವನಕುಮಾರ, ಭಾನುನಂದನ – ಕರ್ಣ ಮತ್ತು ಭೀಮರನ್ನು ಕರೆದ ಪರಿ
(೨) ಭೀಮನ ಆರ್ಭಟ – ಮೇಘ ಘನಗಂಭೀರರವದಲಿ ಭೀಮ ನುಡಿದನು

ಪದ್ಯ ೪೯: ಅರ್ಜುನನನ್ನು ಯಾರು ಮುತ್ತಿದರು?

ಓಡಿದಾಳಲ್ಲಲ್ಲಿ ಧೈರ್ಯವ
ಮಾಡಿತೆಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದೊಳು
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನಗಂಭೀರ ಭೇರಿಯ ಬಹಳ ರಭಸದೊಳು (ವಿರಾಟ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಷ್ಮನು ಬಂದುದನ್ನು ನೋಡಿ ಓಡಿ ಹೋಗುತ್ತಿದ್ದ ಸೈನಿಕರು ಧೈರ್ಯಮಾಡಿ ಕೂಡಿಕೊಂಡರು. ಭಯದ ಆರ್ತನಾದ ನಿಂತುಹೋಯಿತು, ಚತುರಂಗ ಸೈನ್ಯವು ಒಂದಾಗಿ ಕೂಡಿ ಭೇರಿ ನಿನಾದವನ್ನು ಮಾಡುತ್ತಾ ಅರ್ಜುನನನ್ನು ಮುತ್ತಿತು.

ಅರ್ಥ:
ಓಡು: ಧಾವಿಸು; ಆಳು: ಸೈನಿಕ; ಧೈರ್ಯ: ಎದೆಗಾರಿಕೆ, ಕೆಚ್ಚು; ಒಗ್ಗು: ಒಟ್ಟುಗೂಡು, ಗುಂಪಾಗು; ಹುರಿ: ಕೆಚ್ಚು, ಬಲ; ಅಬ್ಬರ: ಜೋರಾದ ಶಬ್ದ; ಮಗುಳೆ: ಮತ್ತೆ; ನಿಬ್ಬರ:ಅತಿಶಯ, ಹೆಚ್ಚಳ; ನಿಮಿಷ: ಕ್ಷಣಮಾತ್ರದೊಳು; ಕೂಡೆ; ಜೊತೆಗೂಡು; ಗರಿಗಟ್ಟು: ಶಕ್ತಿಶಾಲಿಯಾಗು; ಚತುರ್ಬಲ: ಚತುರಂಗ ಸೈನ್ಯ; ಜೋಡು: ಜೊತೆ; ಕವಿ: ಆವರಿಸು; ಕೂಡೆ: ಜೊತೆ; ಘನ: ಶ್ರೇಷ್ಠ, ಗಾಢ; ಗಂಭೀರ: ಆಳವಾದುದು; ಭೇರಿ: ಡಂಗುರ, ನಗಾರಿ; ರಭಸ: ವೇಗ;

ಪದವಿಂಗಡಣೆ:
ಓಡಿದ್+ಆಳ್+ಅಲ್ಲಲ್ಲಿ +ಧೈರ್ಯವ
ಮಾಡಿತೆಚ್ಚಾಳ್+ಒಗ್ಗಿನಲಿ +ಹುರಿ
ಗೂಡಿತ್+ಅಬ್ಬರ +ಮಗುಳೆ +ನಿಬ್ಬರವಾಯ್ತು +ನಿಮಿಷದೊಳು
ಕೂಡೆ +ಗರಿಗಟ್ಟಿತು +ಚತುರ್ಬಲ
ಜೋಡು +ಮಾಡಿತು +ಕವಿದುದ್+ಈತನ
ಕೂಡೆ +ಘನಗಂಭೀರ +ಭೇರಿಯ +ಬಹಳ +ರಭಸದೊಳು

ಅಚ್ಚರಿ:
(೧) ಗರಿಗಟ್ಟು, ಹುರಿಗೂದು, ದೈರ್ಯವಮಾಡು – ಸಾಮ್ಯಾರ್ಥ ಪದಗಳು

ಪದ್ಯ ೨೨: ಕೃಷ್ಣನ ಬೀಳ್ಕೊಡುಗೆ ಹೇಗೆ ನಡೆಯಿತು?

ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀರ್ವಾದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನಗಂಭೀರ ಭೇರಿಗಳು (ಸಭಾ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಒಂದು ಶುಭದಿನದಂದು, ಶುಭ ನಕ್ಷತ್ರ, ತಿಥಿ, ವಾರ, ರಾಶಿ, ಮುಹೂರ್ತದಲ್ಲಿ ಶ್ರೀಕೃಷ್ಣನು ದ್ವಾರಕೆಗೆ ಇಂದ್ರಪ್ರಸ್ಥನಗರದಿಂದ ಪ್ರಯಾಣಕ್ಕೆ ಸಿದ್ಧನಾದನು. ಬ್ರಾಹ್ಮಣರು ಆಶೀರ್ವಾದ ಮಾಡಿದರು, ಆಗ ಭಯಂಕರವಾದ ಭೇರಿಯ ನಿನಾದವು ಎಲ್ಲಡೆ ಗರ್ಜಿಸಿತು.

ಅರ್ಥ:
ಶುಭ: ಮಂಗಳ; ಗ್ರಹ: ಆಕಾಶಚರಗಳು; ಉದಯ: ಹುಟ್ಟು; ತಿಥಿ: ದಿನ; ರಾಶಿ: ಮೇಶ ಇತ್ಯಾದಿ ನಕ್ಷತ್ರಗಳ ಗುಂಪು; ನಕ್ಷತ್ರ: ತಾರ; ಪುಣ್ಯ: ಒಳ್ಳೆಯ; ಭಾಸ: ಹೊಳಪು, ಕಾಂತಿ, ತೋರು; ಮುಹೂರ್ತ: ಸಮಯ; ಸುಸ್ವರ: ನಿನಾದ, ನಾದ; ವಿಳಾಸ: ಉಲ್ಲಾಸ, ಅಂದ, ಸೊಬಗು; ಭೂಸುರ: ಬ್ರಾಹ್ಮಣ; ಆಶೀರ್ವಾದ: ಅನುಗ್ರಹ; ಪಯಣ: ಪ್ರಯಾಣ; ಕಟ್ಟಾಸುರ: ಅತ್ಯಂತ ಭಯಂಕರ; ಒದರು: ಕಿರುಚು, ಗರ್ಜಿಸು; ಘನ: ಶ್ರೇಷ್ಠ; ಗಂಭೀರ: ಆಳವಾದ, ಗಹನವಾದ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ;

ಪದವಿಂಗಡಣೆ:
ಆ +ಶುಭ+ಗ್ರಹದ್+ಉದಯದಲಿ +ತಿಥಿ
ರಾಶಿ +ನಕ್ಷತ್ರಾದಿ +ಪುಣ್ಯೋದ್
ಭಾಸಮಾನ +ಮುಹೂರ್ತದಲಿ+ ಸುಸ್ವರ +ವಿಳಾಸದಲಿ
ಭೂಸುರ+ಆಶೀರ್ವಾದದಲಿ +ಲ
ಕ್ಷ್ಮೀಶ +ಪಯಣವ +ಮಾಡಿದನು +ಕ
ಟ್ಟಾಸುರದಲ್+ಒದರಿದವು +ಘನಗಂಭೀರ+ ಭೇರಿಗಳು